Monday, September 3, 2007

ಬ್ಯಾಟರಿ - ಇನ್ನು ಮುಂದೆ ಅರ್ಧಕ್ಕೇ ಕೈ ಕೊಡೋದಿಲ್ರಿ?

ಮೊಬೈಲ್ ಫೋನ್ ಬಳಕೆದಾರರು ಎದುರಿಸುವ ಅತಿ ದೊಡ್ಡ ಸಮಸ್ಯೆ ಅದಕ್ಕೆ ಶಕ್ತಿ ಪೂರೈಸುವ ಬ್ಯಾಟರಿಯದು. ಯಾವ ಸಮಯದಲ್ಲಿ ದಿಢೀರೆಂದು ಬ್ಯಾಟರಿಗಳು ಕೈಕೊಡುತ್ತದೆಂದು ಊಹಿಸಲಾಗುವುದಿಲ್ಲ. ನಮ್ಮ ಕಾರು, ಸ್ಕೂಟರುಗಳಲ್ಲಿ ಪೆಟ್ರೋಲು ಇನ್ನೆಷ್ಟು ಉಳಿದಿದೆ ಎಂಬ ಅಂದಾಜು ಮಟ್ಟವನ್ನು ಸದಾ ಕಾಲ ನೀಡುವ ವ್ಯವಸ್ಥೆ ಇರುತ್ತದೆ. ಇಂಥದೊಂದು ಸುಲಭ ವ್ಯವಸ್ಥೆಯನ್ನು ನೀವು ರೂಪಿಸಲು ಸಾಧ್ಯವಿಲ್ಲವೆ? ಎಂದು ಬ್ಯಾಟರಿ ತಂತ್ರಜ್ಞರನ್ನೊ ಅಥವಾ ವಿದ್ಯುತ್ ಎಂಜಿನೀರ್‌ಗಳನ್ನೊ ಲೇವಡಿ ಮಾಡಿ ನೋಡಿ. ವಿದ್ಯುತ್ ಆಘಾತಕ್ಕಿಂತಲೂ ಪ್ರಬಲವಾದ ‘ಶಾಕ್’ ಒಂದನ್ನು ಅವರು ನೀಡಲೆತ್ನಿಸುತ್ತಾರೆ - ತಮ್ಮ ಪ್ರವಚನದ ಮೂಲಕ. ಪದೇ, ಪದೇ ಚಾರ್ಜ್ ಮಾಡುವ ಮೂಲಕ ವಿದ್ಯುತ್ ಶಕ್ತಿಯನ್ನು ಕ್ರೋಢೀಕರಿಸಿಕೊಳ್ಳಬಲ್ಲ ಬ್ಯಾಟರಿಗಳು ದೀರ್ಘಾವಧಿ ಕಾರ್ಯನಿರ್ವಹಿಸಬೇಕಾದರೆ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕು. ಅದರಲ್ಲಿ ಸಂಗ್ರಹವಾಗಿರುವ ವಿದ್ಯುತ್ ಶಕ್ತಿಯನ್ನು ಪೂರ್ಣವಾಗಿ ಬಳಸಿದ ನಂತರವೇ ಚಾರ್ಜ್ ಮಾಡಲು ಯತ್ನಿಸಬೇಕು. ಈ ರೀತಿ ಚಾರ್ಜ್ ಮಾಡುವಾಗ ವಿದ್ಯುತ್ ಪೂರೈಕೆಯಲ್ಲಿ ಯಾವ ಅಡೆ ತಡೆಗಳು ಇರಬಾರದು. ಪೂರ್ತಿ ಚಾರ್ಜ್ ಆದ ನಂತರವೇ ವಿದ್ಯುತ್ ಸಂಪರ್ಕದಿಂದ ಹೊರತೆಗೆಯಬೇಕು. ಇತ್ಯಾದಿ. ಸಂಪೂರ್ಣವಾಗಿ ನಿಶ್ಚೇತನವಾಗುವ ತನಕ ಬ್ಯಾಟರಿಯನ್ನು ಬಳಸುವುದು ಅಸಾಧ್ಯ. ಮುಖ್ಯವಾದ ಕರೆಯೊಂದನ್ನು ಮಾಡುತ್ತಿರುವಾಗ ಮೊಬೈಲ್ ಫೋನ್ ಕೈ ಕೊಟ್ಟರೆ, ಹತ್ತಿರದಲ್ಲಿಯೇ ವಿದ್ಯುತ್ ಸಂಪರ್ಕ ಇರದಿರಬಹುದು. ಇದ್ದರೂ ಚಾರ್ಜರ್ ನಿಮ್ಮ ಸಂಗಡ ಇರದಿರಬಹುದು. ಹೀಗಾಗಿ ನಿತ್ಯ ಕೆಲಸ ಆರಂಭಿಸುವ ಮುನ್ನ, ಬ್ಯಾಟರಿಯಲ್ಲಿ ಎಷ್ಟು ವಿದ್ಯುತ್ ಇದೆ ಎಂಬುದನ್ನು ಗಮನಿಸದೆಯೆ, ಮೊಬೈಲ್ ಬಳಕೆದಾರರು ತಮ್ಮ ಬ್ಯಾಟರಿಗಳನ್ನು ಚಾರ್ಜ್ ಮಾಡಿಕೊಳ್ಳುತ್ತಾರೆ. ಇತ್ತ ನಿಯಮಬದ್ಧವಾಗಿ ಚಾರ್ಜ್ ಮಾಡಲು ಪ್ರಯತ್ನಿಸುವವರಿಗೆ ವಿದ್ಯುತ್ ಪೂರೈಕೆಯ ಕಣ್ಣು ಮುಚ್ಚಾಲೆಯ ಕಾಟ. ಒಟ್ಟಿನಲ್ಲಿ ಬ್ಯಾಟರಿ ಬಾಂಧವರ ಕಟ್ಟಳೆಗಳನ್ನು ಯಾರೂ ಪಾಲಿಸಲಾಗುವುದಿಲ್ಲ. ಬ್ಯಾಟರಿಗಳು ಒಂದೆರಡು ವರ್ಷದ ನಂತರ ನಿರುಪಯೋಗಿ ಆಗಲಿ ಬಿಡಿ. ಮತ್ತೊಂದು ಬ್ಯಾಟರಿ ಕೊಂಡರಾಯಿತು. ಆದರೆ ಕಾರು, ಸ್ಕೂಟರುಗಳಲ್ಲಿ ಇನ್ನೆಷ್ಟು ಪೆಟ್ರೋಲ್ ಉಳಿದಿದೆ ಎಂದು ತೋರಿಸುವ ಮೀಟರ್ ಒಂದನ್ನು ಬ್ಯಾಟರಿಗಳಿಗೆ ಹಾಕಿ ಕೊಟ್ಟರೆ ಸಾಕು ಎಂಬುದು ನಿಮ್ಮ ಹಾರೈಕೆ ಅಲ್ಲವೆ?

ಇದರಲ್ಲೇನು ಹೊಸತು? ನಮ್ಮ ಮೊಬೈಲ್ ಫೋನ್‌ಗಳಲ್ಲಿಯೇ ಒಂದರ ಮೇಲೊಂದು ಅಥವಾ ಒಂದರ ಪಕ್ಕದಲ್ಲೊಂದೊ ಕಡ್ಡಿಗಳ ಸಾಲಿರುತ್ತವೆ. ಅವುಗಳ ಸಂಖ್ಯೆ ಕಡಿಮೆಯಾದಂತೆಲ್ಲ ವಿದ್ಯುತ್ ಸಂಗ್ರಹ ಕಡಿಮೆಯಾಗುತ್ತಿದೆ ಎಂದು ಗೊತ್ತಾಗುತ್ತದೆ. ಇನ್ನು ಲ್ಯಾಪ್‍ಟಾಪ್ ಕಂಪ್ಯೂಟರ್‌ಗಳಲ್ಲಿ, ಅಂಗೈ ಗಣಕಗಳಲ್ಲಿ ತಮ್ಮ ಒಡಲೊಳಗಿರುವ ಬ್ಯಾಟರಿ ಇನ್ನೆಷ್ಟು ಕಾಲ ಕೆಲಸ ಮಾಡಬಲ್ಲದು ಎಂಬ ಸೂಚನೆಯೂ ಸಿಗುತ್ತದೆ. ಹಾಗಿದ್ದರೆ ಸಮಸ್ಯೆಯೇ ಇಲ್ಲ. ಆದರೆ ಈ ಎಲ್ಲ ಅಂದಾಜುಗಳೂ ಅಂದಾಜುಗಳಷ್ಟೇ ಆಗಿರುವುದೇ ಒಂದು ದೊಡ್ಡ ಸಮಸ್ಯೆ. ಉದಾಹರಣೆಗೆ ನಿಮ್ಮ ಮೊಬೈಲ್ ಫೋನಿಗೆ ಕರೆಯೊಂದು ಬಂದಿದೆ. ಮಾತನಾಡುತ್ತಿರುವಂತೆಯೇ ಬ್ಯಾಟರಿ ಶಕ್ತಿ ಕ್ಷೀಣಿಸುತ್ತಾ ಹೋಗುತ್ತದೆ. ಇನ್ನೇನು ಬ್ಯಾಟರಿ ಕೈಕೊಡುತ್ತದೆ ಎಂದು ಕರೆ ಮುಗಿಸಿ ಫೋನ್ ಬಂದ್ ಮಾಡುವಿರಿ, ಕೂಡಲೇ ತನ್ನಲ್ಲಿ ಇನ್ನೊಂದಷ್ಟು ಶಕ್ತಿಯಿದೆ ಎಂಬ ಸೂಚನೆ ಬರುತ್ತದೆ. ಇದಕ್ಕೆ ತದ್ವಿರುದ್ಧವಾಗಿ ನಿಮ್ಮ ಬ್ಯಾಟರಿಯಲ್ಲಿ ಇನ್ನೂ ಶಕ್ತಿಯಿದೆ ಎಂಬ ಸೂಚನೆ ಕಡ್ಡಿಗಳ ಮುಖಾಂತರ ಕಾಣುತ್ತೀರಿ. ಬ್ಯಾಟರಿ ಶಕ್ತಿ ಕಡಿಮೆಯಿದೆ ಎಂಬ ಎಚ್ಚರಿಕೆಯೊಂದಿಗೆ ನಿಮ್ಮ ಮೊಬೈಲ್ ಫೋನ್ ಸ್ವಯಂಚಾಲಿತವಾಗಿ ಬಂದಾಗುತ್ತದೆ. ಅಂದರೆ ಬ್ಯಾಟರಿಯಲ್ಲಿ ವಿದ್ಯುತ್ ಸಂಗ್ರಹಣೆ ಇನ್ನೆಷ್ಟಿದೆ, ಸಂಗ್ರಹವಾಗಿರುವ ಶಕ್ತಿಯನ್ನು ಇನ್ನೆಷ್ಟು ಕಾಲ ಬಳಸಬಹುದು ಎಂಬ ಅಂಶಗಳನ್ನು ನಿಖರವಾಗಿ ಕಂಡುಹಿಡಿಯಲಾಗುವುದಿಲ್ಲ. ಇದಕ್ಕೆ ಕಾರಣ ಬ್ಯಾಟರಿಯ ಶಕ್ತಿ ಸಂಗ್ರಹಣೆಯನ್ನು ಅಳೆಯುವ ಸಾಧನಗಳು ವಿದ್ಯುತ್ ಚಾಲಕ ಶಕ್ತಿ ಅಂದರೆ ವೋಲ್ಟೇಜ್‍ನ ಮಟ್ಟವನ್ನು ಮಾನಕವನ್ನಾಗಿ ಬಳಸುತ್ತವೆ. ವೊಲ್ಟೇಜ್ ಬ್ಯಾಟರಿಯ ಶಕ್ತಿ ಕ್ಷೀಣವಾದಂತೆ ಅದೇ ಅನುಪಾತದಲ್ಲಿ ಇಳಿಯುವುದಿಲ್ಲ. ಉದಾಹರಣೆಗೆ ಮೊಬೈಲ್ ಫೋನ್‍ನಲ್ಲಿ ಕರೆ ಮಾಡಿದೊಡನೆ ಸಂಕೇತಗಳು ರವಾನೆಯಾದಂತೆ ದಿಢೀರೆಂದು ವೋಲ್ಟೇಜ್ ಇಳಿದು ಬಿಡುತ್ತದೆ. ಈ ಇಳಿತವನ್ನು ವಿದ್ಯುತ್ ಶಕ್ತಿಯ ಇಳಿತ ಎಂದು ಗುರುತಿಸುವ ಸಾಮಾನ್ಯ ಅಳತೆಗೋಲು, ವಿದ್ಯುತ್ ಉಳಿತಾಯದ ತಂತ್ರಾಂಶವನ್ನು ಚಾಲನೆಗೊಳಿಸುತ್ತದೆ. ಗಾಭರಿಗೊಳ್ಳುವ ಮಟ್ಟದಲ್ಲಿ ಶಕ್ತಿ ಕ್ಷೀಣಿಸಿದೆ ಎಂದು ತಂತ್ರಾಂಶಕ್ಕೆ ಮನವರಿಕೆಯಾದರೆ, ಮೊಬೈಲ್ ಫೋನ್ ಅನ್ನು ಅದು ಬಂದ್ ಮಾಡುತ್ತದೆ. ಆದರೆ ವೋಲ್ಟೇಜ್‍ನ ಇಳಿಕೆ ಕ್ಷಣಿಕವಾಗಿದ್ದು, ಗಂಭೀರ ಮಟ್ಟದಲ್ಲಿರದಿದ್ದರೆ, ಫೋನಿನಲ್ಲಿ ಮಾತು ಮುಂದುವರಿದಂತೆ ವೋಲ್ಟೇಜ್ ತಹಬಂದಿಗೆ ಬರುತ್ತದೆ. ಬ್ಯಾಟರಿಯ ಬಳಕೆಯ ಅವಧಿಯಲ್ಲಿ ವೋಲ್ಟೇಜ್ ಯದ್ವಾ-ತದ್ವಾ ಏರಿಳಿಯುತ್ತದೆ. ಬ್ಯಾಟರಿಯ ‘ವಯಸ್ಸು’ ಏರಿದಂತೆ ವೋಲ್ಟೇಜ್ ಏರಿಳಿತಗಳೂ ಹೆಚ್ಚು-ಹೆಚ್ಚಾಗುತ್ತವೆ. ಜತೆಗೆ ಬ್ಯಾಟರಿಯ ತಾಪಮಾನವೂ ವೋಲ್ಟೇಜ್‍ನ ಮೇಲೆ ಪರಿಣಾಮ ಬೀರುತ್ತದೆ. ಇವೆಲ್ಲಕ್ಕೂ ಮಿಗಿಲಾಗಿ ಬ್ಯಾಟರಿಯ ವಿದ್ಯುತ್ ಬೇಡಿಕೆಗಳಿಗೆ ಅನುಗುಣವಾಗಿಯೂ ವೋಲ್ಟೇಜ್ ಮಟ್ಟದಲ್ಲಿ ಬದಲಾವಣೆಗಳಾಗುತ್ತವೆ. ಅಂದರೆ ಕೇವಲ ವೋಲ್ಟೇಜ್ ಒಂದನ್ನು ಗುರುತಿಸುವುದರ ಮೂಲಕ ಬ್ಯಾಟರಿಯೊಳಗೆ ಹುದುಗಿರುವ ವಿದ್ಯುತ್ ಪ್ರಮಾಣ ಎಷ್ಟರ ಮಟ್ಟಿಗಿದೆ ಎಂದು ನಿಖರವಾಗಿ ಅಳೆಯಲಾಗದು.

ಅಮೆರಿಕದ ‘ಟೆಕ್ಸಾಸ್ ಇನ್‍ಸ್ಟ್ರುಮೆಂಟ್ಸ್ - ಟಿ.ಐ.’ ಕಂಪನಿ ನಿಮಗೆ ಗೊತ್ತಿರಬಹುದು. ಬೆಂಗಳೂರಿನಲ್ಲಿ ಆರಂಭವಾದ ಮೊದಲ ವಿದೇಶಿ ಎಲೆಕ್ಟ್ರಾನಿಕ್ಸ್ ಕಂಪನಿಯದು. ನಾವೆಲ್ಲಾ ‘ಐ.ಟಿ. - ಮಾಹಿತಿ ತಂತ್ರಜ್ಞಾನ’ದ ಬಗ್ಗೆ ಹೆಚ್ಚಿನ ಅರಿವು ಮೂಡಿಸಿಕೊಳ್ಳುವ ಮುನ್ನವೇ ‘ಐ.ಟಿ.’ ಶಕೆಯನ್ನು ಬೆಂಗಳೂರಿಗೆ ತಂದ ಕೀರ್ತಿ ‘ಟಿ.ಐ.’ನದು. ಕಂಪ್ಯೂಟರ್ ಸೇರಿದಂತೆ ಎಲೆಕ್ಟ್ರಾನಿಕ್ಸ್‍ಗೆ ಸಂಬಂಧಿಸಿದ ಯಂತ್ರಾಂಶ ಹಾಗೂ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ‘ಟಿ.ಐ.’ನದು ಎತ್ತಿದ ಕೈ. ಈ ಕಂಪನಿಯು ಸದ್ಯಕ್ಕೆ ಮೊಬೈಲ್ ಫೋನ್ ಬ್ಯಾಟರಿಗಳಲ್ಲಿ ಉಳಿದಿರುವ ವಿದ್ಯುತ್ ಶಕ್ತಿಯನ್ನು ನಿಖರವಾಗಿ ಗುರುತಿಸಬಲ್ಲ ‘ಕಂಪ್ಯೂಟರ್ ಚಿಪ್’ ಒಂದನ್ನು ಅಭಿವೃದ್ಧಿಪಡಿಸಿದೆ. ಬ್ಯಾಟರಿಯಲ್ಲಿ ಹುದುಗಿರುವ ವಿದ್ಯುತ್ ಶಕ್ತಿಯನ್ನು ನಿಖರವಾಗಿ ಗುರುತಿಸಲು ಇದರಲ್ಲಿ ಕೇವಲ ವೋಲ್ಟೇಜ್ ಒಂದನ್ನು ಮಾತ್ರ ಅಳತೆ ಮಾಡುವುದಿಲ್ಲ. ಅದು ಅತಿ ಮುಖ್ಯ ವಿದ್ಯುತ್ ಗುಣ ಲಕ್ಷಣವಾದ ‘ಇಂಪಿಡೆನ್ಸ್’ ಅನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಈ ‘ಇಂಪಿಡೆನ್ಸ್’ ಅಂದರೆ ವಿದ್ಯುತ್ ಹರಿದಾಟಕ್ಕೆ ಎದುರಾಗುವ ಪ್ರತಿರೋಧದ ಅಳತೆ. ‘ಇಂಪಿಡೆನ್ಸ್’ ಬ್ಯಾಟರಿಯೊಂದರ ವಯಸ್ಸು, ತಾಪಮಾನ, ಹಾಗೂ ಬ್ಯಾಟರಿಯೊಂದಕ್ಕೆ ಎದುರಾಗುವ ವಿದ್ಯುತ್ ಬೇಡಿಕೆಗಳ ಮೇಲೆ ಅವಲಂಬಿತವಾಗಿರುತ್ತದೆ. ‘ಟಿ.ಐ.’ ಅಭಿವೃದ್ಧಿ ಪಡಿಸಿರುವ ಚಿಪ್‍ನಲ್ಲಿ ‘ಇಂಪಿಡೆನ್ಸ್’ ಅನ್ನು ಗಣನೆಗೆ ತೆಗೆದುಕೊಂಡು ‘ವಿದ್ಯುತ್ ಚಾಲಕ ಶಕ್ತಿ - ವೋಲ್ಟೇಜ್’ ಅನ್ನು ಅಳೆಯಲಾಗುತ್ತದೆ. ಹೀಗೆ ಮರು ಲೆಕ್ಕಾಚಾರ ಹಾಕಿದ ವೋಲ್ಟೇಜ್ ಮೂಲಕ ರೂಪಿಸಿದ ಅಳತೆಗೋಲು ಬ್ಯಾಟರಿಯ ಶಕ್ತಿ ಸಾಮರ್ಥ್ಯವನ್ನು ಬಹುತೇಕ ಸರಿಯಾಗಿ ನಿರ್ಧರಿಸುತ್ತದೆ.

ಹೀಗೆ ಹೊಸತಾಗಿ ನಿರ್ಮಿಸಲಾದ ಕಂಪ್ಯೂಟರ್ ಚಿಪ್ ಅನ್ನು ಮೊಬೈಲ್ ಫೋನಿನ ವಿದ್ಯುನ್ಮಾನ ಮಂಡಲಕ್ಕೆ ನೇರವಾಗಿ ಜೋಡಣೆ ಮಾಡಬಹುದು, ಇಲ್ಲವೆ ಬ್ಯಾಟರಿಗೇ ಹೊಂದಿಸಿಡಬಹುದು. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದೊಡನೆಯೆ ಅದರಲ್ಲಿ ಎಷ್ಟು ಶಕ್ತಿ ಸಂಚಯನೆಯಾಗಿದೆ ಎಂದು ಮೊದಲು ಗುರುತಿಸಿಕೊಳ್ಳುತ್ತದೆ. ಇದರ ಆಧಾರದ ಮೇಲೆ ಕಾಲಕ್ರಮೇಣ ಬ್ಯಾಟರಿಯಲ್ಲಿ ಶಕ್ತಿಯ ಬಳಕೆ ಹೇಗೆ ಸಾಗಿದೆ ಎಂದು ಗಮನಿಸುತ್ತಿರುತ್ತದೆ. ಒಮ್ಮೆಲೆ ವೋಲ್ಟೇಜ್ ಇಳಿಕೆಯಾದರೆ ಅದಕ್ಕೆ ಕಾರಣವೇನು ಎಂಬುದನ್ನು ತಕ್ಷಣವೇ ಗುರುತಿಸಿ, ತಕ್ಷಣದ ಇಳಿಕೆಯನ್ನು ಗಮನಕ್ಕೆ ತೆಗೆದುಕೊಳ್ಳದೆಯೆ ಉಳಿದ ಶಕ್ತಿಯು ಎಷ್ಟು ಕಾಲ ಬಳಕೆಗೆ ಬರಬಹುದು ಎಂದು ಲೆಕ್ಕ ಹಾಕುತ್ತದೆ. ಈ ಹಿಂದೆ ನಿರ್ಮಿಸಿದ ಯಾವುದೇ ಅಳತೆಗೋಲುಗಳು ಇಂಥ ಲೆಕ್ಕಾಚಾರಗಳನ್ನು ಹಾಕಲು ಸಾಮರ್ಥ್ಯ ಹೊಂದಿರಲಿಲ್ಲ. ‘ಮೋಟರೋಲ’ ಎಂಬ ಮೊಬೈಲ್ ಫೋನ್ ತಯಾರಿಕಾ ಕಂಪನಿಯ ಬಗ್ಗೆ ನಿಮಗೆ ತಿಳಿದಿರಬಹುದು. ಅಮೆರಿಕದ ಈ ಕಂಪನಿಯೂ ಸಹಾ ಬ್ಯಾಟರಿಯಲ್ಲಿ ಇನ್ನೆಷ್ಟು ಶಕ್ತಿ ಉಳಿದಿದೆ ಎಂದು ನಿಖರವಾಗಿ ಲೆಕ್ಕ ಹಾಕಬಲ್ಲ ಚಿಪ್ ಒಂದನ್ನು ನಿರ್ಮಿಸುತ್ತಿದೆ. ಇತ್ತ ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲಿ ಜಗನ್ಮಾನ್ಯವಾಗಿರುವ ‘ಇಂಟೆಲ್’ ಕಂಪನಿಯ ಧನ ಸಹಾಯದಿಂದ ರೂಪುಗೊಂಡಿರುವ ವಿದ್ಯುನ್ಮಾನ ಕಂಪನಿ ‘ಪವರ್ ಪ್ರಿಸೈಸ್’ ಕೂಡಾ ಬ್ಯಾಟರಿ ಶಕ್ತಿ ಎಷ್ಟಿದೆ ಎಂದು ಕಂಡು ಹಿಡಿಯಬಲ್ಲ ಚಿಪ್ ಅನ್ನು ವಿನ್ಯಾಸಗೊಳಿಸುತ್ತಿದೆ. ಒಂದು ನಿರ್ದಿಷ್ಟ ತಯಾರಿಕೆ ಹಾಗೂ ವಿನ್ಯಾಸದ ಬ್ಯಾಟರಿಯಲ್ಲಿ ವಿದ್ಯುತ್ ಹರಿದಾಟ, ಚಾಲಕ ಶಕ್ತಿಯ ಕ್ಷೀಣಿಸುವಿಕೆ ಮುಂತಾದ ಗಮನಾರ್ಹ ಗುಣಲಕ್ಷಣಗಳು ಕಾಲಕ್ರಮೇಣ ಹೇಗೆ ಬದಲಾಗುತ್ತದೆ? ಈ ಬದಲಾವಣೆಗಳು ಬ್ಯಾಟರಿಯೊಂದರ ಕಾರ್ಯಕ್ಷಮತೆಯ ಮೇಲೆ ಯಾವ ಪರಿಣಾಮಗಳನ್ನು ಬೀರುತ್ತವೆ? ಮುಂತಾದ ಅಂಶಗಳನ್ನು ನಿರ್ಧರಿಸಲು ಈ ಕಂಪನಿಗಳು ಬಹು ದೊಡ್ಡ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸುತ್ತಿವೆ. ಅವುಗಳೆಲ್ಲದರ ಫಲಿತಾಂಶಗಳನ್ನು ಕ್ರೋಢೀಕರಿಸಿ ವಿಶ್ಲೇಷಣೆ ನಡೆಸುವ ಕಾರ್ಯವೂ ಸಾಗುತ್ತಿದೆ. ಒಟ್ಟಾರೆ ಬ್ಯಾಟರಿಯೊಂದು ಕಾರ್ಯಾಚರಣೆ ನಡೆಸುವಾಗ ಅದರೊಳಗಿನ ಶಕ್ತಿ ವ್ಯಯವಾಗುವ ಬಗೆಯನ್ನು ಸಾಧ್ಯವಾದಷ್ಟೂ ನಿಖರವಾಗಿ ಗುರುತಿಸುವ, ಈ ಗುರುತಿಸುವಿಕೆಯನ್ನು ಮಾಪಕವೊಂದರ ಮೂಲಕ ಅಳೆಯುವ, ಅಳೆದ ನಂತರ ಸಾಮಾನ್ಯರೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವಂತೆ ಸೂಚನೆಗಳನ್ನು ನೀಡುವ ವ್ಯವಸ್ಥೆಯೊಂದನ್ನು ರೂಪಿಸಲಾಗುತ್ತಿದೆ. ಎಲ್ಲವೂ ಎಣಿಕೆಯಂತೆ ನಡೆದರೆ ಇನ್ನು ಎರಡು ಅಥವಾ ಮೂರು ವರ್ಷಗಳಲ್ಲಿ ನಮ್ಮ ಮೊಬೈಲ್ ಫೋನ್‍ಗಳ ಬ್ಯಾಟರಿ ತೊಂದರೆಗಳು ನಿವಾರಣೆಯಾದೀತೆಂಬ ನಿರೀಕ್ಷೆಯಿದೆ.

ಎಲ್ಲೆಂದರಲ್ಲಿ ಕೊಂಡೊಯ್ಯಬಹುದಾದ ಗಣಕ ಯಂತ್ರ, ಹತ್ತು ಹಲವಾರು ಬಗೆಯ ಸಂಪರ್ಕ ಹಾಗೂ ಮನರಂಜನಾ ಸಾಧನಗಳಿಗೆ ಬ್ಯಾಟರಿಗಳೇ ಜೀವಾಳ. ಪ್ರಸ್ತುತ ತಂತ್ರಜ್ಞಾನದಲ್ಲಿ ಅದೆಷ್ಟೇ ಪುಟ್ಟದಾದ, ಅತ್ಯುತ್ತಮ ಕಾರ್ಯಕ್ಷಮತೆಯ, ಅತ್ಯುನ್ನತ ಗುಣಮಟ್ಟದ ವಿದ್ಯುನ್ಮಾನ ಸಾಧನಗಳನ್ನು ನಿರ್ಮಿಸಬಹುದು. ಆದರೆ, ಅವುಗಳೆಲ್ಲದರ ಅಭಿವೃದ್ಧಿಗೆ ಮಿತಿಯೊಡ್ಡಿರುವುದು ಸೂಕ್ತ ಬ್ಯಾಟರಿಯ ಲಭ್ಯತೆ. ಅಂತೆಯೇ ಬ್ಯಾಟರಿ ವಿನ್ಯಾಸಗೊಳಿಸುವವರ ಹಾಗೂ ಉತ್ಪಾದಕರ ಮುಂದೆ ಬಹು ದೊಡ್ಡ ಸವಾಲು ಕಾದಿದೆ. ಬ್ಯಾಟರಿಗಳು ಅಗ್ಗವಾಗಿರಬೇಕು, ಪುಟ್ಟದಾಗಿರಬೇಕು, ಹೆಚ್ಚು ವಿದ್ಯುತ್ ಶಕ್ತಿಯನ್ನು ಶೇಖರಿಸಿಟ್ಟುಕೊಳ್ಳಬೇಕು, ಹೆಚ್ಚು ಕಾಲ ಬಾಳಿಕೆ ಬರಬೇಕು, ಕಾರ್ಯಕ್ಷಮತೆ ಉತ್ತಮವಾಗಿರಬೇಕು, ಸುಲಭವಾಗಿ ಚಾರ್ಜ್ ಮಾಡುವಂತಿರಬೇಕು ... ಹೀಗೆ ಹತ್ತು ಹಲವಾರು ಗುಣಲಕ್ಷಣಗಳ ಅಭಿವೃದ್ಧಿಯತ್ತ ಅವರೆಲ್ಲರ ಗಮನ ಹರಿದಿದೆ. ಇವುಗಳ ಜತೆಗೆ ಸೇರಿರುವ ಮತ್ತೊಂದು ಸವಾಲೆಂದರೆ ನಮ್ಮ ಕಾರು, ಸ್ಕೂಟರುಗಳಲ್ಲಿನ ಬಾಕಿ ಇಂಧನದ ಅಳತೆಯನ್ನು ತೋರಿಸುವ ಮೀಟರ್‌ನಂತೆಯೇ ಕಾರ್ಯನಿರ್ವಹಿಸಬಲ್ಲ ಅಳತೆಗೋಲೊಂದರ ಸೃಷ್ಟಿ.

ಈ ನಿಟ್ಟಿನಲ್ಲಿ ಉತ್ತಮ ಪ್ರಗತಿ ಸಾಧಿಸಿರುವ ‘ಟಿ.ಐ.’ನ ಬ್ಯಾಟರಿ ವಿದ್ಯುನ್ಮಾನ ಮಂಡಲಗಳ ವಿನ್ಯಾಸಗಾರರಾರದ ರಿಚರ್ಡ್ ಡೆಲ್‍ರೊಸ್ಸಿ ಅವರು ಹೇಳುವಂತೆ ‘ಸದ್ಯಕ್ಕೆ ಬಳಕೆಯಲ್ಲಿರುವ ಬ್ಯಾಟರಿಗಳಲ್ಲಿ ಪ್ರತಿಶತ ಮೂವತ್ತರಷ್ಟು ಶಕ್ತಿ ಉಳಿದಿರುವಾಗಲೇ ಬಹುತೇಕ ಮೊಬೈಲ್ ಫೋನ್‍ಗಳಿಗೆ ಶಕ್ತಿ ಕ್ಷೀಣವಾಗಿದೆ ಎಂಬ ತಪ್ಪು ಸಂದೇಶ ರವಾನೆಯಾಗಿ, ಕಾರ್ಯಾಚರಣೆ ನಿಂತು ಹೋಗುತ್ತಿದೆ. ಇದರಿಂದಾಗಿ ಪೂರ್ತಿ ಖಾಲಿಯಾಗದ ಬ್ಯಾಟರಿಗಳನ್ನು ಬಳಕೆದಾರರು ಚಾರ್ಜ್ ಮಾಡಲು ಹೋಗುತ್ತಿದ್ದಾರೆ. ಬ್ಯಾಟರಿಗಳ ಆಯಸ್ಸಿನ ಮೇಲೆ ಇಂಥ ಆವರ್ತನೆಯ ಕಾರ್ಯ ಚಟುವಟಿಕೆಗಳು ದುಷ್ಪರಿಣಾಮ ಬೀರುತ್ತವೆ. ಜತೆಗೆ ಮೂರನೆಯ ಒಂದು ಭಾಗದಷ್ಟು ಶಕ್ತಿ ಸದಾ ಕಾಲ ಬಳಕೆಗೆ ಲಭ್ಯವಾಗುವುದಿಲ್ಲ’ ಎನ್ನುತ್ತಾರೆ. ಶಕ್ತಿ ಬಳಕೆಯ ಸಮರ್ಥ ನಿರ್ವಹಣೆಯಿಂದ ಬ್ಯಾಟರಿಗಳ ಬಳಕೆಯನ್ನು ಕನಿಷ್ಟವೆಂದರೂ ಪ್ರತಿಶತ ಐವತ್ತರಿಂದ ನೂರರಷ್ಟು ಹೆಚ್ಚಾಗಿಸಬಹುದು. ಜತೆಗೆ ಅಳತೆಗೋಲಿನ ಗ್ರಹಿಕೆಯ ದೋಷದ ಪ್ರಮಾಣ ಪ್ರತಿಶತ ಒಂದಕ್ಕೂ ಕಡಿಮೆಯಾಗಿಸಬಹುದು. ಈ ಬಗ್ಗೆ ರಿಚರ್ಡ್ ಅವರನ್ನು ಯಾರೇ ಪ್ರಶ್ನಿಸಲಿ, ಅವರು ನೀಡುವ ಉತ್ತರ "ಇನ್ನು ಮುಂದೆ ‘ನೋ ವರಿ’ ಬ್ಯಾಟರಿಗಳು ಸೃಷ್ಟಿಯಾಗತ್ರಿ"!


(ಕೃಪೆ: ವಿಜಯ ಕರ್ನಾಟಕ; 03-09-2007)

Monday, August 27, 2007

ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?

‘ಶಕ್ತ ರಾಷ್ಟ್ರವನ್ನಷ್ಟೇ ಮತ್ತೊಂದು ಶಕ್ತ ರಾಷ್ಟ್ರ ಗೌರವಿಸುತ್ತದೆ’. ಇದು ನಮ್ಮ ರಾಷ್ಟ್ರಪತಿಗಳಾಗಿದ್ದ ವಿಜ್ಞಾನಿ ಅಬ್ದುಲ್ ಕಲಾಮ್ ಸದಾ ಹೇಳುತ್ತಿದ್ದ ಮಾತು. ಇಲ್ಲಿ ಶಕ್ತಿ ಎಂದರೆ ಕೇವಲ ಮಿಲಿಟರಿ ಪ್ರಾಬಲ್ಯವಲ್ಲ, ದೇಶದ ಆರ್ಥಿಕ ಚೈತನ್ಯ, ವಿದ್ಯುತ್ ಶಕ್ತಿ ಉತ್ಪಾದಿಸುವ ಸಾಮರ್ಥ್ಯ, ಆಹಾರ ಸ್ವಾವಲಂಬನೆ, ಬೌದ್ಧಿಕ ಸಂಪತ್ತು ಜತೆಗೆ ಯುವ ಜನ ಸಂಪನ್ಮೂಲ ಎಲ್ಲವೂ ಸೇರಿರುತ್ತದೆ. ಅವರ ಒಂದು ಅಂದಾಜಿನಂತೆ ಕ್ರಿ.ಶ.2020ರ ಹೊತ್ತಿಗೆ ಇಡೀ ಜಗತ್ತಿನಲ್ಲಿ ಭಾರತ ಮೊದಲ ಮೂರು ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಿರುತ್ತದೆ. ಮೂರರಲ್ಲಿ ಉಳಿದ ಎರಡು ರಾಷ್ಟ್ರಗಳೆಂದರೆ ಅಮೆರಿಕ ಹಾಗೂ ಚೀನಾ. ಸ್ಥಾನ ಯಾವುದೇ ಇರಲಿ, ಕ್ರಿ.ಶ.2020ರ ಸಮಯಕ್ಕೆ ಭಾರತ ಎದುರಿಸಬಹುದಾದ ಅತಿ ದೊಡ್ಡ ಸಮಸ್ಯೆ ವಿದ್ಯುತ್ ಶಕ್ತಿಯದು. ಈ ನಿಟ್ಟಿನಲ್ಲಿ ಚೀನಾ ದೇಶಕ್ಕೂ ಹೆಚ್ಚಿನ ಮಟ್ಟದಲ್ಲಿ ವಿದ್ಯುತ್ ಅಗತ್ಯವಿರುತ್ತದೆ.

ಜಾಗತಿಕವಾಗಿ ಕ್ರಿ.ಶ.2025ರ ಹೊತ್ತಿಗೆ ಇಂದಿಗಿಂತಲೂ ಒಂದೂವರೆ ಪಟ್ಟು ಹೆಚ್ಚು ವಿದ್ಯುತ್ ಬೇಕೆಂಬ ಅಂದಾಜು ವಿಶ್ವ ಸಂಸ್ಥೆಯದು. ಇನ್ನು ಮುಂದೆ ಮೊಗೆದಂತೆಲ್ಲಾ ಕಚ್ಛಾ ಪೆಟ್ರೋಲಿಯಂ ತೈಲ ಸಿಗದಿರಬಹುದು. ಸಿಕ್ಕರೂ ಪೆಟ್ರೋಲಿಯಂ ಆಧರಿತ ಇಂಧನಗಳನ್ನು ಉರಿಸುವುದರಿಂದ ಪರಿಸರಕ್ಕೆ ಭಾರಿ ಮಟ್ಟದಲ್ಲಿ ಧಕ್ಕೆಯುಂಟಾಗುತ್ತದೆ. ಜಲ ವಿದ್ಯುತ್ ಕೇಂದ್ರಗಳಿಗೆ ನೀರಿನ ಬರ, ಮುಳುಗಿಸಲು ಕಾಡುಗಳೇ ಇಲ್ಲ. ಕಲ್ಲಿದ್ದಿಲಿನ ನಿಕ್ಷೇಪವೂ ಬರಿದಾಗುತ್ತಿದೆ, ಜತೆಗೆ ಕಲ್ಲಿದ್ದಲು ವಿದ್ಯುದಾಗಾರಗಳ ವಿರುದ್ಧ ಪರಿಸರ ಪ್ರೇಮಿಗಳ ಆಕ್ರೋಶವೂ ಹೆಚ್ಚಾಗುತ್ತಿದೆ. ಇನ್ನು ಪರಮಾಣು ವಿದ್ಯುತ್ ಸ್ಥಾವರಗಳ ಬಗ್ಗೆಯಂತೂ ಮಾತನಾಡುವ ಹಾಗೇ ಇಲ್ಲ. ಅಸಾಂಪ್ರದಾಯಿಕ ಮೂಲಗಳಿಂದ ಅಂದರೆ ಗಾಳಿ, ಸಮುದ್ರದಲೆ, ಸೌರಶಾಖ ಇತ್ಯಾದಿಗಳ ನೆರವಿನಿಂದ ವಿದ್ಯುತ್ ಉತ್ಪಾದನೆ ಅಷ್ಟು ಲಾಭದಾಯಕವಾಗಿಲ್ಲ. ಸಂಸ್ಥಾಪನೆಗೇ ಅಗಾಧ ಪ್ರಮಾಣದಲ್ಲಿ ಹಣ ವೆಚ್ಚ ಮಾಡಬೇಕು. ಚಂದ್ರನಲ್ಲಿ ಇರಬಹುದಾದ ಶುದ್ಧ ಇಂಧನ ಹೀಲಿಯಂ ಅನಿಲದ ನಿಕ್ಷೇಪವನ್ನು ಭೂಮಿಗೆ ಹೊತ್ತುಕೊಂಡು ಬರುವ ದಿನ ಬಹು ದೂರವಿದೆ. ವಿದ್ಯುತ್ ಬೇಡಿಕೆ ಹಾಗೂ ಪೂರೈಕೆಯ ಕತೆ ನಿಜಕ್ಕೂ ‘ಆಘಾತ -ಶಾಕ್’ ಮುಟ್ಟಿಸುವಂಥದು.

ಹಾಗೆಂದ ಮಾತ್ರಕ್ಕೆ ನಿರಾಸೆ ಪಡಬೇಕಿಲ್ಲ. ಜಗತ್ತಿನಾದ್ಯಂತ ವಿಜ್ಞಾನಿಗಳು ವಿದ್ಯುತ್ ಉತ್ಪಾದನೆಯ ಬದಲಿ ಮೂಲಗಳನ್ನು ಅರಸುತ್ತಲೇ ಇರುತ್ತಾರೆ. ಈ ನಿಟ್ಟಿನಲ್ಲಿ ಸಂಶೋಧನೆ ನಡೆಸುವವರಿಗೆ ಸದಾ ಹಣದ ಹೊಳೆ ಹರಿಯುತ್ತದೆ. ಹೀಗೆ ಹುಟ್ಟಿದ್ದೇ ಜೈವಿಕ ಮೂಲಗಳಿಂದ ಈಥೈಲ್ ಆಲ್ಕೋಹಾಲ್ ಹಾಗೂ ಡೀಸಲ್ ಉತ್ಪಾದಿಸುವ ತಂತ್ರಜ್ಞಾನ. ಮುಸುಕಿನ ಜೋಳ ಅಥವಾ ಕಬ್ಬಿನಿಂದ ಈಥೈಲ್ ಆಲ್ಕೋಹಾಲ್ ಉತ್ಪಾದಿಸುವ, ಹೀಗೆ ಉತ್ಪಾದನೆಯಾದ ಈಥೈಲ್ ಆಲ್ಕೋಹಾಲ್ ಅನ್ನು ಪೆಟ್ರೋಲ್‍ನೊಂದಿಗೆ ಸೂಕ್ತ ಪ್ರಮಾಣದಲ್ಲಿ ಬೆರೆಸಿ ಬಳಸುವ ಪದ್ಧತಿ ಆರಂಭವಾಯಿತು. ಆಹಾರ ಬೆಳೆಗಳನ್ನು ಇಂಧನಕ್ಕಾಗಿ ಈ ರೀತಿ ದುರುಪಯೋಗ ಮಾಡುವುದು ತರವಲ್ಲ ಎಂಬ ಕೂಗೂ ಎದ್ದಿತು. ಜತೆಗೆ ಜೈವಿಕ ಇಂಧನದ ಬೆಲೆ ನೈಸರ್ಗಿಕವಾಗಿ ಸಂಸ್ಕರಿಸಿದ ಇಂಧನಕ್ಕಿಂತ ತುಟ್ಟಿ. ಇದರ ಬದಲು ಇಂಗಾಲ ಹಾಗೂ ಜಲಜನಕ ಹೇರಳವಾಗಿರುವ ಜೈವಿಕ ವಸ್ತುಗಳಿಂದ ನೇರವಾಗಿ ಪೆಟ್ರೋಲ್ ಅಥವಾ ಡೀಸಲ್ ಅನ್ನು ಉತ್ಪಾದಿಸುವ ಬಗ್ಗೆ ಯೋಚಿಸುತ್ತಿದ್ದಾಗ ವಿಜ್ಞಾನಿಗಳ ಗಮನಕ್ಕೆ ಬಂದದ್ದು ಸೂಕ್ಷ್ಮಾಣುಜೀವಿಗಳು. ಬಹುತೇಕ ಸೂಕ್ಷ್ಮಾಣುಜೀವಿಗಳು ಗ್ಲುಕೋಸ್ ಅನ್ನು ಅಣುಗಳ ರೂಪದಲ್ಲಿ ಶಕ್ತಿ ಸಂಗ್ರಹಿಸುವ ಫ್ಯಾಟಿ ಆಸಿಡ್ ಅನ್ನಾಗಿ ಮಾರ್ಪಡಿಸಬಲ್ಲದು. ಜೀವಿಗಳ ಗುಣಾವಗುಣಗಳನ್ನು ನಿರ್ಧರಿಸುವ ‘ಜೀನ್ - ಗುಣಾಣು’ ಗೊತ್ತಲ್ಲ? ಜೈವಿಕ ತಂತ್ರಜ್ಞಾನ ಅಭಿವೃದ್ಧಿಯಾದಂತೆ ಒಂದು ಜೀವಿಯ ‘ಜೀನ್’ ಅನ್ನು ಮತ್ತೊಂದು ಜೀವಿಯೊಳಗೆ ಕಸಿ ಮಾಡಿ ಕೂಡಿಸುವ ಕಲೆ ಇದೀಗ ಕರಗತವಾಗಿದೆ. ಹಾಗಿದ್ದಲ್ಲಿ ಸೂಕ್ತ ‘ಜೀನ್’ ಮಾರ್ಪಾಡುಗಳೊಂದಿಗೆ ಸೂಕ್ಷ್ಮಾಣುಜೀವಿಗಳನ್ನು ನೇರವಾಗಿ ಪೆಟ್ರೋಲ್ ಅಥವಾ ಡೀಸಲ್ ಅನ್ನು ಉತ್ಪಾದಿಸುವಂತೆ ಮಾಡಬಹುದು.

ಈ ಬಗ್ಗೆ ಸತತವಾಗಿ ಸಂಶೋಧನೆ ನಡೆಸುತ್ತಿರುವ ವಿಜ್ಞಾನಿಯ ಹೆಸರು ಡೇವಿಡ್ ಬೆರ್ರಿ. ಇವರು ಅಮೆರಿಕದ ‘ಮೆಸಾಶ್ಯುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ - ಎಂ.ಐ.ಟಿ.’ ಇಂದ ಡಾಕ್ಟರೇಟ್ ಪಡೆದವರು. ಇದಕ್ಕೂ ಮುನ್ನ ವೈದ್ಯಕೀಯ ವಿಜ್ಞಾನದಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಎಂ.ಡಿ. ಪದವಿ ಪುರಸ್ಕೃತರು. ಇದಕ್ಕೂ ಮುನ್ನ ಕೇವಲ ಏಳು ವರ್ಷಗಳಷ್ಟು ಹಿಂದೆಯಷ್ಟೇ ಎಂ.ಐ.ಟಿ.ಯಿಂದ ಪದವಿಯನ್ನು ಪಡೆದುಕೊಂಡವರು. ಇವರ ಸಂಶೋಧನಾ ಕ್ಷೇತ್ರಗಳ ವ್ಯಾಪ್ತಿ ಬಹು ದೊಡ್ಡದು. ಇಪ್ಪತ್ತೊಂದಕ್ಕೂ ಹೆಚ್ಚಿನ ಸಂಖ್ಯೆಯ ಅಂತಾರಾಷ್ಟ್ರೀಯ ಪೇಟೆಂಟ್‍ಗಳನ್ನು (ತಂತ್ರಜ್ಞಾನ ಸ್ವಾಮ್ಯ) ಹೆಗಲಿಗೇರಿಸಿಕೊಂಡಿರುವ ಬೆರ್ರಿ ಅವರ ಆಸಕ್ತಿಗಳನ್ನು ಅರಿಯಲು ಹೊರಟರೆ ಬೆರಗು ಹುಟ್ಟಿಸುತ್ತದೆ. ನಿರ್ದಿಷ್ಟ ಚಿಕಿತ್ಸೆಗಳಿಗೆಂದು ರೂಪಿಸಿದ ಔಷಧಗಳು, ತಪಾಸಣಾ ಸಾಧನಗಳು, ಹಾಗೂ ಸದ್ಯಕ್ಕೆ ಬದಲಿ ಇಂಧನ ತಯಾರಿಕಾ ವಿಧಾನಗಳು. ಪಾರ್ಶ್ವವಾಯು ಚಿಕಿತ್ಸೆಗೆ ನೆರವಾಗುವ ಮಿದುಳಿನಲ್ಲಿನ ರಕ್ತತಡೆಗೋಡೆಗಳನ್ನು ಬೇಧಿಸಬಲ್ಲ ಔಷಧಗಳನ್ನು ರೂಪಿಸಿದ್ದಾರೆ. ಇದಕ್ಕಾಗಿ ಇವರು ಜೀನ್‍ಗಳಲ್ಲಿ ಹುದುಗಿರುವ ಪ್ರೊಟೀನ್ ಅನ್ನು ಸೆರೆಹಿಡಿದು ಅಗತ್ಯಕ್ಕೆ ತಕ್ಕಂತೆ ಅದನ್ನು ಮಾರ್ಪಡಿಸಿದರು. ಪ್ರಯೋಗಶಾಲೆಯ ಪ್ರಾಣಿಗಳ ಮೇಲೆ ಅಧ್ಯಯನ ನಡೆಸಿದಾಗ, ಪಾರ್ಶ್ವವಾಯುವನ್ನು ಈ ಪ್ರೋಟೀನ್ ಕಣಗಳು ಗುಣಪಡಿಸಿದವು. ಇದು ಅವರನ್ನು ಪ್ರೋಟೀನ್‍ಗಳ ಬಗ್ಗೆಯೇ ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸಿತು. ಮುಂದೆ ಈ ಅಧ್ಯಯನ ಅವರಿಗೆ ಡಾಕ್ಟರೇಟ್ ಪದವಿಯನ್ನು ಕೊಡಿಸಿತು. ಅಮೆರಿಕದ ಜೈವಿಕ ತಂತ್ರಜ್ಞಾನ ಔಷಧ ತಯಾರಿಕಾ ಕಂಪನಿಯೊಂದು ಬೆರ್ರಿ ಅವರ ನೆರವಿನಿಂದ ಆ ವಿಶಿಷ್ಟ ಪ್ರೋಟೀನ್ ಅನ್ನು ಸಂಸ್ಕರಿಸಿ ಔಷಧಗಳನ್ನು ತಯಾರಿಸುತ್ತಿದೆ.

ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ನೂತನ ವಿಧಾನಕ್ಕೂ ಸಹಾ ಇವರದೇ ವಿಶಿಷ್ಟ ವಿನ್ಯಾಸವಿದೆ. ರಕ್ತವನ್ನು ತೆಳುವಾಗಿಸುವ ಅಣುರೂಪದ ರಾಸಾಯನಿಕ ಸಂಯುಕ್ತದ ಹೆಸರು ‘ಹೆಪಾರಿನ್’. ಸಕ್ಕರೆಯ ಅಣುಗಳಿಗೆ ಪಾಲಿಮರ್ ಅಣುಗಳನ್ನು ಜೋಡಣೆ ಮಾಡುವ ಬಗ್ಗೆ ಪ್ರಯೋಗಗಳನ್ನು ನಡೆಸುತ್ತಿದ್ದ ಬೆರ್ರಿ ಅವರಿಗೆ ಕೆಲ ತಿಂಗಳ ಸತತ ಪ್ರಯತ್ನಗಳ ನಂತರ ಯಶಸ್ಸು ದೊರೆತಿತ್ತು. ಇದರ ಹಿನ್ನೆಲೆಯಲ್ಲಿ ‘ಹೆಪಾರಿನ್’ ಅಣುಗಳಿಗೆ ಪಾಲಿಮರ್ ಅಣುಗಳನ್ನು ಜೋಡಿಸಲು ಸಾಧ್ಯವೆ? ಎಂದು ಪರಿಶೀಲಿಸತೊಡಗಿದರು. ಪಾಲಿಮರ್‌ಗಳು ಸುತ್ತುವರಿದಿರುವ ಹೆಪಾರಿನ್ ಅನ್ನು ಕ್ಯಾನ್ಸರ್ ತಗುಲಿರುವ ಜೀವಕೋಶಗಳು ಮುಗಿಬಿದ್ದು ತಮ್ಮ ಒಡಲೊಳಗೆ ಹುದುಗಿಸಿಕೊಳ್ಳುವ ಪ್ರಕ್ರಿಯೆಯನ್ನು ಅವರು ಕಂಡುಕೊಂಡರು. ಕ್ಯಾನ್ಸರ್ ಕೋಶದೊಳಗೆ ಸೇರಿದೊಡನೆಯೆ ಬೇರ್ಪಡುತ್ತಿದ್ದ ಹೆಪಾರಿನ್ ಅಣುಗಳು ಬಾಂಬ್‍ಗಳಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆ ಕೋಶಗಳನ್ನು ಕೊಲ್ಲುವುದು ಇವರ ಗಮನಕ್ಕೆ ಬಂದಿತು. ಸದ್ಯಕ್ಕೆ ಈ ತಂತ್ರಜ್ಞಾನವನ್ನು ಮತ್ತೊಂದು ಔಷಧ ತಯಾರಿಕಾ ಕಂಪನಿ ತಮ್ಮ ಸುಪರ್ದಿಗೆ ಸೇರಿಸಿಕೊಂಡಿದ್ದಾರೆ.

ಇಂಥ ಹೆಗ್ಗಳಿಕೆಯ ಬೆರ್ರಿ ಅವರೊಂದಿಗೆ ಸಂಶೋಧನೆಗಳನ್ನು ನಡೆಸಲು ಜತೆಗೂಡಿದವರು ಹಾರ್ವರ್ಡ್ ಮೆಡಿಕಲ್ ಸ್ಕೂಲಿನ ಜೀನ್ ತಜ್ಞರಾದ ಜಾರ್ಜ್ ಚರ್ಚ್ ಹಾಗೂ ಸ್ಟಾನ್‍ಫರ್ಡ್ ವಿಶ್ವವಿದ್ಯಾಲಯದ ಸಸ್ಯ ಜೀವ ವಿಜ್ಞಾನಿಗಳಾದ ಕ್ರಿಸ್ ಸೋಮರ್‌ವಿಲ್. ಇವರೆಲ್ಲರೂ ಒಗ್ಗೂಡಿ ನಿರ್ಮಿಸ ಹೊರಟಿದ್ದು ಜೀನ್ ಬದಲಾದ ಸೂಕ್ಷ್ಮಾಣುಜೀವಿಯೊಂದನ್ನು. ವರ್ಷಗಟ್ಟಲೆಯ ಸಂಶೋಧನೆಗಳ ನಂತರ ಸೂಕ್ಷ್ಮಾಣುಜೀವಿಯೊಂದನ್ನು ಅವರು ಪ್ರಯೋಗಶಾಲೆಗಳಲ್ಲಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ತ್ಯಾಜ್ಯವಸ್ತುಗಳೂ ಸೇರಿದಂತೆ ಇಂಗಾಲ ಹಾಗೂ ಜಲಜನಕ ಹೇರಳವಾಗಿರುವ ಸಸ್ಯ ಸಂಪತ್ತನ್ನು ಕಬಳಿಸಿ ಪೆಟ್ರೋಲಿಯಂನಂಥ ರಾಸಾಯನಿಕವನ್ನು ಈ ಸೂಕ್ಷ್ಮಾಣುಜೀವಿಗಳು ಕಕ್ಕಬಲ್ಲದು. ಸೂಕ್ಷ್ಮಾಣುಜೀವಿಯ ಹೆಸರು ಹಾಗೂ ಅದರ ಮೇಲೆ ನಡೆಸಿರುವ ಜೀನ್ ಚಿಕಿತ್ಸೆಯ ಬಗ್ಗೆ ಬೆರ್ರಿ ಮತ್ತವರ ಸಹಚರರು ಹೆಚ್ಚು ವಿವರಗಳನ್ನು ನೀಡುತ್ತಿಲ್ಲ. ಅವರ ಪ್ರಕಾರ ಬರಲಿರುವ ದಿನಗಳಲ್ಲಿ ಇಂಧನ ಕ್ಷಾಮವನ್ನು ದೂರವಾಗಿಸಬಲ್ಲ ಸೂಕ್ಷ್ಮಾಣುಜೀವಿಗಳ ತೈಲಾಗಾರವನ್ನು ಸುಲಭವಾಗಿ ಎಲ್ಲೆಡೆ ಸ್ಥಾಪಿಸಬಹುದು. ಅಷ್ಟೇ ಅಲ್ಲ, ಉತ್ಪಾದಕತೆ ಹಾಗೂ ಬೆಲೆಯಲ್ಲಿ ಇದು ಮುಸುಕಿನ ಜೋಳ ಅಥವಾ ಕಬ್ಬಿನಿಂದ ಸಂಸ್ಕರಿಸಿದ ಈಥೈಲ್ ಆಲ್ಕೋಹಾಲ್‍ಗಿಂತಲೂ ಉತ್ತಮವಾಗಿರುತ್ತದೆ. ಜತೆಗೆ ನೈಸರ್ಗಿಕವಾಗಿ ಸಂಸ್ಕರಿಸುವ ಪೆಟ್ರೋಲಿಯಂಗಿಂತಲೂ ಅಗ್ಗವಾಗಿರುತ್ತದೆ ಎಂಬ ಆಶ್ವಾಸನೆ ಬೆರ್ರಿ ಅವರದು.

ಈಗ ಎಲ್ಲೆಡೆ ಜಾಗೃತಿ ಮೂಡಿಸಿರುವ ಪೆಟ್ರೋಲಿಯಂನೊಂದಿಗೆ ಬೆರೆಸಬಹುದಾದ ಈಥೈಲ್ ಆಲ್ಕೋಹಾಲ್ ಬಗ್ಗೆ ಬೆರ್ರಿ ಅವರ ಅಭಿಪ್ರಾಯ ‘ಇಂಧನ ಸಮಸ್ಯೆಯನ್ನು ಅದು ನೀಗಿಸದು’. ಇದಕ್ಕೆ ಅವರು ಕೊಡುವ ಕಾರಣ ಈಥೈಲ್ ಆಲ್ಕೋಹಾಲ್ ಪೆಟ್ರೋಲಿಗಿಂತ ಮೂರನೆಯ ಎರಡು ಭಾಗದಷ್ಟು ಮಾತ್ರ ಶಕ್ತಿ ಸಂಚಯನ ಮಾಡುತ್ತದೆ. ಅಂದರೆ ಪೆಟ್ರೋಲಿಗಿಂತಲೂ ಮೂರನೆಯ ಒಂದು ಭಾಗದಷ್ಟು ಹೆಚ್ಚಿನ ಪ್ರಮಾಣದಲ್ಲಿ ಈಥೈಲ್ ಆಲ್ಕೋಹಾಲ್ ಬಳಸಬೇಕಾಗುತ್ತದೆ. ನೈಸರ್ಗಿಕವಾಗಿ ಕಚ್ಛಾ ತೈಲವನ್ನು ಸಂಸ್ಕರಿಸುವಾಗ ವಿವಿಧ ಹಂತಗಳಲ್ಲಿ ಸೀಮೆ‍ಎಣ್ಣೆ, ಪೆಟ್ರೋಲ್, ಡೀಸಲ್ ಮತ್ತಿತರ ಸಾಮಗ್ರಿಗಳನ್ನು ತೆಗೆಯಬಹುದು. ಇದೇ ರೀತಿ ಸೂಕ್ಷ್ಮಾಣುಜೀವಿಗಳ ಕಾರ್ಯಾಚರಣೆಯಲ್ಲಿ ಜೀನ್ ಮಾರ್ಪಾಡಿನ ಮೂಲಕ ಒಂದಷ್ಟು ಬದಲಾವಣೆಗಳನ್ನು ಮಾಡಿದರೆ ವಿವಿಧ ಉತ್ಪನ್ನಗಳನ್ನು ಅವು ಕಕ್ಕುವಂತೆ ಮಾಡಬಹುದು. ಈ ನಿಟ್ಟಿನಲ್ಲಿ ಅವರ ಕಾರ್ಯಾಚರಣೆಗಳು ಪ್ರಯೋಗಶಾಲೆಯ ಹಂತದಲ್ಲಿ ಫಲ ಕೊಟ್ಟಿವೆ.

ಸಾಮಾನ್ಯವಾಗಿ ತೈಲ ಸಂಸ್ಕರಣಾ ಘಟಕಗಳು ಹೆಚ್ಚಿನ ಮಟ್ಟದಲ್ಲಿ ವಿದ್ಯುತ್ ಶಕ್ತಿಯನ್ನು ಕಬಳಿಸುತ್ತವೆ, ಜತೆಗೆ ಹೆಚ್ಚಿನ ಮಟ್ಟದಲ್ಲಿ ಪರಿಸರವನ್ನು ಮಲಿನಗೊಳಿಸುತ್ತವೆ. ಇತ್ತ ಬೆರ್ರಿ ಅವರ ಯೋಜನೆಯಲ್ಲಿ ಆಹಾರ ಬೆಳೆಗಳನ್ನು ಹೊರತುಪಡಿಸಿ ಕೇವಲ ಎತ್ತರದ ಹುಲ್ಲುಗಳು, ಮರದ ಚಕ್ಕೆ, ಕೆಲವೊಂದು ನಾರಿನ ಸಸ್ಯಗಳು, ಹೆಚ್ಚು ಉಪಯೋಗವಿಲ್ಲದ ಸಣ್ಣ ಪುಟ್ಟ ಮರಗಳನ್ನು ಮೂಲವಸ್ತುಗಳಾಗಿ ಬಳಸಲಾಗುತ್ತದೆ. ಇವುಗಳನ್ನು ಬೇಕೆಂದಷ್ಟು ಮತ್ತೆ ಮತ್ತೆ ಬೆಳೆಸಬಹುದು. ಹಾಗೆಯೇ ಜೀನ್ ಬದಲಿಸಿಕೊಂಡ ಸೂಕ್ಷ್ಮಾಣುಜೀವಿಗಳನ್ನು ಹುದುಗು ತರಿಸುವ ಪ್ರಕ್ರಿಯೆಯ ಮೂಲಕ ಸಾಕಷ್ಟು ಸಂಖ್ಯೆಯಲ್ಲಿ ಬೆಳೆಸಿಕೊಳ್ಳಬಹುದು.
ಕೇವಲ ಇಪ್ಪತೊಂಬತ್ತು ವರ್ಷ ವಯಸ್ಸಿನ ಬೆರ್ರಿ ಅವರಿಗೆ ‘ಎಂ.ಐ.ಟಿ.’ಯ ತಂತ್ರಜ್ಞಾನ ನಿಯತಕಾಲಿಕೆ ‘ಟೆಕ್ನಾಲಜಿ ರೆವ್ಯೂ’ ‘ವರ್ಷದ ಸಂಶೋಧಕ’ನೆಂಬ ಪುರಸ್ಕಾರ ನೀಡಿ ಗೌರವಿಸಿದೆ. ಪ್ರತಿ ವರ್ಷ ಮೂವತ್ತೈದು ವರ್ಷ ವಯಸ್ಸಿನೊಳಗಿನ ವಿಜ್ಞಾನಿಗಳನ್ನು ಈ ನಿಯತಕಾಲಿಕೆ ಪುರಸ್ಕರಿಸುತ್ತದೆ. ಮುಂಚೂಣಿ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ನೆರವಾಗುವ ‘ವೆಂಚರ್ ಕ್ಯಾಪಿಟಲಿಸ್ಟ್ಸ್’ಗಳೆಂಬ ಆರ್ಥಿಕ ಪ್ರಾಯೋಜಕರುಗಳು ಬೆರ್ರಿ ಅವರನ್ನು ಮುಗಿಬಿದ್ದಿದ್ದಾರೆ. ಅಂಥ ಸಂಸ್ಥೆಯೊಂದರ ನೆರವಿನಿಂದ ಬೆರ್ರಿ ತಂತ್ರಜ್ಞಾನ ಒಕ್ಕೂಟವೊಂದನ್ನು ರೂಪಿಸಿಕೊಂಡಿದ್ದಾರೆ. ಸಹ ಸಂಶೋಧಕರುಗಳ ನೆರವಿನಿಂದ ಜೈವಿಕ ಪೆಟ್ರೋಲ್ ಅನ್ನು ರೂಪಿಸುವಲ್ಲಿ ವಿಶೇಷ ಆಸಕ್ತಿ ವಹಿಸಿದ್ದಾರೆ. ಎಲ್ಲವೂ ಬೆರ್ರಿ ಅವರ ಎಣಿಕೆಯಂತೆ ನಡೆದರೆ ಜಗತ್ತಿನಲ್ಲಿ ವಿದ್ಯುತ್ ಕ್ಷಾಮ ಇರುವುದಿಲ್ಲ. ಭಾರತದಲ್ಲೂ ವಿದ್ಯುತ್ ಸುಭಿಕ್ಷ ಉಂಟಾಗಿ ಕಲಾಂ ಅವರ ಕ್ರಿ.ಶ.2020ರ ಕನಸು ನನಸಾದೀತು. ಅಂದರೆ ಭಾರತ ಜಗತ್ತಿನ ಮೂರು ಬಲಿಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಒಂದು ಸ್ಥಾನ (ಮನಸ್ಸು ಮಾಡಿದರೆ ಒಂದನೆಯ ಸ್ಥಾನ) ವನ್ನು ಖಂಡಿತವಾಗಿಯೂ ಪಡೆಯಬಹುದು.

(ಕೃಪೆ: ವಿಜಯ ಕರ್ನಾಟಕ, 27-08-2007)

Monday, August 20, 2007

ಮಾಹಿತಿ ತಂತ್ರಜ್ಞಾನ ಜನಸಾಮಾನ್ಯರನ್ನು ನಿಜಕ್ಕೂ ಮುಟ್ಟೀತೆ?

` ನೀವು ಮೊಬೈಲ್ ಫೋನ್‍ನಲ್ಲಿ ಮಾತನಾಡುತ್ತಿದ್ರಿ. ನಾಲ್ಕು ಸಾಲು ದಾಟಿ ಬರುವ ಬದಲು ಫೋನ್ ಮಾಡಿದೆ. ಸ್ವಿಚ್ ಆಫ್ ಎಂಬ ಸಂದೇಶ ಬರ್ತಿತ್ತು. ನಮ್ಮಂಥವರ ಕರೆ ಬಂದೊಡನೆ ಸ್ವಯಂಚಾಲಿತವಾಗಿ ಇಂಥ ಸಂದೇಶಗಳು ಬರುವಂತೆ ಮಾಡಿದ್ದೀರಾ?’ - ಪುಸ್ತಕ ಬಿಡುಗಡೆಯ ಸಮಾರಂಭವೊಂದರಲ್ಲಿ ಕಂಡ ಪತ್ರಕರ್ತ ಗೆಳೆಯ ಶ್ಯಾಮ್ ಅವರನ್ನು ಪ್ರಶ್ನಿಸಿದೆ. ಮಾತಿನಲ್ಲೇ ಮೋಡಿ ಮಾಡುವ ಶ್ಯಾಮ್ ಮಾತುಗಾರ ಗೆಳೆಯರನ್ನು ಎಂದಿಗೂ ‘ಅವಾಯ್ಡ್’ ಮಾಡುವವರಲ್ಲ. ‘ಅವರಿಗಿಂತ ಮಾತು ಬಲ್ಲವರಿಲ್ಲ, ಈ ಊರಿನಲ್ಲಿ’ ಎಂದರೆ ಉತ್ಪ್ರೇಕ್ಷೆಯಿಲ್ಲ. ‘ರಜೆ ದಿನಗಳಂದು ಖಾಸಗಿ ಗೆಳೆಯರೊಂದಿಗೆ ಮಾತನಾಡಲು ಮತ್ತೊಂದು ಮೊಬೈಲ್ ಫೋನ್ ಕೊಂಡಿದ್ದೇನೆ. ಅಧಿಕೃತ ಮೊಬೈಲ್ ಸಂಖ್ಯೆಯನ್ನು ಭಾನುವಾರಗಳಂದು ಮನೆಯಲ್ಲಿಯೇ ಇಟ್ಟು ಸ್ವಿಚ್ ಆಫ್ ಮಾಡಿರುತ್ತೇನೆ’ ಎಂದರು. ಹಿಂದೆ ವಿಶ್ವೇಶ್ವರಯ್ಯನವರು ಕಚೇರಿ ಕೆಲಸಕ್ಕೆ, ಮನೆ ಕೆಲಸಕ್ಕೆ ಎಂದು ಪ್ರತ್ಯೇಕವಾದ ಪೆನ್‍ಗಳನ್ನು ಜೇಬಿನಲ್ಲಿಡುತ್ತಿದ್ದರು ಎಂಬುದು ದಂತಕತೆ. ಸದ್ಯಕ್ಕೆ ಕಚೇರಿ, ಮನೆ, ಖಾಸಗಿ ... ಹೀಗೆ ಮೂರು-ನಾಲ್ಕು ಮೊಬೈಲ್ ಫೋನ್‍ಗಳನ್ನು ಒಟ್ಟೊಟ್ಟಿಗೆ ಇಟ್ಟುಕೊಳ್ಳುವವರಿದ್ದಾರೆ. ಬಹು ದೊಡ್ಡ ಉದ್ದಿಮೆದಾರರಿಂದ ಅತಿ ಸಣ್ಣ ವ್ಯಾಪಾರಿಗಳ ವರೆಗೆ ಮೊಬೈಲ್ ಫೋನ್ ಅತ್ಯಗತ್ಯ ಸಂಪರ್ಕ ಸಾಧನ. ರಜೆ ಕಳೆಯಲೆಂದು ಸ್ವಂತ ಊರು ಕೇರಳಕ್ಕೆ ಹೋಗಿದ್ದ ಸಹೋದ್ಯೋಗಿಯೊಬ್ಬರು ಮೊನ್ನೆ ಹೇಳುತ್ತಿದ್ದರು. ‘ನಮ್ಮೂರಿನ ಬೆಸ್ತರು ಮೀನು ಹಿಡಿದ ನಂತರ ಹೊರಟ ಸ್ಥಳಕ್ಕೇ ಹಿಂದಿರುಗುವುದಿಲ್ಲ. ಯಾವ ಯಾವ ಮೀನುಗಟ್ಟೆಗಳಲ್ಲಿ ಎಂಥ ಜಾತಿಯ ಮೀನುಗಳು ಬಿಕರಿಗೆ ಬಂದಿವೆ? ಎಂಬ ವಿಷಯವನ್ನು ಮೊಬೈಲ್ ಫೋನಿನ ಮೂಲಕ ತಿಳಿದುಕೊಂಡು, ತಾವು ಹಿಡಿದ ಮೀನಿನ ಜಾತಿಗೆ ಎಲ್ಲಿ ಮಾರುಕಟ್ಟೆಯಿದೆಯೋ ಅಲ್ಲಿಗೇ ನೇರ ಹೊರಡುತ್ತಾರೆ. ಹಿಂದೆ ನಮ್ಮಪ್ಪನ ಕಾಲದಲ್ಲಿ ಅದೊಂದು ಲಾಟರಿಯಂತೆ ನಡೆಯುತ್ತಿತ್ತು. ಅದೃಷ್ಟ ಇಲ್ಲದಿದ್ದರೆ ಒಂದೇ ಮೀನುಗಟ್ಟೆಯಲ್ಲಿ ಒಂದೇ ಜಾತಿಯ ಮೀನುಗಳು ಹೇರಳವಾಗಿ ತುಂಬಿಕೊಂಡು, ಬೆಲೆ ಕುಸಿಯುತ್ತಿತ್ತು. ಮೊಬೈಲ್ ಫೋನ್‍ಗಳ ದೆಸೆಯಿಂದ ಈಗ ಬೆಸ್ತರು, ಮಾರುಕಟ್ಟೆ ದಲ್ಲಾಳಿಗಳಿಗೆ ಮೀನಿನ ಸರಿಯಾದ ಬೆಲೆಯನ್ನು ನಿರ್ಧರಿಸಲು ಸಾಧ್ಯವಾಗಿದೆ. ಇವರೆಲ್ಲರೊಂದಿಗೆ ಗಿರಾಕಿಗಳಿಗೂ ಅನುಕೂಲವಾಗಿದೆ’ ಎಂದರು. ಇದು ಮೊಬೈಲ್ ಫೋನ್‍ನಿಂದಾಗಿರುವ ಲಾಭ. ಇಂಟರ್‌ನೆಟ್ ಎಂಬ ಸಂಪರ್ಕ ಜಾಲದಿಂದಾಗಿ ಇಡೀ ಜಗತ್ತು ಒಂದು ಹಳ್ಳಿಯಂತಾಗಿದೆ. ಆ ಸಂಪರ್ಕ ಜಾಲಕ್ಕೆ ಮೊಬೈಲ್ ಫೋನ್‍ಗಳನ್ನು ಮೇಳೈಸಿದರೆ ನಮ್ಮ ಇಡೀ ವಿಶ್ವೇ ಒಂದು ವಸುಧೈವ ಕುಟುಂಬವಾದೀತು. ಒಂದು ಅಂದಾಜಿನಂತೆ ನಮ್ಮ ದೇಶದಲ್ಲಿರುವ ಮೊಬೈಲ್ ಫೋನ್ ಗ್ರಾಹಕರ ಸಂಖ್ಯೆ ಹದಿನೆಂಟೂವರೆ ಕೋಟಿ.

‘ಮಾಹಿತಿ ತಂತ್ರಜ್ಞಾನ’ ಅಥವಾ ‘ಐ.ಟಿ.’ ಎಂದೊಡನೆ ನಮ್ಮ ನೆನಪಿಗೆ ಬರುವುದು ಬಿಲಿಯಗಟ್ಟಲೆ ಡಾಲರ್ ವಾರ್ಷಿಕ ಆದಾಯ ತರುವ ದೊಡ್ಡ ದೊಡ್ಡ ಕಂಪನಿಗಳು. ಆ ಕಂಪನಿಗಳು ಸೃಷ್ಟಿಸುವ ಕೈತುಂಬಾ ಪಗಾರ ತರುವ ಲಕ್ಷಗಟ್ಟಲೆ ಉದ್ಯೋಗಗಳು. ಮಾಹಿತಿ ತಂತ್ರಜ್ಞಾನ ಕ್ರಾಂತಿಯೆಂದರೆ ಕೇವಲ ಎಕರೆಗಟ್ಟಲೆ ವಿಸ್ತೀರ್ಣದ ಕಂಪನಿಗಳಲ್ಲ. ಅಥವಾ ಹೊರಗುತ್ತಿಗೆಯ ಮೂಲಕ ಆ ಕಂಪನಿಗಳು ಇಡೀ ಜಗತ್ತಿನಿಂದ ಸಂಪಾದಿಸಿಕೊಂಡ ಬ್ಯುಸಿನೆಸ್‍ಗಳಲ್ಲ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಹಿಡುವಳಿದಾರರಿರುವ ದೇಶ ನಮ್ಮದು. ಸಾಧಾರಣ ಮಟ್ಟದ ವಿದ್ಯೆ ಪಡೆದ ಲಕ್ಷಾಂತರ ಶ್ರಮಜೀವಿಗಳಿರುವ ದೇಶ ನಮ್ಮದು. ಇಂಥವರೆಲ್ಲರ ಜೀವನ ಮಟ್ಟ ಸುಧಾರಿಸುವ ತಂತ್ರಜ್ಞಾನಗಳ ಅಭಿವೃದ್ಧಿಯೇ ನಿಜವಾದ ಮಾಹಿತಿ ತಂತ್ರಜ್ಞಾನ ಕ್ರಾಂತಿ. ಭಾರತದಲ್ಲಿಯೇ ಕುಳಿತು ಸಾಮಾನ್ಯ ಅಮೆರಿಕನ್ನರ ಜೀವನ ಮಟ್ಟ ಸುಧಾರಿಸಲು ಬೆವರು ಸುರಿಸುವ ಸಹಸ್ರಾರು ತಂತ್ರಜ್ಞರಿರುವಂತೆ, ಅಮೆರಿಕದಲ್ಲಿಯೇ ಕುಳಿತು ಸಾಮಾನ್ಯ ಭಾರತೀಯರ ಜೀವನ ಮಟ್ಟ ಸುಧಾರಿಸಲು ಶ್ರಮ ಪಡುತ್ತಿರುವ ಬೆರಳೆಣಿಕೆಯಷ್ಟು ತಂತ್ರಜ್ಞರಿದ್ದಾರೆ. ಇಂಥ ಶ್ರಮಜೀವಿಯೊಬ್ಬರ ಹೆಸರು ತಪನ್ ಪಾರೀಖ್. ಅಮೆರಿಕದ ವಾಷಿಂಗ್‍ಟನ್ ವಿಶ್ವವಿದ್ಯಾಲಯದಲ್ಲಿನ ಕಂಪ್ಯೂಟರ್ ವಿಜ್ಞಾನ ವಿಭಾಗಗದಲ್ಲಿ ಡಾಕ್ಟರೇಟ್ ಪದವಿಗೆ ಅಧ್ಯಯನ ನಡೆಸುತ್ತಿರುವುದರ ಜತೆಗೆ ತನ್ನದೇ ಆದ ‘ಏಕ್‍ಗಾಂವ್ ಟೆಕ್ನಾಲಜೀಸ್’ ಕಂಪನಿಯ ಒಡೆಯನೀತ. ಅಭಿವೃದ್ಧಶೀಲ ರಾಷ್ಟ್ರಗಳಲ್ಲಿ ಸಣ್ಣ-ಪುಟ್ಟ ವಹಿವಾಟು ನಡೆಸುವವರಿಗೆ ಅನುಕೂಲವಾಗುವ ಮಾಹಿತಿ ತಂತ್ರಜ್ಞಾನ ಉತ್ಪನ್ನಗಳನ್ನು ಸಿದ್ಧಪಡಿಸುವ ಕಂಪನಿಯಿದು. ಕಂಪ್ಯೂಟರ್‌ಗಳನ್ನು ಖರೀದಿಸಲಾಗದಿದ್ದರೂ ಸಣ್ಣ-ಪುಟ್ಟ ಉದ್ದಿಮೆದಾರರು ಮೊಬೈಲ್ ಫೋನ್‍ಗಳನ್ನು ಖಂಡಿತವಾಗಿಯೂ ಬಳಸುತ್ತಿರುತ್ತಾರೆ. ಈ ಮೊಬೈಲ್ ಫೋನ್ ಸಂಪರ್ಕದ ಮೂಲಕವೇ ತಮ್ಮ ಬ್ಯುಸಿನೆಸ್ ಅನ್ನು ತ್ವರಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸಿಕೊಂಡು ಹೋಗಲು ಪಾರೀಖ್ ಅನುವು ಮಾಡಿಕೊಡುತ್ತಿದ್ದಾರೆ. ಜತೆಗೆ ಅಭಿವೃದ್ಧ ರಾಷ್ಟ್ರಗಳ ದೊಡ್ಡ ದೊಡ್ಡ ಕಂಪನಿಗಳೊಂದಿಗೆ ವಹಿವಾಟು ನಡೆಸಬಲ್ಲ ಸಾಮರ್ಥ್ಯವನ್ನೂ ಅವರ ತಂತ್ರಾಂಶ ಅಂದರೆ ಸಾಫ್ಟ್‍ವೇರ್ ನೀಡುತ್ತಿದೆ.

ಅಭಿವೃದ್ಧಶೀಲ ರಾಷ್ಟ್ರಗಳಲ್ಲಿ ಮೊಬೈಲ್ ಫೋನ್‍ಗಳ ವ್ಯಾಪಕ ಬಳಕೆಯನ್ನು ಗಮನಿಸಿದ್ದ ಪಾರೀಖ್, ಅವುಗಳಿಗೇ ಪಕ್ಕಾದ ತಂತ್ರಾಂಶವನ್ನು ರೂಪಿಸುವತ್ತ ಗಮನ ಹರಿಸಿದರು. ಹೀಗೆ ಅವರು ಸೃಷ್ಟಿಸಿದ ಮೊದಲ ತಂತ್ರಾಂಶದ ಹೆಸರು ‘ಕ್ಯಾಮ್’ - ಈ ಹೆಸರು ಏಕೆಂದರೆ ಕ್ಯಾಮೆರ ಸಹಿತವಾದ ಮೊಬೈಲ್ ಫೋನ್‍ಗಳನ್ನು ಬಳಸಿಕೊಳ್ಳುವ ಮಧ್ಯವರ್ತಿ ತಂತ್ರಾಂಶವಿದು. ಈ ಮಧ್ಯವರ್ತಿ ಸಲಕರಣೆಯ ಕರ್ತವ್ಯವೇನೆಂದರೆ ಮೊಬೈಲ್ ಫೋನನ್ನು ಕೇವಲ ಚಿತ್ರ, ಅಂಕೆ-ಅಂಶ, ದತ್ತಾಂಶ ಸೆರೆಹಿಡಿವ ಕ್ಯಾಮೆರ ಮಾತ್ರವಾಗಿ ಬಳಸದೆಯೆ ದಾಖಲೆಗಳನ್ನು ಚಿತ್ರೀಕರಿಸಿಕೊಳ್ಳಬಲ್ಲ ಸ್ಕ್ಯಾನರ್ ಆಗಿ ಮಾರ್ಪಡಿಸುತ್ತದೆ. ಅಲ್ಲದೆ ದತ್ತಾಂಶಗಳನ್ನು ಸಂಸ್ಕರಣೆ ಮಾಡುತ್ತದೆ. ಹಾಗೂ ಧ್ವನಿ ಮತ್ತು ಚಲನಚಿತ್ರ ತುಣುಕುಗಳನ್ನು ತನ್ನೊಡಲೊಳಗೆ ಸೇರಿಸಿಕೊಳ್ಳುತ್ತದೆ. ಅಂದರೆ ನಿಮ್ಮ ಕಂಪ್ಯೂಟರ್ ಮಾಡಬಲ್ಲ ಬಹುತೇಕ ಕೆಲಸಗಳನ್ನು ಮಧ್ಯವರ್ತಿ ಸಲಕರಣೆಯ ನೆರವಿನಿಂದ ಮೊಬೈಲ್ ಫೋನೇ ಮಾಡುತ್ತದೆ. ನಿಮಗೆ ‘ಮೈಕ್ರೊಫೈನಾನ್ಸ್’ ಗೊತ್ತಿರಬೇಕು. ತಮ್ಮ ಅದೆಷ್ಟೋ ಅಗತ್ಯಗಳನ್ನು ಪೂರೈಸಿಕೊಳ್ಳಲು ಹಳ್ಳಿಗಳಲ್ಲಿನ ಜನ ಒಂದು ಸಾವಿರ ರೂಪಾಯಿಗಿಂತಲೂ ಕಡಿಮೆ ಮೊತ್ತದ ಸಾಲವನ್ನು ಹಣಕಾಸು ಸಂಸ್ಥೆಗಳಿಂದ ಪಡೆಯುತ್ತಾರೆ. ಇಂಥ ಮೈಕ್ರೊಫೈನಾನ್ಸ್ ಯೋಜನೆಗಳನ್ನು ಜಾರಿಗೊಳಿಸುವಾಗ ಸಾಕಷ್ಟು ಸಂಖ್ಯೆಯಲ್ಲಿ ದಾಖಲೆ ಪತ್ರಗಳನ್ನು ನಿರ್ವಹಣೆ ಮಾಡಬೇಕಾಗುತ್ತದೆ. ದೊಡ್ಡ ಹಣಕಾಸು ಸಂಸ್ಥೆಗಳಿಗೆ ಇಂಥ ವಹಿವಾಟುಗಳು ಲಾಭದಾಯಕವಲ್ಲ. ಇದರ ಬದಲು ಹಳ್ಳಿಯ ಒಂದಷ್ಟು ಜನರು ಒಗ್ಗೂಡಿ ಸಹಕಾರ ಒಕ್ಕೂಟವನ್ನು ಸ್ಥಾಪಿಸಿಕೊಳ್ಳಬಹುದು. ಸದಸ್ಯರ ಮೂಲಕ ಸಂಗ್ರಹಿಸಿದ ಠೇವಣಿಗಳನ್ನು ಅಗತ್ಯ ಬಿದ್ದವರಿಗೆ ಅಲ್ಪಾವಧಿಯ ಸಾಲದಂತೆ ನೀಡಬಹುದು. ಇಂಥ ಸ್ವಸಹಾಯ ಸಮೂಹಗಳು ದೊಡ್ಡದಾಗಿ ಬೆಳೆದಂತೆ ಬ್ಯಾಂಕುಗಳು ಅಥವಾ ಸಹಕಾರ ಸಂಸ್ಥೆಗಳ ಮೂಲಕ ದೊಡ್ಡ ಮೊತ್ತದ, ದೀರ್ಘಾವಧಿಯ ಸಾಲಗಳನ್ನು ಪಡೆಯಬಹುದು. ಇಂಥ ಹಣವನ್ನು ಸದಸ್ಯರಿಗೆ ಸಾಲ ನೀಡಲು ಬಳಸಬಹುದು.


ಗ್ರಾಮೀಣ ಮಟ್ಟದಲ್ಲಿ, ಬಹುತೇಕವಾಗಿ ಮಹಿಳೆಯರು ಇಂಥ ಸ್ವಸಹಾಯ ಒಕ್ಕೂಟವನ್ನು ಸ್ಥಾಪಿಸಿಕೊಂಡರೆ, ಇವರನ್ನು ಅತ್ಯಾಧುನಿಕ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗೆ ಒಗ್ಗಿಸುವುದು ಹೇಗೆ? ಇದು ಪಾರೀಖ್ ಅವರ ಮುಂದಿದ್ದ ಪ್ರಶ್ನೆ. ತಮ್ಮ ಕ್ಯಾಮ್ ಸಲಕರಣೆಯ ಮೂಲಕ ಕ್ಯಾಮೆರ ಫೋನ್ ಸೆರೆಹಿಡಿದ ಮಾಹಿತಿಯನ್ನು ಆಗಿಂದಾಗಲೇ ಬ್ಯಾಂಕಿಗೆ ತಲುಪಿಸಬೇಕು. ಇದಕ್ಕಾಗಿ ಅವರು ಮೊರೆಹೊಕ್ಕಿದ್ದು ಇಂಟರ್‌ನೆಟ್ ತಂತ್ರಜ್ಞಾನ. ಇಂಟರ್‌ನೆಟ್ ಎಂದೊಡನೆಯೆ ನಮ್ಮ ಕಲ್ಪನೆಗೆ ಬರುವುದು ಇಂಗ್ಲಿಷ್ ಹಾಗೂ ಹಳ್ಳಿಯ ಹೆಣ್ಣು ಮಕ್ಕಳಿಗೆ ಅರ್ಥವಾಗದ ಕಂಪ್ಯೂಟರ್ ಸಂಜ್ಞೆಗಳು. ಈ ಸಮಸ್ಯೆಯನ್ನು ಮೊದಲೇ ಮನಗಂಡಿದ್ದ ಪಾರೀಖ್ ಅಲ್ಪಮಟ್ಟದ ವಿದ್ಯಾಭ್ಯಾಸ ಇರುವವರೂ ಸುಲಭವಾಗಿ ಉಪಯೋಗಿಸಬಲ್ಲಂತೆ ತಮ್ಮ ವ್ಯವಸ್ಥೆಯನ್ನು ರೂಪಿಸಹೊರಟರು. ಸಾಧ್ಯವಿರುವೆಡೆಯೆಲ್ಲ ‘ಐಕಾನ್’ ಅಥವಾ ‘ಸಂಜ್ಞೆ ಗುರುತು’ಗಳನ್ನು ಬಳಸಿದರು. ಅನಿವಾರ್ಯವಿಲ್ಲದೆಡೆ ದೇಶೀ ಭಾಷೆಯ ಅಕ್ಷರಗಳಿರುವ ಗುಂಡಿಗಳನ್ನೇ ಅಳವಡಿಸಿದರು. ಭಾರತದಂಥ ದೇಶದಲ್ಲಿ ಕಾಗದದ ಮೇಲಿನ ದಾಖಲೆಗಳೇ ನಂಬಿಕಾರ್ಹ. ಅದಕ್ಕೆಂದು ಪಾರೀಖ್ ಜಾರಿಗೆ ತಂದದ್ದು ಬಾರ್‌ಕೋಡ್ ಅಂದರೆ ವಿವಿಧ ಗಾತ್ರದ ಗೆರೆಗಳ ಸಂಕೇತವನ್ನು ಓದುವ ವ್ಯವಸ್ಥೆ. ಪ್ರತಿಯೊಂದು ಅರ್ಜಿ ನಮೂನೆಯ ಕೊನೆಯಲ್ಲಿ ಇಂಥ ಸಂಕೇತವನ್ನು ಮೊದಲೇ ಮುದ್ರಿಸಿದ್ದರೆ, ಕೇವಲ ಸಂಕೇತವನ್ನು ಮೊಬೈಲ್ ಫೋನ್ ಸೆರೆಹಿಡಿದು ಯಾವ ದಾಖಲೆ ಸಂಗ್ರಾಹಕನ ಕಡತದಲ್ಲಿದೆಯೆಂದು ಧನ ಸಹಾಯ ಮಾಡುವ ಬ್ಯಾಂಕಿಗೆ ತಿಳಿಸಬಹುದು. ಜತೆಗೆ ಇಡೀ ಅರ್ಜಿ ನಮೂನೆ, ದಾಖಲೆ ಪತ್ರಗಳು ಮತ್ತಿತರ ಅಡಕಗಳನ್ನು ಫೋನಿನ ಮೂಲಕ ಸ್ಕ್ಯಾನ್ ಮಾಡಿ ಕೂಡಲೇ ಬ್ಯಾಂಕಿನ ಕಂಪ್ಯೂಟರ್‌ಗೆ ರವಾನಿಸಬಹುದು. ಅಂದರೆ ಪುಟ್ಟ ಗ್ರಾಮ ಹಾಗೂ ದೊಡ್ಡ ಪಟ್ಟಣಗಳ ನಡುವೆ ಸಂಪರ್ಕ ಸೇತುವಾಗಿ ಈ ಮೊಬೈಲ್ ಫೋನ್ ಕೆಲಸ ಮಾಡಬಲ್ಲದು ಎಂದರ್ಥ. ನಿಜವಾದ ಅರ್ಥದಲ್ಲಿ ಅತ್ಯಾಧುನಿಕ ತಂತ್ರಜ್ಞಾನವೊಂದು ಜನ ಸಾಮಾನ್ಯರನ್ನು ಮುಟ್ಟಿದೆಯೆಂದೂ ಅರ್ಥ.

ಸದ್ಯಕ್ಕೆ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಲಗಳಿಗೆ ನಿರ್ದಿಷ್ಟ ಬಡ್ಡಿ ದರಗಳಿವೆ. ಯಾವುದೇ ಒಂದು ಹಳ್ಳಿಯ ಜನರು ನಿಯತ್ತಾಗಿ ಕಾಲಾವಧಿಗೆ ಮುನ್ನವೇ ಸಾಲ ತೀರಿಸಿದರೆ ವಿಶೇಷವಾದ ಪ್ರೋತ್ಸಾಹ ಧನವನ್ನು ನೀಡಲಾಗುವುದಿಲ್ಲ. ಅಥವಾ ಯಾವುದೇ ಒಂದು ಉತ್ಸಾಹಿ ಸ್ವಸಹಾಯ ಒಕ್ಕೂಟವು ಅತ್ಯುತ್ತಮ ಕಾರ್ಯಕ್ಷಮತೆಯಿಂದ ನಿರ್ವಹಣೆ ಮಾಡಿ ಬ್ಯಾಂಕಿಗೆ ಲಾಭ ತಂದುಕೊಟ್ಟಿದ್ದರೆ, ಅದನ್ನು ಗುರುತಿಸಿ ಪ್ರೋತ್ಸಾಹ ಧನ ನೀಡಲು ಸಾಧ್ಯವಿಲ್ಲ. ಅಂದರೆ ಉತ್ತಮ ಕಾರ್ಯಕ್ಕೆ ವಿಶೇಷವಾದ ಬೆಲೆಯಿರುವುದಿಲ್ಲ. ಅಂಥದೊಂದು ವಿಶೇಷ ಕಾರ್ಯ ನಡೆದಿದೆಯೆಂಬುದೇ ಎಷ್ಟೋ ಬಾರಿ ಗೊತ್ತಾಗುವುದಿಲ್ಲ. ಕಾರಣ, ಅಗತ್ಯ ದಾಖಲೆ, ಅಂಕೆ-ಅಂಶಗಳನ್ನು ಕಾಲದಿಂದ ಕಾಲಕ್ಕೆ ಬ್ಯಾಂಕ್ ಪಡೆದಿರುವುದಿಲ್ಲ. ಅಕಸ್ಮಾತ್ ಅಂಥ ದಾಖಲೆಗಳು ಲಭ್ಯವಿದ್ದರೂ ಅವುಗಳನ್ನು ವಿಶ್ಲೇಷಣೆ ಮಾಡಿ ಸಾಧಕರ ಪಟ್ಟಿ ತಯಾರಿಸುವ ವ್ಯವಧಾನವಿರುವುದಿಲ್ಲ. ಪಾರೀಖ್ ಅವರ ತಂತ್ರಾಂಶ ಸಲಕರಣೆಯಲ್ಲಿ ಈ ಎಲ್ಲ ನ್ಯೂನತೆಗಳನ್ನೂ ಹೋಗಲಾಡಿಸಲಾಗಿದೆ. ನಿರ್ದಿಷ್ಟ ಕಾಲಾವಧಿಯಲ್ಲಿ ಬ್ಯಾಂಕ್ ನೀಡಿದ ಧನ ಸಹಾಯವೆಷ್ಟು? ಅದರಲ್ಲಿ ಸದ್ವಿನಿಯೋಗವಾದ ಮೊತ್ತವೆಷ್ಟು? ಎಷ್ಟರ ಮಟ್ಟಿಗೆ ವಸೂಲಾತಿ ನಡೆದಿದೆ? ವಿಳಂಬವಾಗಿದ್ದಲ್ಲಿ, ಕಾರಣಗಳೇನು? ಇದನ್ನು ತಡೆಯಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು? ... ಹೀಗೆ ಹತ್ತಾರು ಬಗೆಯ ಬ್ಯಾಂಕಿಂಗ್ ಲೆಕ್ಕಾಚಾರಗಳನ್ನು ಸರಳವಾಗಿ ಗಣನೆ ಮಾಡಬಹುದು.

ಪಾರೀಖ್ ಅವರ ತಂತ್ರಾಂಶವು ತಮಿಳುನಾಡಿನ ಮಧುರೈ ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿನ ರೈತ ಸಮುದಾಯದಿಂದ ಪ್ರಮಾಣೀಕರಣಗೊಂಡಿದೆ. ಅಷ್ಟೇ ಅಲ್ಲ, ಮಧ್ಯ ಅಮೆರಿಕದ ಪುಟ್ಟ ರಾಷ್ಟ್ರ ಗ್ವಾಟೆಮಾಲದ ಕಾಫಿ ಬೆಳೆಗಾರರ ಅರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸಿದೆ. ಈ ಕಾರ್ಯಗಳಿಗೆಂದೇ ರೂಪುಗೊಂಡ ಮಾಹಿತಿ ನಿರ್ವಹಣಾ ವ್ಯವಸ್ಥೆಯ ಹೆಸರು ‘ಮಹಾ ಕಲಶಂ’. ಪಾರೀಖ್ ಅವರ ಮೇರು ಸದೃಶ ಕಾರ್ಯಕ್ಕೆ ಸಾಕ್ಷಿಯಂತಿರುವ ಈ ವ್ಯವಸ್ಥೆಗೆ ಅಮೆರಿಕದ ಪ್ರತಿಷ್ಠಿತ ತಂತ್ರಜ್ಞಾನ ವಿದ್ಯಾಲಯ ‘ಮೆಸಾಶ್ಯುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ - ಎಂ.ಐ.ಟಿ’ಯು ಹೊರಡಿಸುವ ನಿಯತಕಾಲಿಕ ‘ಟೆಕ್ನಾಲಜಿ ರೆವ್ಯೂ’ವಿನ ವಾರ್ಷಿಕ ಪುರಸ್ಕಾರ ದಕ್ಕಿದೆ. ಮೂವತ್ತೈದು ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ತಂತ್ರಜ್ಞಾನ ಸಂಶೋಧಕರುಗಳಿಗೆಂದೇ ಮೀಸಲಿಟ್ಟ ಈ ಪ್ರತಿಷ್ಠಿತ ಪುರಸ್ಕಾರಗಳ ಪಟ್ಟಿಯಲ್ಲಿ ಪಾರೀಖ್ ಅವರ ಸಾಧನೆ ಗಣನೀಯವಾಗಿ ದಾಖಲಾಗಿದೆ. ‘ಇದೊಂದು ಮಾನವೀಯ ಸಾಧನೆ’ ಎಂದು ನಿಯತಕಾಲಿಕದ ಸಂಪಾದಕ ಮಂಡಳಿ ಕೊಂಡಾಡಿದೆ. ತಂತ್ರಜ್ಞಾನ ಅದರಲ್ಲೂ ಮಾಹಿತಿ ತಂತ್ರಜ್ಞಾನ ಉಳ್ಳವರು ಮತ್ತು ಉಳ್ಳದವರ ನಡುವೆ ದೊಡ್ಡ ಕಂದಕ ನಿರ್ಮಿಸುತ್ತಿದೆ. ಇಂಥ ಕಂದಕ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ ಎಂಬುದು ಸಾಮಾನ್ಯ ಆಪಾದನೆ. ಪಾರೀಖ್ ಇಂಥ ಕಂದಕವನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬೇಕು, ಅಂಥ ಕಾರ್ಯ ಮಾಹಿತಿ ತಂತ್ರಜ್ಞಾನದಿಂದಲೇ ಸಾಧ್ಯವಾಗಬೇಕು ಎಂದು ಬಲವಾಗಿ ನಂಬಿದವರು. ತಮ್ಮ ಕನಸಿನ ಮೊದಲ ಮಾದರಿಯನ್ನವರು ಆಗಲೇ ಯಶಸ್ವಿಗೊಳಿಸಿದ್ದಾರೆ. ಪಾರೀಖರಂತವರು ಅದೇಶ್ಟೋ ಮಂದಿ ಅಮೆರಿಕಕ್ಕೆ ಹೋಗಿದ್ದಾರೆ, ಅಲ್ಲಿಯೇ ಹುಟ್ಟಿ ಬೆಳೆದು ಗಣನೀಯ ಸಾಧನೆಗಳನ್ನು ಮಾಡಿದ್ದಾರೆ. ಆದರೆ ಜನ ಸಾಮಾನ್ಯರಿಗೆ ಅದರಲ್ಲೂ ಭಾರತದಂಥ ಅಭಿವೃದ್ಧಶೀಲ ರಾಷ್ಟ್ರಗಳ ಬಡಮಂದಿಗೆ ನೆರವಾಗುವಂತೆ ತಂತ್ರಜ್ಞಾನಗಳನ್ನು ಬಳಸಿಕೊಂಡವರು ಕಡಿಮೆ. ಇದಕ್ಕೆ ಅಪವಾದವೆಂಬಂತೆ ಪಾರೀಖ್ ಪ್ರಶಂಸಾರ್ಹ ಸಾಧನೆ ಮಾಡಿದ್ದಾರೆ. ಭಾರತದಲ್ಲೊ, ಅಮೆರಿಕದಲ್ಲೊ ಮತ್ತಷ್ಟು ಪಾರೀಖರು ಹುಟ್ಟಿಬರಲಿ ಎಂದು ಹಾರೈಸೋಣ.


(ಕೃಪೆ: ‘ವಿಜಯ ಕರ್ನಾಟಕ’, 20-08-2007)

Tuesday, August 14, 2007

ಯಕೃತ್ತಿನ ಜೀವಕೋಶಗಳಿಗೆ ಇನ್ನಿಲ್ಲ ವಿನಾಶ, ಕುತ್ತು!

ಮ್ಮ ದೇಹಕ್ಕೆ ಯಾವುದೇ ಒಂದು ಮದ್ದು ಒಗ್ಗುತ್ತದೆಯೆ? ಎಂಬ ಪರಿಶೀಲನೆ ನಡೆಸುವಾಗ ಅದು ‘ಲಿವರ್’ ಅಥವಾ ‘ಯಕೃತ್ತು’ವಿನ ಮೇಲೆ ಯಾವ ಬಗೆಯ ಪರಿಣಾಮಗಳನ್ನು ಬೀರುತ್ತದೆ ಎಂದು ತಿಳಿಯುವುದು ಅವಶ್ಯ. ಹೀಗಾಗಿ ಆವಿಷ್ಕಾರವಾದ ಹೊಸ ಮದ್ದಿನ ಮೊದಲ ಮಾದರಿಗಳನ್ನು ಯಕೃತ್ತಿನ ಮೇಲೆ ಪ್ರಯೋಗಿಸಿ ಅಡ್ಡ ಪರಿಣಾಮಗಳ ಬಗ್ಗೆ ದೀರ್ಘ ಕಾಲ ಅಧ್ಯನಗಳನ್ನು ನಡೆಸಲಾಗುತ್ತದೆ. ಏಕೆಂದರೆ, ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯಲ್ಲಿ ‘ಯಕೃತ್ತಿನ ಪಾತ್ರ ಬಹು ದೊಡ್ಡದು. ಪಿತ್ತರಸ ಸ್ರವಿಸುವ ಈ ನಾಳಿಯ ಗ್ರಂಥಿಯು ಜಠರದ ಬಲಭಾಗದಲ್ಲಿರುತ್ತದೆ. ನಾವು ಸೇವಿಸುವ ಆಹಾರದಲ್ಲಿನ ಕೊಬ್ಬನ್ನು ಇದು ಕರಗಿಸುತ್ತದೆ. ಗ್ಲುಕೋಸ್ ಅನ್ನು ಸಂಗ್ರಹಿಸಬಹುದಾದ ಶಕ್ತಿರೂಪವಾದ ಗ್ಲೈಕೋಜೆನ್ ಆಗಿ ಪರಿವರ್ತಿಸುತ್ತದೆ. ಪ್ರೋಟಿನ್‍ಗಳ ಆಧಾರ ಸ್ತಂಭಗಳಾದ ಅಮೈನೊ ಆಮ್ಲವನ್ನು ಇದು ರೂಪಿಸುತ್ತದೆ. ಮೂತ್ರಕ್ಕೆ ಸೇರುವ ವ್ಯರ್ಥ ಸಾಮಗ್ರಿ ಯೂರಿಯ ಅನ್ನು ಇದೇ ಉತ್ಪಾದಿಸುತ್ತದೆ. ದೇಹಕ್ಕೆ ಅಗತ್ಯವಾದ ಕೆಲವೊಂದು ರಕ್ತ ಪ್ರೋಟಿನ್‍ಗಳನ್ನು ಹಾಗೂ ಕಿಣ್ವಗಳನ್ನು ಇದು ಉತ್ಪಾದಿಸುತ್ತದೆ. ದೇಹವಿಡೀ ಪರಿಚಲಿಸುವ ರಕ್ತ ಯಕೃತ್ತಿನ ವ್ಯಾಪ್ತಿಯಡಿಯಲ್ಲಿ ಬಂದಾಗ ಜೀವಾಣು ವಿಷಗಳ ಇರುವಿಕೆಯ ಬಗ್ಗೆ ಅದು ತಪಾಸಣೆ ನಡೆಸುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ಅಂಥ ವಿಷಗಳನ್ನು ನಿವಾರಿಸುತ್ತದೆ. ಅಂದರೆ ನಮ್ಮ ಯಕೃತ್ತು ಸರಿಯಾಗಿ ಕೆಲಸ ಮಾಡುತ್ತಿದ್ದರೆ ದೇಹದ ಸ್ವಾಸ್ಥ್ಯವೂ ಚೆನ್ನಾಗಿದೆಯೆಂದು ಅರ್ಥ.

ಮನುಷ್ಯ ದೇಹದ ಯಕೃತ್ತು ಒಂದು ವಿಸ್ಮಯಗಳ ಆಗರ. ತನ್ನೊಳಗೆ ಬಂದ ರಾಸಾಯನಿಕ ಸಂಯುಕ್ತಗಳನ್ನು ಮತ್ತೊಂದು ರಾಸಾಯನಿಕ ಸಂಯುಕ್ತವಾಗಿ ಇದು ಪರಿವರ್ತಿಸುತ್ತದೆ. ಆದರೆ ಪ್ರಯೋಗಶಾಲೆಯಲ್ಲಿ ನೀವು ಸಂಸ್ಕರಿಸಿದ ರಾಸಾಯನಿಕ ಸಂಯುಕ್ತವನ್ನು ಮತ್ತೊಂದು ಯಾವ ರೂಪದ ರಾಸಾಯನಿಕ ಸಂಯುಕ್ತವಾಗಿ ಇದು ಪರಿವರ್ತಿಸಬಲ್ಲದು ಎಂದು ಲೆಕ್ಕ ಹಾಕಲಾಗುವುದಿಲ್ಲ. ಅಷ್ಟರ ಮಟ್ಟಿಗೆ ಅದೊಂದು ಗೌಪ್ಯ ಕಾರ್ಯಾಗಾರ. ಎಷ್ಟೋ ಬಾರಿ ಔಷಧದ ರಾಸಾಯನಿಕವು ವಿಷವಸ್ತುವಾಗಿರುವುದಿಲ್ಲ, ಆದರೆ ಯಕೃತ್ತಿನ ಕಾರ್ಯಾಚರಣೆಯಿಂದ ವಿಷವಸ್ತುವಾಗಿ ಬದಲಾಗುವ ಸಾಧ್ಯತೆಯಿರುತ್ತದೆ. ಕಂಪ್ಯೂಟರ್ ಮಾದರಿಗಳೂ ಸೇರಿದಂತೆ ಸದ್ಯಕ್ಕೆ ಲಭ್ಯವಿರುವ ಯಾವುದೇ ತಂತ್ರಜ್ಞಾನಗಳು ಯಕೃತ್ತಿನ ಕಾರ್ಯಾಚರಣೆಯನ್ನು ನಿಖರವಾಗಿ ತಿಳಿಪಡಿಸಲು ಸಾಧ್ಯವಿಲ್ಲ. ಅಂದರೆ ಮದ್ದೊಂದರ ಕಾರ್ಯಕ್ಷಮತೆಯನ್ನು ಪರಿಪೂರ್ಣವಾಗಿ ಅಳೆಯಲು ಯಕೃತ್ತಿನ ಮೇಲೆ ಪ್ರಯೋಗ ನಡೆಸಬೇಕು. ಮನುಷ್ಯನಿಗೆ ಹತ್ತಿರದ ಸ್ತನಿಗಳ ಮೇಲೆ (ಅವುಗಳ ಯಕೃತ್ತಿನ ಮೇಲೆ) ಪ್ರಯೋಗಗಳನ್ನು ಹಮ್ಮಿಕೊಳ್ಳಬಹುದಲ್ಲವೆ? ಎಂಬುದು ಪ್ರಶ್ನೆ. ಪ್ರತಿಯೊಂದು ಜೀವಿಯ ಯಕೃತ್ತಿನ ಸಂಯೋಜನೆ ಹಾಗೂ ಕಾರ್ಯಾಚರಣೆಗಳು ವಿಭಿನ್ನವಾಗಿರುವ ಕಾರಣ, ತುಲನಾತ್ಮಕ ಪ್ರಯೋಗ ಫಲಿತಾಂಶಗಳು ನಿಖರವಾಗಿರಲು ಸಾಧ್ಯವಿಲ್ಲ.


ಯಕೃತ್ತನ್ನು ಕಾಡುವ ಮಾರಣಾಂತಕ ಕಾಯಿಲೆಗಳೆಂದರೆ ‘ಮಲೇರಿಯ’ ಹಾಗೂ ‘ಹೆಪಟೈಟಿಸ್-ಸಿ’. ಇವುಗಳ ನಿವಾರಣೆಗೆ ಅತ್ಯಂತ ಸುರಕ್ಷವಾದ, ಅಗ್ಗದ ದರದಲ್ಲಿ ಲಭ್ಯವಾಗುವ, ಅಡ್ಡ ಪರಿಣಾಮಗಳು ಕಡಿಮೆ ಇರುವ, ಸುಲಭ ಮಾರ್ಗದಲ್ಲಿ ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಬಲ್ಲ ಔಷಧಗಳನ್ನು ಸಂಯೋಜಿಸಲಾಗುತ್ತಿದೆ. ಹೊಸ ಮದ್ದುಗಳು ಆವಿಷ್ಕಾರವಾದ ಸಂದರ್ಭಗಳಲ್ಲಿ, ಮನುಷ್ಯನ ಯಕೃತ್ತಿನ ಮೇಲೆ ನೇರವಾಗಿ ಪ್ರಯೋಗಗಳನ್ನು ನಡೆಸಲು ಸಾಧ್ಯವಾಗದ ಕಾರಣ, ಯಕೃತ್ತಿನಿಂದ ಹೊರತೆಗೆದ ಜೀವಕೋಶಗಳ ಮೇಲೆ ವಿಸ್ತೃತ ಅಧ್ಯಯನಗಳನ್ನು ಕೈಗೊಳ್ಳಲಾಗುತ್ತದೆ. ಹೀಗಾಗಿ ಜಗತ್ತಿನಾದ್ಯಂತ ಯಕೃತ್ತಿನ ಜೀವಕೋಶಗಳಿಗೆ ಬೇಡಿಕೆ ಅತ್ಯಂತ ಹೆಚ್ಚಿನದು. ಒಂದು ಅಂದಾಜಿನಂತೆ ಈ ಮಾರುಕಟ್ಟೆಯ ಮೌಲ್ಯ ವಾರ್ಷಿಕ ಎರಡು ಶತ ಕೋಟಿ ಅಮೆರಿಕನ್ ಡಾಲರ್‌ಗಳು (ಅಂದರೆ ಸರಿ ಸುಮಾರು ಎಂಟು ಸಹಸ್ರ ಕೋಟಿ ರೂಪಾಯಿಗಳು). ಆದರೆ ದುಡ್ಡು ಚೆಲ್ಲುತ್ತೇನೆಂದರೂ ಯಕೃತ್ತಿನ ಜೀವಕೋಶಗಳು ಅಷ್ಟು ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಈ ಹಿಂದೆ ತಿಳಿಸಿದಂತೆ ಯಕೃತ್ತು ಮನುಷ್ಯ ದೇಹದ ಅತಿ ಮುಖ್ಯ ಅಂಗ. ಇಂದಿನ ಬದಲಿ ಜೋಡಣೆ ಯುಗದಲ್ಲಿ ಯಕೃತ್ತನ್ನು ‘ಆಕರ ಕೋಶ’ ಅಂದರೆ ‘ಸ್ಟೆಮ್ ಸೆಲ್ಸ್’ಗಳ ನೆರವಿನಿಂದ ಪ್ರತ್ಯೇಕವಾಗಿ ಬೆಳೆಸಿ ಶಸ್ತ್ರಕ್ರಿಯೆಯ ಮೂಲಕ ಪುನರ್ಜೋಡಣೆ ಮಾಡಬಹುದು. ಹೀಗೆ ಯಕೃತ್ತನ್ನು ನಿರ್ಮಿಸುವಾಗ ಹೆಚ್ಚುವರಿಯಾದ ಅಥವಾ ಪರಿಪೂರ್ಣವಾಗಿ ಬೆಳೆಯದ ಅಥವಾ ನಿರುಪಯೋಗಿಯೆನಿಸಿದ ಜೀವಕೋಶಗಳು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತವೆ. ಗುಣ ಮಟ್ಟ ಕಡಿಮೆಯಿರುವ ಅಂಥ ಜೀವಕೋಶಗಳನ್ನು ಔಷಧ ಕಂಪನಿಗಳು ಕೊಂಡು ತಮ್ಮ ಪ್ರಯೋಗಗಳಿಗೆ ಬಳಸಿಕೊಳ್ಳುತ್ತವೆ. ಇವುಗಳ ಜೀವಿತಾವಧಿ ತೀರಾ ಕಡಿಮೆಯಿರುವುದರಿಂದ ಲಭ್ಯವಿರುವ ಸಮಯದಲ್ಲಿಯೇ ಪ್ರಯೋಗಗಳನ್ನು ಹಮ್ಮಿಕೊಳ್ಳಬೇಕು. ಅಂದರೆ ಬೇಕೆಂದಾಗಲೆಲ್ಲಾ ಯಕೃತ್ತಿನ ಜೀವಕೋಶಗಳು ಸಿಗುವುದಿಲ್ಲ ಎಂದರ್ಥ.


ಈ ಬಗ್ಗೆ ಚಿಂತಿಸುತ್ತಿದ್ದ ಜೀವ ವಿಜ್ಞಾನಿಗಳು ಹಾಗೂ ಜೈವಿಕ ತಂತ್ರಜ್ಞರು ಕಳೆದ ಹತ್ತು ವರ್ಷಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದಾರೆ. ಜೀವಿಯೊಂದರ ಗುಣಾವಗುಣಗಳನ್ನು ನಿರ್ಧರಿಸುವ ‘ಜೀನ್’ ಅಥವಾ ‘ಗುಣಾಣು’ ಹಾಗೂ ‘ವರ್ಣತಂತು’ ಅಥವಾ ‘ಕ್ರೋಮೋಸೋಮ್’ಗಳ ರಚನೆ ಹಾಗೂ ಅವುಗಳ ರಾಸಾಯನಿಕ ಸಂಯೋಜನೆಗಳ ಬಗ್ಗೆ ಆರಂಭವಾದ ಮಹತ್ವದ ಯೋಜನೆಯ ಹೆಸರು ‘ಜೀನೋಮ್’. ‘ಜೀನ್’ಗಳು ರೂಪುಗೊಳ್ಳಲು ಎಂಥ ನೀಲಿನಕ್ಷೆ ಆಧಾರವಾಗಿದೆಯೆಂಬ ವಿಷಯ ಮನದಟ್ಟಾದಂತೆ ಒಂದು ಜೀವಿಯ ಜೀನ್ ಅನ್ನು ಮತ್ತೊಂದು ಜೀವಿಗೆ ಜೋಡಿಸುವ ಕಸಿ ವಿಜ್ಞಾನ ಪ್ರಗತಿ ಸಾಧಿಸಿತು. ಈ ಸಂದರ್ಭದಲ್ಲಿ ಜೀವ ವಿಜ್ಞಾನಿಗಳು ಇಲಿಗಳ ದೇಹದಲ್ಲಿ ಮನುಷ್ಯನ ಯಕೃತ್ತಿನ ಜೀವಕೋಶಗಳನ್ನು ಬೆಳೆಸಲು ಸಾಧ್ಯವೆ? ಎಂಬ ಪರಿಶೀಲನೆ ನಡೆಸಿದರು. ಮೂರು ವರ್ಷಗಳ ಹಿಂದೆ ಮಾನವ ಯಕೃತ್ತಿನ ಜೀವಕೋಶಗಳನ್ನು ಇಲಿಯ ದೇಹದಲ್ಲಿ ಸಂಸ್ಕರಿಸಲು ಸಾಧ್ಯವೂ ಆಯಿತು. ಆದರೆ ಪ್ರಯೋಗಗಳು ಅಷ್ಟೊಂದು ಯಶಸ್ಸನ್ನು ತರಲಿಲ್ಲ. ಜೀನ್ ಮಾರ್ಪಡಿಸಿಕೊಂಡ ಇಲಿಗಳನ್ನು ಸಾಕುವುದು ಅಷ್ಟು ಸುಲಭವಾಗಿರಲಿಲ್ಲ. ಇಲಿಗಳ ದೇಹದಲ್ಲಿ ಮಾನವ ಯಕೃತ್ತಿನ ಜೀವಕೋಶಗಳನ್ನು (ಜೀನ್ ಕಸಿಯ ಮೂಲಕ) ಸೇರ್ಪಡೆ ಮಾಡಲು ಲಭ್ಯವಿರುವ ಕಾಲಾವಧಿಯೂ ತೀರಾ ಅಲ್ಪವಾಗಿರುತ್ತಿದ್ದವು. ಬಹುತೇಕ ಬಾರಿ ಇಲಿಯ ಯಕೃತ್ತು ಮಾನವ ಯಕೃತ್ತಿನ ಜೀವಕೋಶಗಳನ್ನು ಒಪ್ಪಿಕೊಳ್ಳದೆಯೆ ತಿರಸ್ಕರಿಸುತ್ತಿದ್ದವು. ಜತೆಗೆ ಇಲಿಗಳಿಗೆ ಅದೇಷ್ಟೇ ರೋಗನಿರೋಧಕ ಚಿಕಿತ್ಸೆ ನೀಡಿದ್ದರೂ, ಬಹುಬೇಗ ಕಾಯಿಲೆಗಳಿಗೆ ತುತ್ತಾಗುತ್ತಿದ್ದವು.


ಇವೆಲ್ಲ ಕೊರತೆಗಳ ನಿವಾರಣೆಗೆ ಜಗತ್ತಿನ ಹಲವಾರು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಸಂಶೋಧನೆಗಳನ್ನು ಹಮ್ಮಿಕೊಂಡಿದ್ದವು. ಇವುಗಳಲ್ಲಿ ಅಮೆರಿಕದ ಓರೆಗಾನ್‍ನಲ್ಲಿನ ‘ಸ್ವಾಸ್ಥ್ಯ ಹಾಗೂ ವಿಜ್ಞಾನ ವಿಶ್ವವಿದ್ಯಾಲಯ’ ಗಣನೀಯ ಪ್ರಗತಿ ಸಾಧಿಸಿದೆ. ಜೈವಿಕ ತಂತ್ರಜ್ಞಾನ ವಿಷಯಗಳಿಗೆಂದೇ ಪ್ರತ್ಯೇಕವಾದ ನಿಯತಕಾಲಿಕ ಆರಂಭಿಸಿರುವ ಪ್ರತಿಷ್ಠಿತ ವಿಜ್ಞಾನ ಪತ್ರಿಕೆ ‘ನೇಚರ್’ನ ಇತ್ತೀಚಿನ ಸಂಚಿಕೆಯಲ್ಲಿ ವರದಿಯಾಗಿರುವಂತೆ ಇನ್ನು ಮುಂದೆ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯಾಗಲಿದೆ. ಮನುಷ್ಯ ದೇಹದ ಯಕೃತ್ತಿನ ಜೀವಕೋಶಗಳನ್ನು ಇಲಿಗಳ ದೇಹದಲ್ಲಿಯೇ ಇನ್ನು ಮುಂದೆ ಉತ್ಪಾದಿಸಬಹುದು. ಅದು ಎಷ್ಟರ ಮಟ್ಟಿಗೆಂದರೆ ಇಲಿಗಳ ಹಿಂಡೊಂದನ್ನು ಸಾಕುವುದರ ಮೂಲಕ ಮನುಷ್ಯ ದೇಹದ ಯಕೃತ್ತಿನ ಜೀವಕೋಶಗಳನ್ನು ಉತ್ಪಾದಿಸುವ ಕಾರ್ಖಾನೆಯೊಂದನ್ನೇ ಆರ್‍ಅಂಭಿಸಬಹುದು. ವಿಶ್ವವಿದ್ಯಾಲಯ ಹೊರಡಿಸಿರುವ ಪ್ರಕಟಣೆಯ ಪ್ರಕಾರ ಇನ್ನು ಮುಂದೆ ಯಾವುದೇ ಹೊಸ ಮದ್ದಿನ ಪರಿಣಾಮ ಅಡ್ಡ ಪರಿಣಾಮಗಳನ್ನು ನಿರ್ಧರಿಸಲು ಇಲಿಗಳ ಯಕೃತ್ತು ವೇದಿಕೆಯಾಗಲಿದೆ. ಅಂದರೆ ಇಲಿಗಳ ದೇಹದಿಂದ ಉತ್ಪತ್ತಿಯಾದ ಮನುಷ್ಯ ಯಕೃತ್ತಿನ ಜೀವಕೋಶಗಳ ಮೇಲಿನ ಪರೀಕ್ಷೆಗಳೇ ಮಾನದಂಡವಾಗಲಿವೆ. ಯಕೃತ್ತಿನ ಸಂಸ್ಕರಣೆಯ ನಂತರ ಯಾವ ರಾಸಾಯನಿಕ ಸಂಯುಕ್ತವು ವಿಷವಸ್ತುವಾಗಿ ಬದಲಾಗಲಿದೆ ಎಂದೂ ಸಹ ತಿಳಿದುಕೊಳ್ಳಬಹುದು. ಈ ಒಂದು ವಿನೂತನ ಯೋಜನೆಯ ನೇತೃತ್ವ ವಹಿಸಿದ್ದವರು ಓರೆಗಾನ್ ವಿವಿಯಲ್ಲಿ ಜೀನೆಟಿಕ್ಸ್‍ಗೆ ಸಂಬಂಧಿಸಿದ ಅಣು ಹಾಗೂ ವೈದ್ಯಕೀಯ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ ಮಾರ್ಕಸ್ ಗ್ರೊಂಪ್. ಅವರ ಅಭಿಪ್ರಾಯದಂತೆ ಜೀನ್ ಚಿಕಿತ್ಸೆ, ಆಕರ ಕೋಶ ಅಭಿವೃದ್ಧಿ ಹಾಗೂ ಯಕೃತ್ತಿಗೆ ಸಂಬಂಧಿಸಿದ ಮಾರಣಾಂತಕ ಕಾಯಿಲೆಗಳ ನಿವಾರಣೆಯಲ್ಲಿ ಈ ಜೀವಕೋಶಗಳು ಮಹತ್ತರ ಪಾತ್ರ ವಹಿಸಲಿವೆ.


ಈ ಯೋಜನೆಯ ಕಾರ್ಯನಿರ್ವಹಣೆಯಲ್ಲೊಂದು ವೈಶಿಷ್ಟ್ಯವಿದೆ. ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆಗಳ ಫಲಿತಾಂಶ ಜನಸಾಮಾನ್ಯರನ್ನು ತಲುಪುವುದು ನಿಧಾನವಾಗುತ್ತದೆ. ಕಾರಣ, ಸಂಶೋಧನೆಯಲ್ಲಿ ಕಂಡ ಹೊಳಹುಗಳನ್ನು ಕಾರ್ಯರೂಪಕ್ಕಿಳಿಸುವ ಉದ್ದಿಮೆಗಳಿಗೂ ವಿದ್ಯಾಲಯಗಳಿಗೂ ಅಷ್ಟೊಂದು ಹೊಂದಾಣಿಕೆಯಿರುವುದಿಲ್ಲ. ಇದ್ದಕ್ಕೆ ಅಪವಾದವೆಂಬಂತೆ ಓರೆಗಾನ್ ವಿಶ್ವವಿದ್ಯಾಲಯ ಗ್ರೊಂಪ್ ಅವರ ಹೆಸರಿನಲ್ಲಿ ‘ಹಕ್ಕು ಸ್ವಾಮ್ಯ’ ಅಥವಾ ‘ಪೇಟೆಂಟ್’ಗಾಗಿ ಅರ್ಜಿಯನ್ನು ಈಗಾಗಲೇ ಸಲ್ಲಿಸಿದೆ. ಜತೆಗೆ ‘ಯೆಕ್ಯುರಿಸ್’ ಎಂಬ ಔಷಧ ಸಂಸ್ಥೆಯೊಂದಿಗೆ ಸಹಭಾಗಿತ್ವದ ಒಪ್ಪಂದಕ್ಕೆ ಸಹಿ ಮಾಡಿದೆ. ಇಂಥ ಹೆಗ್ಗಳಿಕೆ ಓರೆಗಾನ್ ವಿಶ್ವವಿದ್ಯಾಲಯಕ್ಕೆ ಹೊಸತೇನಲ್ಲ. ಅಲ್ಲಿ ತಂತ್ರಜ್ಞಾನ ಹಾಗೂ ಸಂಶೋಧನಾ ಸಹಭಾಗಿತ್ವಕ್ಕೆಂದೇ ಒಂದು ಪ್ರತ್ಯೇಕ ಕೇಂದ್ರವಿದೆ. ಅದರ ನಿರ್ದೇಶಕರಾದ ಅರುಣದೀಪ್ ಪ್ರಧಾನ್ ಅವರ ಮೇರೆ ಮೀರಿದ ಉತ್ಸಾಹದಿಂದ ಓರೆಗಾನ್ ವಿಶ್ವವಿದ್ಯಾಲಯದ ಸಂಶೋಧನೆಗಳಿಗೆ ಜಾಗತಿಕ ಮನ್ನಣೆ ಸಿಕ್ಕಿವೆ, ಜತೆಗೆ ಸಂಶೋಧನೆಗಳ ಫಲಿತಾಂಶ ಹೆಚ್ಚು ಜನರನ್ನು ಮುಟ್ಟಿವೆ. ಔಷಧ ಅಭಿವೃದ್ಧಿಯಲ್ಲಿ ಇದುವರೆಗೂ ಇದ್ದ ಅಡೆತಡೆಗಳನ್ನು ಸದ್ಯದ ಸಂಶೋಧನೆ ನಿವಾರಿಸಲಿದೆ ಎಂಬ ಆತ್ಮವಿಶ್ವಾಸ ಪ್ರಧಾನ್ ಅವರದು. ಮನುಷ್ಯ ದೇಹದ ಯಕೃತ್ತಿನ ಜೀವಕೋಶಗಳನ್ನು ಜೋಡಿಸಿದೊಡನೆಯೆ ಅವುಗಳ ವಿರುದ್ಧ ಧಾಳಿ ನಡೆಸುತ್ತಿದ್ದ ಸುರಕ್ಷಾ ವ್ಯವಸ್ಥೆಯ ಕಾರ್ಯಾಚರಣೆಯನ್ನು ಗ್ರೊಂಪ್ ನೇತೃತ್ವದ ತಂಡ ಗುರುತಿಸಿದೆ. ಅಂಥ ಧಾಳಿಯನ್ನು ತಡೆಗಟ್ಟಲು ಯಾವ ಬಗೆಯ ಔಷಧವನ್ನು ಇಲಿಗಳಿಗೆ ಮೊದಲೇ ಚುಚ್ಚಿರಬೇಕು ಎಂಬುದನ್ನೂ ತಂಡ ನಿರ್ಧರಿಸಿಕೊಂಡಿದೆ. ಕೆಲವೊಂದು ಯಕೃತ್ತಿನ ಕಾಯಿಲೆಗಳು ಉಗಮವಾಗಲು ಜೀವಕೋಶಗಳಲ್ಲಿನ ಯಾವ ನ್ಯೂನತೆಗಳು ಕಾರಣ? ಅವುಗಳಿಗೆ ಸೂಕ್ತವಾದ ಜೀನ್ ಚಿಕಿತ್ಸೆಯೊಂದನ್ನು ಅಭಿವೃದ್ಧಿ ಪಡಿಸಬಹುದೆ? ಮತ್ತಿತರ ಪ್ರಶ್ನೆಗಳಿಗೂ ಓರೆಗಾನ್ ವಿಶ್ವವಿದ್ಯಾಲಯದ ವೈದ್ಯ ವಿಜ್ಞಾನಿಗಳ ತಂಡ ಉತ್ತರಗಳನ್ನು ಕಂಡುಕೊಳ್ಳುತ್ತಿವೆ. ಇಲಿಯೊಂದರ ಜೀವಿತಾವಧಿಯಲ್ಲಿ ಕನಿಷ್ಠವೆಂದರೂ ನಾಲ್ಕು ಬಾರಿ ಮನುಷ್ಯ ದೇಹದ ಯಕೃತ್ತಿನ ಜೀವಕೋಶಗಳನ್ನು ಚುಚ್ಚಬಹುದು. ಪ್ರತಿ ಬಾರಿಯೂ ಇಲಿಯೊಂದು ಎರಡು ಕೋಟಿ ಮಾನವ ಯಕೃತ್ತಿನ ಜೀವಕೋಶಗಳನ್ನು ಉತ್ಪಾದಿಸಬಲ್ಲದು.


ಈ ಬಗೆಯ ಮಾಹಿತಿಯನ್ನು ಸಮರ್ಪಕವಾಗಿ ಕ್ರೋಢೀಕರಿಸುವುದು ಬಹು ಕಷ್ಟದ ಕೆಲಸ. ಇದನ್ನು ಪ್ರಧಾನವಾಗಿ ಕೈಗೆತ್ತಿಕೊಂಡಿರುವ ಅರುಣದೀಪ್ ಅವರ ಕಾರ್ಯಕ್ಷೇತ್ರ ‘ತಂತ್ರಜ್ಞಾನ ವ್ಯವಸ್ಥಾಪನೆ’. ರಾಜಾಸ್ಥಾನದ ಪಿಲಾನಿಯಲ್ಲಿರುವ ಪ್ರತಿಷ್ಠಿತ ‘ಬಿರ್ಲಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಕಲ್ ಸೈನ್ಸಸ್ - ಬಿಐಟಿಎಸ್’ನಲ್ಲಿ ಎಂಜಿನೀರಿಂಗ್ ಪದವಿ ಪಡೆದಿರುವ ಪ್ರಧಾನ ಮುಂದೆ ತಮ್ಮ ವಿದ್ಯಾವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದ್ದು ಓರೆಗಾನ್ ವಿಶ್ವವಿದ್ಯಾಲಯದಲ್ಲಿ. ತಂತ್ರಜ್ಞಾನಗಳ ಅಭಿವೃದ್ಧಿಗಿಂತಲೂ ಅವುಗಳ ನಿರ್ವಹಣೆ ಹಾಗೂ ವ್ಯವಸ್ಥಾಪನೆ ಬಹು ಕಷ್ಟದ್ದೆಂದು ಆ ವೇಳೆಗೆ ಅವರಿಗೆ ಮನವರಿಕೆಯಾಗಿತ್ತು. ತಮ್ಮ ಕಾರ್ಯಕ್ಷೇತ್ರವನ್ನು ತಂತ್ರಜ್ಞಾನ ವ್ಯವಸ್ಥಾಪನೆಯತ್ತ ಹಿಗ್ಗಿಸಿಕೊಂಡ ಪ್ರಧಾನ ಸದ್ಯಕ್ಕೆ ಓರೆಗಾನ್ ವಿಶ್ವವಿದ್ಯಾಲಯಕ್ಕೆ ಲಭ್ಯವಿರುವ ಅಮೂಲ್ಯ ಆಸ್ತಿ. ಕೇವಲ ಓರೆಗಾನ್ ವಿಶ್ವವಿದ್ಯಾಲಯವಷ್ಟೇ ಅಲ್ಲ, ಜಗತ್ತಿನ ತಂತ್ರಜ್ಞಾನ ವ್ಯವಸ್ಥಾಪನಾ ಕ್ಷೇತ್ರದಲ್ಲಿ ಅವರದು ಅತಿ ದೊಡ್ಡ ಹೆಸರು. ಮನುಷ್ಯನ ದೇಹಕ್ಕೆ ಯಕೃತ್ತು ಎಷ್ಟು ಪ್ರಧಾನವೋ ಅಭಿವೃದ್ಧಿಗೊಂಡ ತಂತ್ರಜ್ಞಾನಗಳಿಗೆ ಸೂಕ್ತ ವ್ಯವಸ್ಥಾಪನೆಯೂ ಮುಖ್ಯ. ಇಂಥದೊಂದು ಬಲವಾದ ನಂಬಿಕೆಯೇ ಅರುಣದೀಪ್ ಅವರನ್ನು ಪ್ರಧಾನ ಸ್ಥಾನಕ್ಕೇರಿಸಿದೆ. ಮನುಕುಲಕ್ಕೆ ಒಳಿತು ತರುವ ಅವರ ಕಾರ್ಯಗಳಿಗೆ ಶುಭವಾಗಲಿ.




(ಕೃಪೆ: ವಿಜಯ ಕರ್ನಾಟಕ, 13-08-2007)

Monday, August 6, 2007

ನೀಗಿಸಲು ವಿದ್ಯುತ್ ಬರ, ಏರಿತು ಜನರೇಟರ್ ಮತ್ತಷ್ಟು ಎತ್ತರ!

`Reach for the Sky!' ಉನ್ನತ ಮಟ್ಟದ ಸಾಧನೆ ಮಾಡಬೇಕೆಂದು ಹಂಬಲಿಸುವವರನ್ನು ಪ್ರೋತ್ಸಾಹಿಸುವ ನುಡಿಗಳಿವು. ವಿಮಾನ ಹಾಗೂ ಬಾಹ್ಯಾಕಾಶ ಯಾನಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಬಂದ ಮೇಲೆ, ‘ಮುಗಿಲು ಮುಟ್ಟುವ’ ಅಥವಾ ‘ಆಗಸದತ್ತ ಜಿಗಿಯುವ’ ಕಾರ್ಯಗಳಲ್ಲಿ ನಮಗೆ ವಿಶೇಷತೆಗಳೇನೂ ಕಾಣುತ್ತಿಲ್ಲ. ಡಾ ರೊದ್ದಂ ನರಸಿಂಹ ನಿಮಗೆ ಗೊತ್ತಿರಬೇಕು. ‘ವಾಯು ಚಲನ ವಿಜ್ಞಾನ’ ವಿಷಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಪ್ರಾಧ್ಯಾಪಕರು. ಹಿಂದೆ ಬೆಂಗಳೂರಿನ ‘ಭಾರತೀಯ ವಿಜ್ಞಾನ ಮಂದಿರ (ಭಾವಿಮಂ)’ದ ವೈಮಾಂತರಿಕ್ಷ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದವರು. ದೇಶದ ಹೆಮ್ಮೆಯ ‘ರಾಷ್ಟ್ರೀಯ ವೈಮಾನಿಕ ಪ್ರಯೋಗಶಾಲೆಗಳ (ರಾವೈಪ್ರ)’ ನಿರ್ದೇಶಕರಾಗಿದ್ದವರು. ಇವರ ಅಧಿಕಾರಾವಧಿಯಲ್ಲಿ ‘ರಾವೈಪ್ರ’ ನಾಗರೀಕ ವಿಮಾನಗಳ ವಿನ್ಯಾಸ ಹಾಗೂ ನಿರ್ಮಾಣ ಕೈಗೆತ್ತಿಗೊಂಡಿತು. ಜತೆಗೆ ದೇಶದ ಹೆಮ್ಮೆಯ ‘ಹಗುರ ಯುದ್ಧ ವಿಮಾನ - ತೇಜಸ್’ ಇವರ ನೇತೃತ್ವದಲ್ಲಿ ಮುಗಿಲು ಮುಟ್ಟಿತು. ‘ಭಾವಿಮಂ’ ಆವರಣದಲ್ಲಿಯೇ ಇರುವ ‘ಉನ್ನತ ಅಧ್ಯಯನಗಳ ರಾಷ್ಟ್ರೀಯ ವಿದ್ಯಾಲಯ’ದ ನಿರ್ದೇಶಕತ್ವದ ನಂತರ ಸದ್ಯಕ್ಕೆ ‘ಜವಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನೆಗಳ ಕೇಂದ್ರ’ದ ಪ್ರಾಧ್ಯಾಪಕರಾಗಿದ್ದಾರೆ. ಎಂಜಿನೀರಿಂಗ್ ವಿಭಾಗದಲ್ಲಿ ಬ್ರಿಟನ್ನಿನ ರಾಯಲ್ ಸೊಸೈಟಿಯ ಫೆಲೋಶಿಪ್ ಪಡೆದಿರುವ ಹಾಗೂ ಅಮೆರಿಕದ ರಾಷ್ಟ್ರೀಯ ಎಂಜಿನೀರಿಂಗ್ ಅಕ್ಯಾಡೆಮಿಯ ಸದಸ್ಯತ್ವ ಪಡೆದಿರುವ ಕೆಲವೇ ಭಾರತೀಯರಲ್ಲಿ ರೊದ್ದಂ ಒಬ್ಬರು. ಇಂಥ ರೊದ್ದಂ ಸದಾ ಹೇಳುವ ತಮಾಷೆಯ ಮಾತೊಂದಿದೆ. ನೆಲದ ಮೇಲಿಂದ ಸಹಸ್ರಾರು ಅಡಿಗಳಷ್ಟು ಎತ್ತರದಲ್ಲಿನ ವಾತಾವರಣದ ಬಗ್ಗೆ ನಾವು ಎಷ್ಟೊಂದು ತಿಳಿದಿದ್ದೇವೆ, ಆದರೆ ನಮ್ಮ ಕಾಲಿನ ಅಡಿಯಿಂದ ಒಂದೆರಡು ಅಡಿಗಳಷ್ಟು ಮೇಲಿನವರೆಗಿನ ವಾಯು ಚಲನೆಯ ವಿಜ್ಞಾನದ ಸೂಕ್ಷ್ಮತೆಗಳನ್ನು ಇನ್ನೂ ಸರಿಯಾಗಿ ತಿಳಿದುಕೊಳ್ಳಲಾಗಿಲ್ಲ. ಅಂದರೆ ನಿಮ್ಮ ತಿಳಿವಳಿಕೆಯ ವಿಜ್ಞಾನ ನಿಯಮಗಳನ್ನು ಮೀರಿ ಗಾಳಿ ಹರಿದಾಡುತ್ತದೆ.
ಗಾಳಿಯ ಹರಿದಾಟ ನಮಗೆಂದೂ ಸೋಜಿಗದ ವಿಷಯ. ಗಾಳಿಪಟ ಹಾರಿಬಿಟ್ಟ ದಿನಗಳನ್ನು ನೆನಪಿಸಿಕೊಳ್ಳಿ. ಹಕ್ಕಿಗಳ, ಚಿಟ್ಟೆಗಳ ಹಾರಾಟವನ್ನು ಹತ್ತಿರದಲ್ಲಿ ಕಂಡು ಬೆರಗಾದದ್ದನ್ನು ನೆನಪಿಸಿಕೊಳ್ಳಿ. ಆಗಸದಲ್ಲಿ ಸುಂಯ್ಯೆಂದು ಹಾರಿ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳು ದಿಗಿಲು ಹುಟ್ಟಿಸಿದ್ದನ್ನು ನೆನಪಿಸಿಕೊಳ್ಳಿ. ನಿಮ್ಮೂರಿನ ಎತ್ತರದ ಬೆಟ್ಟಗಳ ಮೇಲೊ ಅಥವಾ ಸಿನಿಮಾ ಹಾಡುಗಳ ವೀಡಿಯೊ ತುಣಕುಗಳಲ್ಲಿಯೊ ಕಂಡ ಗಾಳಿಗೆ ತಿರುಗುವ ದೊಡ್ಡ ದೊಡ್ಡ ಯಂತ್ರಗಳನ್ನು ನೆನಪಿಸಿಕೊಳ್ಳಿ. ಈ ಎಲ್ಲ ನೆನಪುಗಳ ಹಿಂದೆ ಗಾಳಿ ಎಂಬ ಮಾಯಾ ದ್ರವವಿದೆ. ಚಂಚಲತೆಯೆಂಬುದು ಗಾಳಿಯ ಮೂಲ ಗುಣ. ಅದು ಹರಿಯುವ ದಿಕ್ಕಿಗೆ ತಿರುಗಣಿ ಯಂತ್ರದ ಮೂತಿಯನ್ನು ಇಟ್ಟು ತಿರುಗಿಸುತ್ತಾ ಹೊರಟರೆ, ನೂಕು ಬಲ ತಿರುಗು ಬಲವಾಗಿ ಮಾರ್ಪಾಡಾಗುತ್ತದೆ. ಆ ತಿರುಗು ಬಲವನ್ನು ಆಯಸ್ಕಾಂತೀಯ ಬಲವನ್ನು ಕತ್ತರಿಸುವಂತೆ ಪ್ರಯೋಗಿಸಿದಾಗ ವಿದ್ಯುತ್ ಉತ್ಪಾದನೆಯಾಗುತ್ತದೆ. ಗಾಳಿ ಯಂತ್ರಗಳ ಕಾರ್ಯಾಚರಣೆಯ ಮೂಲ ತತ್ವ ಇದು. ರೊದ್ದಂ ಅವರ ಮಾತುಗಳು ನೆನಪಿಗೆ ಬಂದದ್ದು ಬ್ರಿಟನ್ನಿನ ಪ್ರತಿಷ್ಠಿತ ವಿಜ್ಞಾನ ಸಾಪ್ತಾಹಿಕ ‘ನ್ಯೂ ಸೈಂಟಿಸ್ಟ್’ನ ಇತ್ತೀಚಿನ ಸಂಚಿಕೆಯೊಂದನ್ನು ತಿರುವಿ ಹಾಕುತ್ತಿದ್ದಾಗ. ಬೀಸು ಗಾಳಿಯಲ್ಲಿ ಅಡಗಿರುವ ಶಕ್ತಿಯನ್ನು ಸೆಳೆದು ವಿದ್ಯುತ್ ತಯಾರಿಸುವಿಕೆಯಲ್ಲಿನ ಹೊಸ ಸಂಶೋಧನೆಗಳ ಬಗ್ಗೆ ಈ ವಾರ ಪತ್ರಿಕೆಯಲ್ಲಿ ವಿಸ್ತೃತವಾಗಿ ಪ್ರಸ್ತಾಪವಾಗಿದೆ.



ನೆಲದಿಂದ ಮೇಲೆ ಮೇಲೆ ಹೋದಂತೆ ಗಾಳಿಯ ಸಾಂದ್ರತೆ ಕಡಿಮೆಯಾಗುತ್ತಾ ಹೋಗುವುದು ನಿಮಗೆ ಗೊತ್ತು. ಈ ಕಾರಣದಿಂದಲೇ ಬೆಟ್ಟ, ಗುಡ್ಡ, ಪರ್ವತಗಳನ್ನು ಹತ್ತಿದಾಗ ನಮಗೆ ಉಸಿರಾಡಲು ಸಿಗುವ ಗಾಳಿಯ ಪ್ರಮಾಣ ಕಡಿಮೆಯಾಗುತ್ತದೆ. ಆಮ್ಲಜನಕದ ಕೊರತೆಯಿಂದ ದಣಿವು ಹೆಚ್ಚಾಗುತ್ತದೆ. ಆದರೆ ವಿಮಾನಗಳಿಗೆ ಗಾಳಿಯ ಅಡೆತಡೆ ಕಡಿಮೆ ಇರುವ ಆದರೆ ಇಂಧನದ ದಹನಕ್ಕೆ ಅಗತ್ಯವಿರುವಷ್ಟು ಗಾಳಿ ಇರುವ ವಾತಾವರಣ ಬೇಕು. ಹೀಗಾಗಿ ವಿಮಾನಗಳ ಹಾರಾಟಕ್ಕೆ ಪ್ರಶಸ್ತವಾಗಿರುವುದು ಭೂಮಿಯ ಮೇಲಿನ ಹತ್ತರಿಂದ ಹದಿನೈದು ಕಿಲೋಮೀಟರ್ ಎತ್ತರದ ವಾತಾವರಣ. ಭೂಮಿಯ ಮೇಲಿನ ಒಂದಷ್ಟು ಎತ್ತರದಲ್ಲಿ ಗಾಳಿಯ ಗುಣ ಲಕ್ಷಣಗಳು ತೀರಾ ಚಂಚಲ. ಈ ಕಾರಣದಿಂದ ನಾವು ವಿದ್ಯುತ್ ಉತ್ಪಾದಿಸಲೆಂದು ನೆಟ್ಟ ಗಾಳಿ ಯಂತ್ರಗಳ ಕಾರ್ಯಕ್ಷಮತೆ ತೀರಾ ಕಡಿಮೆ. ಚಂಚಲತೆ ಇಲ್ಲದ, ನಿರ್ದಿಷ್ಟ ನಿಯಮಗಳನ್ನು ಪಾಲಿಸುವ ಬೀಸು ಗಾಳಿ, ವಿದ್ಯುತ್ ಉತ್ಪಾದಿಸುವ ಯಂತ್ರಗಳಿಗೆ ಅಪೇಕ್ಷಣೀಯ. ಹಾಗೆಂದ ಮಾತ್ರಕ್ಕೆ ಭೂಮಿಯಿಂದ ನಾಲ್ಕೈದು ಕಿಲೋಮೀಟರ್ ಎತ್ತರದಲ್ಲಿ ಗಾಳಿ ಯಂತ್ರಗಳನ್ನು ಸ್ಥಾಪಿಸಲಾಗುವುದಿಲ್ಲ. ಕಾರಣ, ಆ ಎತ್ತರದಲ್ಲಿ ಗಂಟೆಗೆ ಐದು ನೂರು ಕಿಲೋಮೀಟರ್ ವೇಗದಲ್ಲಿ ಬೀಸುವ ಗಾಳಿಗೆ ಯಂತ್ರ ನೆಟ್ಟಿರುವ ಗುಡ್ಡದ ಬುಡವೇ ಅಲುಗಾಡಬಹುದು. ಅಂದರೆ, ಆ ಎತ್ತರಕ್ಕೆ ಗಾಳಿ ಯಂತ್ರಗಳನ್ನು ನೆಡಲಾಗುವುದಿಲ್ಲ. ಅಕ್ಕಿಯ ಮೇಲಿನ ಆಸೆ ಹೆಚ್ಚಿರಬೇಕು ಹಾಗೂ ನೆಂಟರ ಮೇಲಿನ ಪ್ರೀತಿ ಕಡಿಮೆ ಆಗಬಾರದು - ಇದು ಕೇವಲ ಸಾಮಾನ್ಯ ಮನುಷ್ಯನ ಆಸೆಯಷ್ಟೇ ಅಲ್ಲ, ವಿಜ್ಞಾನಿಗಳ ಹಂಬಲವೂ ಹೌದು. ಎಲ್ಲ ಬಗೆಯ ವೈಪರೀತ್ಯಗಳನ್ನು ಎದುರಿಸಿ ಅತ್ಯಂತ ಅಗ್ಗದ ದರದಲ್ಲಿ, ಸುಲಭ ಮಾರ್ಗದಲ್ಲಿ ವಿದ್ಯುತ್ ಉತ್ಪಾದನೆ ನಮ್ಮೆಲ್ಲರ ಬಹುದಿನದ ಕನಸು.


ಬಹು ಎತ್ತರದ ಪ್ರದೇಶಗಳಲ್ಲಿನ ವಾಯು ಬಲದ ಪ್ರತಿಶತ ಒಂದರಷ್ಟನ್ನು ವಿದ್ಯುತ್ ಉತ್ಪಾದನೆಗೆ ಬಳಸಿಕೊಂಡರೆ, ಇಡೀ ಜಗತ್ತಿನ ಒಟ್ಟಾರೆ ಶಕ್ತಿ ಬೇಡಿಕೆಯನ್ನು ಪೂರೈಸಬಹುದು. ಇಂಥದೊಂದು ಬೃಹತ್ ಅಂದಾಜನ್ನು ಕೊಟ್ಟಿರುವವರು ಡೇವಿಡ್ ಶೆಫರ್ಡ್. ಅಮೆರಿಕದ ಕ್ಯಾಲಿಫೋರ್ನಿಯದಲ್ಲಿನ ‘ಸ್ಕೈ ವಿಂಡ್‍ಪವರ್’ ಎಂಬ ಗಾಳಿ ವಿದ್ಯುತ್ ಯಂತ್ರ ತಯಾರಿಸುವ ಕಂಪನಿಯ ಅಧ್ಯಕ್ಷರಿವರು. ಪ್ರಚಂಡ ಬುದ್ಧಿವಂತರಾದ ಇವರು ದ್ವಿತೀಯ ಮಹಾಯುದ್ಧದ ಕಾಲದಲ್ಲಿ ಜಪಾನ್ ದೇಶದ ಗುಪ್ತ ಮಿಲಿಟರಿ ಸಂಕೇತಗಳನ್ನು ಅಮೆರಿಕ ಸರ್ಕಾರಕ್ಕೆ ಬಿಡಿಸಿಕೊಡುತ್ತಿದ್ದರು. ಮುಂದೆ ಅಮೆರಿಕ ಸರ್ಕಾರಕ್ಕೆ ಕೈಬರಹದ ಅಕ್ಷರಗಳನ್ನು ಓದಬಲ್ಲ ಯಂತ್ರಗಳನ್ನು ನಿರ್ಮಿಸಿಕೊಟ್ಟವರೂ ಇವರೇ. ಈ ಕಾರಣದಿಂದ ಅವರ ಮಾತುಗಳನ್ನು ಕೇವಲ ಗಾಳಿ ಮಾತುಗಳೆಂದು ತಳ್ಳಿ ಹಾಕದೆಯೆ ಗಂಭೀರವಾಗಿ ಆಲಿಸಬೇಕು. ಇವರ ಜತೆಗೂಡಿರುವವರು ಆಸ್ಟ್ರೇಲಿಯ ದೇಶದ ಸಿಡ್ನಿಯಲ್ಲಿನ ತಂತ್ರಜ್ಞಾನ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬ್ರಯಾನ್ ರಾಬರ್ಟ್ಸ್. ತೊಂಬತ್ತರ ದಶಕದಲ್ಲಿ ಇವರು ಬಲೂನ್‍ಗಳ ಮೇಲೆ ಗಾಳಿ ತಿರುಗಣಿ ಯಂತ್ರಗಳನ್ನು ಕೂಡಿಸಿ ಅವುಗಳನ್ನು ಎತ್ತರ ಪ್ರದೇಶಗಳಿಗೆ ಹಾರಿಬಿಟ್ಟಿದ್ದರು. ಥೇಟ್ ಗಾಳಿಪಟವನ್ನು ಹಿಡಿತದಲ್ಲಿಟ್ಟುಕೊಳ್ಳುವ ದಾರದಂತೆ, ದಪ್ಪನಾದ ವಿದ್ಯುತ್ ತಂತಿಯೊಂದು ಈ ಹೆಲಿಕಾಪ್ಟರ್ ಆಕಾರದ ಬಲೂನ್ ಅನ್ನು ಹಿಡಿದಿಟ್ಟುಕೊಳ್ಳುತ್ತಿತ್ತು. ಆ ತಂತಿಯ ಮೂಲಕ ಬಲೂನ್ ನಿರ್ದಿಷ್ಟ ಎತ್ತರಕ್ಕೆ ಹಾರಲು ವಿದ್ಯುತ್ ಪೂರೈಕೆಯಾಗುತ್ತಿತ್ತು. ಒಮ್ಮೆ, ಮೇಲೇರಿದ ಗಾಳಿ ಯಂತ್ರ ವಿದ್ಯುತ್ ಉತ್ಪಾದನೆ ಆರಂಭಿಸಿದಂತೆ, ಅದೇ ನಿಯಂತ್ರಕ ತಂತಿಯ ಮೂಲಕ ವಿದ್ಯುತ್ ಹಿಂದೆ ಹರಿದು ಬರುತ್ತಿತ್ತು. ಅತ್ಯಂತ ಜಾಣ್ಮೆಯ ವಿನ್ಯಾಸವಾದ ಈ ‘ಹೆಲಿ(ಕಾಪ್ಟರ್) (ಗಾಳಿ) ಪಟ’ಕ್ಕೆ ಬಹು ದೊಡ್ಡ ಹಿನ್ನೆಲೆಯಿದೆ. ಸುಮಾರು ಮೂರು ದಶಕಗಳ ಕಾಲ ಬ್ರಯಾನ್ ರಾಬರ್ಟ್ಸ್ ಅವರ ತಂಡ ‘ಹೆಲಿ ಪಟ’ದ ವಿವಿಧ ಮಾದರಿಗಳನ್ನು ಸತತವಾಗಿ ಪರೀಕ್ಷಿಸಿದೆ. ಈ ಸುದೀರ್ಘ ಕಾಲದ ಸಂಶೋಧನೆಯ ಫಲವೇ ಸದ್ಯಕ್ಕೆ ಅಮೆರಿಕದಲ್ಲಿ ನಿರ್ಮಾಣವಾಗುತ್ತಿರುವ ‘ಹಾರಾಡುವ ವಿದ್ಯುತ್ ಉತ್ಪಾದಕ’. ಇದರ ಮೊದಲ ಮಾದರಿಯು ಈ ವರ್ಷದ ಕೊನೆಯ ಹೊತ್ತಿಗೆ ಆಗಸಕ್ಕೇರಿ, ೨೨೦ ಕಿಲೋವ್ಯಾಟ್ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲು ಆರಂಭಿಸುತ್ತದೆ. ಮುಂದಿನ ಎರಡು ವರ್ಷಗಳಲ್ಲಿ ಅದು ಭೂಮಿಯಿಂದ ಕನಿಷ್ಠವೆಂದರೂ ನಾಲ್ಕೂವರೆ ಕಿಲೋಮೀಟರ್ ಎತ್ತರದಲ್ಲಿದ್ದು, ತನ್ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ಹಿಗ್ಗಿಸಿಕೊಂಡಿರುತ್ತದೆ.


ಭವಿಷ್ಯತ್ತಿನಲ್ಲಿ ನಮ್ಮ ವಿದ್ಯುತ್ ಅಗತ್ಯಕ್ಕೆ ಪೆಟ್ರೋಲಿಯಂ ಆಗಲಿ ಅಥವಾ ಪರಮಾಣು ಶಕ್ತಿಯಾಗಲೀ ಬೇಕಿಲ್ಲ. ಅವುಗಳೆಲ್ಲಕ್ಕಿಂತಲೂ ಹೆಚ್ಚಿನ ಅಗ್ಗದ ದರದಲ್ಲಿ ಗಾಳಿ ಯಂತ್ರಗಳ ಮೂಲಕ ವಿದ್ಯುತ್ ಉತ್ಪಾದಿಸಬಹುದೆಂಬ ಆತ್ಮವಿಶ್ವಾಸ ‘ಸ್ಕೈ ವಿಂಡ್‍ಪವರ್’ ಕಂಪನಿಯದು. ಮುಂದಿನ ಹತ್ತು ವರ್ಷಗಳಲ್ಲಿ ಹಾರಾಡುವ ವಿದ್ಯುತ್ ಜನಕಗಳು ಒಂಬತ್ತು ಕಿಲೋಮೀಟರ್ ಎತ್ತರದಲ್ಲಿ ತೇಲುತ್ತಿರುತ್ತವೆ, ನಮ್ಮ ಬರಿಗಣ್ಣಿಗೆ ಗೋಚರಿಸದೆಯೆ ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿರುತ್ತವೆ ಎಂಬ ಕನಸನ್ನು ಶೆಫರ್ಡ್-ರಾಬರ್ಟ್ಸ್ ಜೋಡಿ ಹಂಚಿಕೊಂಡಿದೆ. ಅಸಾಂಪ್ರದಾಯಿಕ ವಿದ್ಯುತ್ ಉತ್ಪಾದನೆಯ ವಿಷಯಗಳಿಗೆಂದೇ ಮೀಸಲಿರುವ ನಿಯತಕಾಲಿಕವೊಂದರಲ್ಲಿ ಪ್ರಬಂಧ ಮಂಡಿಸಿರುವ ಈ ಎಂಜಿನೀರ್‌ಗಳ ಪ್ರಕಾರ ಬರಲಿರುವ ದಿನಗಳಲ್ಲಿ ವಿದ್ಯುತ್ ಕ್ಷಾಮವೆಂಬುದು ಕೇವಲ ನಿಘಂಟಿನ ಪದವಾಗಿ ಉಳಿಯುತ್ತದೆ! ಅವರ ಹಾರೈಕೆಗಳನ್ನು ಮತ್ತಷ್ಟು ಉತ್ತೇಜಿಸಲೆಂದು ಇತ್ತ ನೆದರ್‌ಲೆಂಡ್ಸ್ ದೇಶದ ವಿಜ್ಞಾನಿಗಳು ತಮ್ಮ ಸಂಶೋಧನೆಗಳ ವಿವರಗಳನ್ನು ಜಗಜ್ಜಾಹೀರು ಮಾಡಿದ್ದಾರೆ. ಅಲ್ಲಿನ ಡೆಲ್‍ಫ್ಟ್ ತಂತ್ರಜ್ಞಾನ ವಿವಿಯ ಸಂಶೋಧಕರು ವಿಭಿನ್ನ ವಿನ್ಯಾಸವೊಂದರ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ. ವಿಮಾನದ ರೆಕ್ಕೆಗಳಂತಿರುವ ಗಾಳಿಪಟಗಳ ಸರಣಿಯನ್ನು ಮೇಲಕ್ಕೆ ತೂರಿಬಿಡುವುದು. ಒಂದೇ ತಂತಿಯಲ್ಲಿ ಬಿಗಿದ ಈ ಗಾಳಿಪಟಗಳ ತುದಿಯಲ್ಲಿರುವ ಗಾಳಿ ಯಂತ್ರಗಳು ತಿರುಗಲಾರಂಭಿಸಿ ವಿದ್ಯುತ್ ಉತ್ಪಾದಿಸುವುದು. ಅವೆಲ್ಲವೂ ಪ್ರಧಾನ ತಂತಿಯ ಮೂಲಕ ಕೆಳಗೆ ವಿದ್ಯುತ್ ಕಳುಹಿಸುವ ಯೋಜನೆಯಿದು. ‘ಲ್ಯಾಡರ್‌ಮಿಲ್’ ಎಂಬ ಹೆಸರಿನ ಈ ಯೋಜನೆಯ ಪ್ರಗತಿಯ ಬಗ್ಗೆ ಜಗತ್ತಿನೆಲ್ಲೆಡೆಯ ವಿದ್ಯುತ್ ತಂತ್ರಜ್ಞರು ಕುತೂಹಲದಿಂದ ಓದುತ್ತಿದ್ದಾರೆ.

ಗಾಳಿ ಯಂತ್ರಗಳ ಸ್ಥಾಪನೆಗೆ ನೆಲದ ಮೇಲೆ ಹೆಚ್ಚಿನ ಜಾಗ ಬೇಕು. ಅವುಗಳನ್ನು ತೋಟದಂತೆ ರೂಪಿಸಿದಾಗ ಮಾತ್ರ ಒಂದಷ್ಟು ಗಣನೀಯ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಬಹುದು. ಇಂಥ ತೋಟಗಳನ್ನು ಎಲ್ಲೆಂದರಲ್ಲಿ ನಿರ್ಮಿಸುವ ಹಾಗಿಲ್ಲ. ಗಾಳಿ ಹೆಚ್ಚು ಬೀಸುವ, ಎತ್ತರದ ಪ್ರದೇಶಗಳಲ್ಲಿ ಮಾತ್ರ ಸ್ಥಾಪಿಸಬಹುದು. ಹೆಚ್ಚು ಸ್ಥಾಪನಾ ವೆಚ್ಚದ ಈ ತೋಟಗಳಿಂದ ಸದ್ಯಕ್ಕೆ ಸಿಗುತ್ತಿರುವ ಇಳುವರಿ ತೀರಾ ಕಮ್ಮಿ. ಈ ಹಿನ್ನೆಲೆಯಲ್ಲಿ ಕೇವಲ ತೊಂಬತ್ತು ಪೈಸೆಗೆ ಒಂದು ಯೂನಿಟ್ (ಗಂಟೆಗೆ ತಲಾ ಒಂದು ಕಿಲೋವ್ಯಾಟ್ ಬಳಕೆ) ವಿದ್ಯುತ್ ಉತ್ಪಾದಿಸಬಹುದೆಂಬ ಹಾರಾಡುವ ಗಾಳಿಯಂತ್ರಗಳ ಲೆಕ್ಕಾಚಾರ ಆಕರ್ಷಕವೆನಿಸುತ್ತದೆ. ಆದರೆ ಅಷ್ಟೆತ್ತರದಲ್ಲಿ ವಿದ್ಯುತ್ ಜನಕವನ್ನು ಹಿಡಿದಿಡುವ ತಂತಿಗಳ ನಿರ್ವಹಣೆ ಸುಲಭವೆ ಎಂಬುದು ಪ್ರಶ್ನೆ. ಗಾಳಿಯ ವೇಗ ಹೆಚ್ಚಿದಂತೆ ಈ ತಂತಿಗಳು ರಭಸದ ಸೆಳೆತಕ್ಕೆ ಒಳಗಾಗುತ್ತವೆ. ಇವೆಲ್ಲ ಎಳೆತ-ಬಿಗಿತಗಳನ್ನು ಮೀರಿ ಅವು ಕೆಲಸ ಮಾಡಬೇಕಾಗುತ್ತದೆ. ಸದ್ಯಕ್ಕೆ ಲಭ್ಯವಿರುವ ತಂತ್ರಜ್ಞಾನದಲ್ಲಿ ಅಗತ್ಯ ಸಾಮರ್ಥ್ಯದ ತಂತಿಗಳನ್ನು ರೂಪಿಸುವುದು ಕಷ್ಟವೇನಲ್ಲ. ಆದರೆ ಎತ್ತರದಲ್ಲಿನ ಅದರ ನಿರ್ವಹಣೆಯ ಸುರಕ್ಷತೆಯ ಬಗ್ಗೆ ಮಾತ್ರ ಕೊಂಚ ಅನುಮಾನ. ಇನ್ನು, ವಿಮಾನಗಳೂ ಸೇರಿದಂತೆ ಗಾಳಿಯಲ್ಲಿ ತೇಲುವ ಯಂತ್ರಗಳೆಲ್ಲ ದಿನಗಟ್ಟಲೆ ಹಾರುತ್ತಲೇ ಇರಲಾಗುವುದಿಲ್ಲ. ಅವುಗಳಿಗೂ ಕಾಲ ಕಾಲಕ್ಕೆ ಸೂಕ್ತ ನಿರ್ವಹಣಾ ವಿರಾಮ ಬೇಕಾಗುತ್ತದೆ. ಹಾರುವ ಗಾಳಿ ಯಂತ್ರಗಳು ಈ ಎಲ್ಲ ಅಡೆತಡೆಗಳನ್ನೂ ಸುರಕ್ಷಿತವಾಗಿ ದಾಟಬೇಕು.


ಭೂಮಿಯಿಂದ ಸಹಸ್ರಾರು ಕಿಲೋಮೀಟರ್ ಎತ್ತರಕ್ಕೆ ಉಪಗ್ರಹಗಳನ್ನು ಕಳುಹಿಸಿ, ಅವುಗಳ ಯಶಸ್ವಿ ನಿರ್ವಹಣೆ ಮಾಡಲು ಇಂದು ನಮಗೆ ಸಾಧ್ಯ. ಥೇಟ್ ನಮ್ಮ ನಾಗರೀಕ ವಿಮಾನದಂತೆ ಬಾಹ್ಯಾಕಾಶಕ್ಕೆ ಶಟಲ್‍ಗಳನ್ನು ಕಳುಹಿಸುವಷ್ಟು ಸಾಮರ್ಥ್ಯವೂ ನಮಗಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಜನಕಗಳನ್ನು ಹಾರಿಬಿಡುವುದು ಮತ್ತಷ್ಟು ಸುಲಭವಾಗಬಹುದು. ಎತ್ತರ, ಇನ್ನೂ ಎತ್ತರ, ಮತ್ತಷ್ಟು ಎತ್ತರ, ಮಗದಷ್ಟು ಎತ್ತರ .... ಹೀಗೆ ಸಾಧನೆಯ ಹಾದಿಯೆಂಬುದು ಸದಾ ಎತ್ತರೆತ್ತರ. ಎತ್ತರವೊ, ಹತ್ತಿರವೊ, ವಿದ್ಯುತ್ ಕ್ಷಾಮವನ್ನು ನೀಗಿಸಬಲ್ಲ ಇಂಥ ಯಾವುದೇ ಯೋಜನೆ ಬೇಗ ಯಶಸ್ವಿಯಾಗಲಿ.
(ಕೃಪೆ : ವಿಜಯ ಕರ್ನಾಟಕ, 06-08-2007)

Monday, July 30, 2007

‘ಬಿ.ಪಿ.ಓ.’, ‘ಕೆ.ಪಿ.ಓ.’ ನಂತರದ ಹೊರಗುತ್ತಿಗೆ ಯಾವುದು?

‘ ಬಿ.ಪಿ.ಓ.’ ಗೊತ್ತಲ್ಲ? ವಿದೇಶಿ ಕಂಪನಿಗಳು ತಮ್ಮ ವಹಿವಾಟಿನ ನಿತ್ಯ ಚಟುವಟಿಕೆಗಳನ್ನು ಮತ್ತೊಂದು ಕಂಪನಿಗೆ ಹೊರಗುತ್ತಿಗೆ ನೀಡುವ ಪ್ರಕ್ರಿಯೆಯಿದು. ತಮ್ಮದೇ ತಾಣದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಿಸುವುದು ತುಟ್ಟಿಯ ಬಾಬ್ತು ಎಂದು ಮನವರಿಕೆಯಾದಾಗ ದೊಡ್ಡ ಕಂಪನಿಗಳು ಅವುಗಳನ್ನು ಅಗ್ಗದ ದರದಲ್ಲಿ ಮಾಡಿಕೊಡಬಲ್ಲ ಪುಟ್ಟ ಕಂಪನಿಗಳ ಮೊರೆಹೋಗುತ್ತವೆ. ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಹಾಗೂ ಯೂರೋಪ್ ದೇಶಗಳಿಂದ ನಮ್ಮ ದೇಶದ ಐ.ಟಿ. ಕಂಪನಿಗಳಿಗೆ ಈ ‘ಬಿ.ಪಿ.ಓ.’ ಪ್ರಕ್ರಿಯೆಯಿಂದ ‘ಬ್ಯುಸಿನೆಸ್’ ಹೆಚ್ಚುತ್ತಿದೆ. ಲಾಭಾಂಶ ಹೆಚ್ಚಿರುವ ಸ್ವದೇಶಿ ಕಂಪನಿಗಳೂ ಸಹಾ ಸಣ್ಣ-ಪುಟ್ಟ ಬ್ಯುಸಿನೆಸ್ ಅನ್ನು ಇದೇ ರೀತಿ ಮತ್ತೊಂದು ಸ್ವದೇಶಿ ಕಂಪನಿಗೆ ವರ್ಗಾಯಿಸುತ್ತವೆ - ವೇತನ ಉಳಿತಾಯ ದೃಷ್ಟಿಯಿಂದ. ಇನ್ನು ಜ್ಞಾನವನ್ನು ವಹಿವಾಟು ಮಾಡುವ ಕೆ.ಪಿ.ಓ. ಕಂಪನಿಗಳು ಅಂದರೆ ಉದಾಹರಣೆಗೆ ವಿದೇಶಗಳಲ್ಲಿನ ವಿದ್ಯಾರ್ಥಿಗಳಿಗೆ ಭಾರತದಲ್ಲಿಯೇ ಇಂಟರ್‌ನೆಟ್ ಸಂಪರ್ಕವಿರುವ ಕಂಪ್ಯೂಟರ್ ಮುಂದೆ ಕುಳಿತ ಗುರುಗಳು ‘ಟ್ಯೂಶನ್’ (ಮನೆಪಾಠ) ನಡೆಸುವುದು, ನ್ಯಾಯಾಂಗ ಸಲಹೆ - ವೈದ್ಯಕೀಯ ವರದಿಗಳ ತಪಾಸಣೆ - ತಾಂತ್ರಿಕ ವಿಶ್ಲೇಷಣೆ - ತೆರಿಗೆ ಲೆಕ್ಕಾಚಾರ - ತರಬೇತಿ - ತಾಂತ್ರಿಕ ಬರಹ ಇತ್ಯಾದಿಗಳನ್ನು ವಿದೇಶಿ ಗ್ರಾಹಕರಿಗೆ ಮಾಡಿಕೊಡುವುದು ‘ಕೆ.ಪಿ.ಓ.’ ವ್ಯಾಪ್ತಿಗೆ ಬರುತ್ತವೆ. ಬಿ.ಪಿ.ಓ. ‘ಬ್ಯುಸಿನೆಸ್’ ನಂತರ ಮುಂದೇನು? ಎಂದು ಭಾರತದಲ್ಲಿನ ಉದ್ಯೋಗಾವಕಾಶಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಮುನ್ನವೇ ಮುನ್ನುಗ್ಗಿ ಬಂದದ್ದು ಕೆ.ಪಿ.ಓ. ವಹಿವಾಟು. ಆದರೆ ಯಾವುದೇ ‘ಬ್ಯುಸಿನೆಸ್’ ನಿರಂತರವಲ್ಲ. ಹೀಗಾಗಿ ಸದ್ಯದ ಪ್ರಶ್ನೆ - ಕೆ.ಪಿ.ಓ. ನಂತರ ಮುಂದೇನು?

ಈ ವರ್ಷದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ದ್ವೈ-ವಾರ್ಷಿಕ ವೈಮಾಂತರಿಕ್ಷ ಮೇಳ ‘ಏರೋ-ಇಂಡಿಯಾ’ ಸಂದರ್ಭದಲ್ಲಿ ಇಂಥದೊಂದು ಚರ್ಚೆಗೆ ಚಾಲನೆ ದೊರೆತಿತ್ತು. ವಿಮಾನ ಹಾಗೂ ಬಾಹ್ಯಾಂತರಿಕ್ಷ ಎಂಜಿನೀರಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದ ‘ಬಿ.ಪಿ.ಓ.’ ಕೆಲಸಗಳು ಭಾರತಕ್ಕೆ ಹೆಚ್ಚುವರಿಯಾಗಿ ಹರಿದುಬರಲಿದೆ. ಇಂಥ ಉದ್ಯೋಗಗಳ ವಹಿವಾಟು ಸದ್ಯದ ಐ.ಟಿ. ‘ಬ್ಯುಸಿನೆಸ್’ ಅನ್ನು ಮೀರಿಸುತ್ತದೆ ಎಂಬ ಭವಿಷ್ಯವಾಣಿ ಕಿವಿಗೆ ಬಿದ್ದಿದ್ದವು. ಒಂದೆಡೆ ‘ಇಸ್ರೋ’ದಂಥ ಸರ್ಕಾರಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸ್ವಾವವಲಂಬಿಯಾಗಿದೆ. ಜತೆಗೆ ವಿದೇಶಿ ಬಾಹ್ಯಾಕಾಶ ಸಂಸ್ಥೆಗಳಿಗೆ ಉಪಗ್ರಹ ಉಡ್ಡಯಣದಂಥ ಕೆಲಸಗಳನ್ನು ಮಾಡಿಕೊಡುವುದರ ಮೂಲಕ ಹಣವನ್ನೂ ಗಳಿಸುತ್ತಿದೆ. ಭವಿಷ್ಯತ್ತಿನಲ್ಲಿ ಭಾರತ ದೇಶವು ಉಪಗ್ರಹ ಉಡ್ಡಯಣಗಳಿಗೆ ಅತ್ಯಂತ ಅಗ್ಗದ ತಾಣವಾಗುವ ನಿರೀಕ್ಷೆಯೂ ಇದೆ. ಇನ್ನು ‘ನವರತ್ನ’ ವಿಮಾನ ಕಂಪನಿ ‘ಎಚ್.ಎ.ಎಲ್.’ ದೇಶದ ಮಿಲಿಟರಿ ಅಗತ್ಯಗಳನ್ನು ಸಮರ್ಥವಾಗಿ ಪೂರೈಸುತ್ತಿದೆ. ಜಗತ್ತೇ ಹೆಮ್ಮೆ ಪಡುವಂಥ ವೈಮಾಂತರಿಕ್ಷ ಎಂಜಿನೀರಿಂಗ್ ಶಿಕ್ಷಣ ವಿಭಾಗ ಬೆಂಗಳೂರಿನ ‘ಐ.ಐ.ಎಸ್‍ಸಿ.’ಯಲ್ಲಿದೆ. ಇನ್ನು ಬೆಂಗಳೂರನ್ನು ಭಾರತದ ವಿಮಾನ ಎಂಜಿನೀರಿಂಗ್ ಹಾಗೂ ಎಲೆಕ್ಟ್ರಾನಿಕ್ಸ್ ಎಂಜಿನೀರಿಂಗ್ ರಾಜಧಾನಿಯನ್ನಾಗಿ ಮಾಡಲು ಡಿ.ಆರ್.ಡಿ.ಓ. ಹತ್ತಾರು ಪ್ರಯೋಗಶಾಲೆಗಳನ್ನು ತೆರೆದಿದೆ. ಉಳಿದಂತೆ ನಾಗರೀಕ ವಿಮಾನಗಳನ್ನು ವಿನ್ಯಾಸಗೊಳಿಸುತ್ತಿರುವ ‘ಎನ್.ಎ.ಎಲ್.’ ಪ್ರಯೋಗಶಾಲೆ, ಎಲೆಕ್ಟ್ರಾನಿಕ್ಸ್ ಬಿಡಿಭಾಗ, ಕಂಪ್ಯೂಟರ್ ವ್ಯವಸ್ಥೆಗಳ ವಿನ್ಯಾಸ ಹಾಗೂ ಉತ್ಪಾದನೆಯನ್ನು ಕೈಗೊಂಡಿರುವ ‘ಭಾರತ್ ಎಲೆಕ್ಟ್ರಾನಿಕ್ಸ್’, ಖಾಸಗಿ ವಲಯದ ‘ತನೇಜಾ ಏರೋಸ್ಪೇಸ್’ .... ಬೆಂಗಳೂರನ್ನು ಎಂಜಿನೀರಿಂಗ್ ಕ್ಷೇತ್ರದ ಬಲಾಢ್ಯ ನಗರವನ್ನಾಗಿಸಿದೆ. ಹೀಗಾಗಿ ಹತ್ತು-ಹಲವು ಜಗನ್ಮಾನ್ಯ ಎಂಜಿನೀರಿಂಗ್ ಸಂಸ್ಥೆಗಳು ತಮ್ಮ ವಹಿವಾಟನ್ನು ಬೆಂಗಳೂರಿನಲ್ಲಿ ವಿಸ್ತರಿಸಿಕೊಂಡಿವೆ. ಜಗತ್ತಿನ ಅತಿ ದೊಡ್ಡ ವಿಮಾನ ತಯಾರಿಕಾ ಕಂಪನಿಗಳಾದ ‘ಬೋಯಿಂಗ್’ ಹಾಗೂ ‘ಏರ್‌ಬಸ್’ ಬೆಂಗಳೂರಿನ ‘ಎಚ್.ಎ.ಎಲ್.’ ಸೇರಿದಂತೆ ಹಲವು ಕಂಪನಿಗಳೊಂದಿಗೆ ಎಂಜಿನೀರಿಂಗ್ ವಿನ್ಯಾಸ ಹಾಗೂ ಉತ್ಪಾದನಾ ವಹಿವಾಟನ್ನು ಹಂಚಿಕೊಂಡಿವೆ. ಇನ್ನು ವಿಮಾನ ಎಂಜಿನ್‍ಗಳನ್ನು ಉತ್ಪಾದಿಸುವ ‘ಜಿ.ಇ.’, ‘ಸ್ನೆಕ್ಮಾ’, ‘ರೋಲ್ಸ್‍ರಾಯ್ಸ್’, ‘ಹನಿವೆಲ್’ ... ತಮ್ಮ ಎಂಜಿನೀರಿಂಗ್ ವಿನ್ಯಾಸ ಕೇಂದ್ರಗಳನ್ನು ಭಾರತದಲ್ಲಿ ಆರಂಭಿಸಿವೆ. ಈ ನಿಟ್ಟಿನಲ್ಲಿ ಭಾರತೀಯ ದೈತ್ಯ ಐ.ಟಿ. ಕಂಪನಿಗಳೂ ಹಿಂದೆ ಬಿದ್ದಿಲ್ಲ. ‘ಇನ್ಫೋಸಿಸ್’, ‘ವಿಪ್ರೋ’, ‘ಟಿ.ಸಿ.ಎಸ್.’ಗಳೂ ತಮ್ಮ ವೈಮಾಂತರಿಕ್ಷ ವಿಭಾಗಗಳ ಮೂಲಕ ವಿದೇಶಿ ‘ಬ್ಯುಸಿನೆಸ್’ ಹೆಚ್ಚಿಸಿಕೊಳ್ಳುತ್ತಿವೆ. ಯೂರೋಪ್ ದೇಶಗಳ ವೈಮಾಂತರಿಕ್ಷ ವಹಿವಾಟಿನ ಬಹುದೊಡ್ಡ ಒಕ್ಕೂಟ ‘ಇ.ಎ.ಡಿ.ಎಸ್.’ ಸದ್ಯದಲ್ಲಿಯೇ ಬೆಂಗಳೂರನ್ನು ಕೇಂದ್ರಸ್ಥಾನವಾಗಿಸಿಕೊಳ್ಳಲಿದೆ. ಅಂದರೆ ಬೆಂಗಳೂರು ಎಂಜಿನೀರಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ‘ಬಿ.ಪಿ.ಓ. ರಾಜಧಾನಿ’ ಆಗುವ ಆಗುವುದರಲ್ಲಿ ಸಂಶಯವೇ ಇಲ್ಲ.

ಈ ಬಗೆಯ ‘ಬಿ.ಪಿ.ಓ.’ ಅನ್ನು ‘ಇ.ಪಿ.ಓ.’ ಎಂದು ಗುರುತಿಸಲಾಗಿದೆ. ಜಗತ್ತಿನ ಮುಂಚೂಣಿ ಆಟೋಮೊಬೈಲ್ ಹಾಗೂ ಏರೋಸ್ಪೇಸ್ ಕಂಪನಿಗಳಿಗೆ ಭಾರತದ ಎಂಜಿನೀರ್‌ಗಳು ‘ಇ.ಪಿ.ಓ.’ ಕೆಲಸಗಳಾದ ಕಂಪ್ಯೂಟರ್ ನೆರವಿನ ವಿನ್ಯಾಸ (‘ಸಿ.ಎ.ಡಿ’), ಉತ್ಪಾದನೆ (‘ಸಿ.ಎ.ಎಂ.’) ಹಾಗೂ ಎಂಜಿನೀರಿಂಗ್ (‘ಸಿ.ಎ.ಇ.’) ಮುಂತಾದವುಗಳನ್ನು ಮಾಡಿಕೊಡಲಿದ್ದಾರೆ. ‘ಇ.ಪಿ.ಓ.’ ವಹಿವಾಟು ಭಾರತದಲ್ಲಿ ಲಭ್ಯವಿರುವ ವಿನ್ಯಾಸ - ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ತಜ್ಞರುಗಳ ಭಾಗ್ಯದ ಬಾಗಿಲನ್ನು ತೆರೆಯಲಿದೆ. ಈ ಬಗ್ಗೆ ಯಾವ ಬಗೆಯ ಜಾಗೃತಿ ಮೂಡುತ್ತಿವೆಯೆಂದರೆ ಎಂಜಿನೀರಿಂಗ್ ವಿನ್ಯಾಸದ ಬಗ್ಗೆ ಜರಗುವ ಎಲ್ಲ ಸಮ್ಮೇಳನಗಳೂ ಭರ್ತಿಯಾಗಿ ತುಂಬಿರುತ್ತವೆ. ಜಾಗತೀಕರಣದ ಗಾಳಿ ಇದೀಗ ಭಾರತದ ಎಂಜಿನೀರಿಂಗ್ ವಿನ್ಯಾಸ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರವನ್ನು ಪುಳಕಗೊಳಿಸುತ್ತಿದೆ. ಕಂಪ್ಯೂಟರ್ ತಂತ್ರಾಂಶಗಳ ನೆರವಿನ ಎಂಜಿನೀರಿಂಗ್ ವಿನ್ಯಾಸಗಳ ಸೂಕ್ಷ್ಮ ವಿಶ್ಲೇಷಣೆ, ಮೊದಲ ಮಾದರಿಗಳ ಕ್ಷಿಪ್ರ ಉತ್ಪಾದನೆ, ಮೂಲ ವಿನ್ಯಾಸ ಲಭ್ಯವಿಲ್ಲದ ಬಿಡಿಭಾಗಗಳನ್ನು ಮರು ರೂಪಿಸುವ ಎಂಜಿನೀರಿಂಗ್ ವಿಧಾನ, ಎಂಜಿನೀರಿಂಗ್ ಮಾದರಿಗಳ ಪರೀಕ್ಷೆ, ಕ್ಲಿಷ್ಟ ಬಿಡಿಭಾಗಗಳ ಉತ್ಪಾದನಾ ವಿಜ್ಞಾನ, ತ್ರಿ-ಗಾತ್ರ ಕಂಪ್ಯೂಟರ್ ಮಾದರಿಗಳ ರಚನೆ .... ಈ ಬಗೆಯ ಕೆಲಸ ಕಾರ್ಯಗಳು ನಮ್ಮ ದೇಶದ ಎಂಜಿನೀರಿಂಗ್ ಕಂಪನಿಗಳಿಗೆ ಬಹುದೊಡ್ಡ ವಹಿವಾಟನ್ನು ತಂದುಕೊಡುತ್ತಿದೆ. ಇಂಥ ವಿಷಯಗಳಲ್ಲಿ ಪರಿಣತಿಯನ್ನು ಪಡೆಯಲು ನಮ್ಮ ಎಂಜಿನೀರ್‌ಗಳು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ತಂತ್ರಜ್ಞಾನದ ಹೊಸ ಆವಿಷ್ಕಾರಗಳ ಬಗೆಗಿನ ಜ್ಞಾನ, ಸ್ಫರ್ದಾತ್ಮಕ ರೀತಿಯಲ್ಲಿ ಕೆಲಸ ಮಾಡಬಲ್ಲ ಚಾಕಚಕ್ಯತೆ, ಸದಾ ಜಾಗೃತವಾಗಿರುವ ಕುಶಲತೆ, ವಿದ್ಯಾ ಸಂಸ್ಥೆಗಳೊಂದಿಗಿನ ಸಂಪರ್ಕ, ಜಾಗತಿಕವಾಗಿ ಲಭ್ಯವಿರುವ ಉತ್ಪಾದನಾ ತಂತ್ರಜ್ಞಾನ ... ಇತ್ಯಾದಿ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಎಂಜಿನೀರಿಂಗ್ ಕ್ಷೇತ್ರ ಮುನ್ನಡೆಯಬೇಕಾದರೆ ಮೇಲೆ ಪಟ್ಟಿ ಮಾಡಿರುವ ವಿಷಯಗಳನ್ನು ಕಂಪನಿಗಳು, ವಿದ್ಯಾಸಂಸ್ಥೆಗಳು, ಸಂಶೋಧನಾಲಯಗಳು, ಎಂಜಿನೀರ್‌ಗಳು ಮನದಟ್ಟು ಮಾಡಿಕೊಳ್ಳಬೇಕು. ಈ ಬಗ್ಗೆ ಚಿಂತಿಸುವಾಗ ನೆನಪಿಗೆ ಬರುವ ಮೊದಲ ಹೆಸರು ‘ಟಾಟಾ ಇನ್‍ಸ್ಟಿಟ್ಯೂಟ್’ ಎಂದೇ ಹೆಸರಾದ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ (ಐ.ಐ.ಎಸ್‍ಸಿ.). ಇಲ್ಲೊಂದು ವಿಶಿಷ್ಟವಾದ ಎಂಜಿನೀರೀಂಗ್ ಕೇಂದ್ರವಿದೆ. ಅದರ ಹೆಸರು ‘ಎಂಜಿನೀರಿಂಗ್ ಉತ್ಪನ್ನ ವಿನ್ಯಾಸ ಹಾಗೂ ತಯಾರಿಕಾ ಕೇಂದ್ರ’. ಈ ಕೇಂದ್ರವು ಬೆಂಗಳೂರಿನ ಖಾಸಗಿ ಎಂಜಿನೀರಿಂಗ್ ವಿನ್ಯಾಸ ಸಂಸ್ಥೆ ‘ಪ್ರೋಸಿಮ್’ನ ಜತೆಗೂಡಿ ಆಗಸ್ಟ್ ತಿಂಗಳಿನಲ್ಲಿ (9 ರಿಂದ 12) ಅಂತಾರಾಷ್ಟ್ರೀಯ ಸಮ್ಮೇಳನವೊಂದನ್ನು ಆಯೋಜಿಸಿದೆ. ‘ಎಂಜಿನೀರಿಂಗ್, ವಿನ್ಯಾಸ, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ಜಾಗತೀಕರಣ’ ಒಡ್ಡುವ ಸವಾಲುಗಳು ಹಾಗೂ ನೀಡುವ ಅವಕಾಶಗಳ ಬಗ್ಗೆ ಇಲ್ಲಿ ಪರಿಣತರು ಚರ್ಚಿಸಲಿದ್ದಾರೆ. ಐ.ಐ.ಎಸ್‍ಸಿ. ಆವರಣದಲ್ಲಿಯೇ ಜರಗುವ ಈ ಸಮ್ಮೇಳನವನ್ನು ಐ.ಐ.ಎಸ್‍ಸಿ. ಹಾಗೂ ಪ್ರೋಸಿಮ್‍ಗಳ ಜತೆಗೆ ‘ತಾಂತ್ರಿಕ ಶಿಕ್ಷಣದ ಭಾರತೀಯ ಸಂಸ್ಥೆ - ಐ.ಎಸ್.ಟಿ.ಇ.’, ‘ಲೋಹ ಬಿಡಿಭಾಗಗಳ ಉತ್ಪಾದಕರ ಸಂಘಟನೆ - ಎಂ.ಸಿ.ಎಂ.ಎ.’ಗಳು ಜಂಟಿಯಾಗಿ ಪ್ರಾಯೋಜಿಸುತ್ತಿವೆ. ಅಂದ ಮೇಲೆ ಎಂಜಿನೀರಿಂಗ್‍ಗೆ ಸಂಬಂಧಿಸಿದ ಎಲ್ಲ ಪ್ರಾತಿನಿಧಿಕ ಸಂಘಟನೆಗಳೂ ಒಗ್ಗೂಡಿ ಈ ಸಮ್ಮೇಳನದಲ್ಲಿ ಚಿಂತನೆ ನಡೆಸಲಿವೆ. ಐ.ಟಿ. ಕಂಪನಿಗಳಾದ ‘ಇನ್ಫೋಸಿಸ್’, ‘ಟಿ.ಸಿ.ಎಸ್.’, ಕಾರು ಉತ್ಪಾದಮಾ ಕಂಪನಿಗಳಾದ ‘ಜನರಲ್ ಮೋಟಾರ್ಸ್’, ‘ಮಹೀಂದ್ರ’, ‘ಟಾಟಾ ಮೋಟಾರ್ಸ್’, ‘ಡಾಲ್ಮಿಯರ್ ಕ್ರೈಸ್ಲರ್’, ‘ಫೋರ್ಡ್’ ಮುಂತಾದವುಗಳೂ ಸಹಾ ಈ ಮೇಳದಲ್ಲಿ ಭಾಗಿಯಾಗಲಿವೆ. ಹೊಸ ತಂತ್ರಜ್ಞಾನದ ಬಗ್ಗೆ ಪ್ರದರ್ಶನವೊಂದನ್ನೂ ಇಲ್ಲಿ ಹಮ್ಮಿಕೊಳ್ಳಲಾಗಿದೆ, ಸಂಶೋಧಕರ ಪ್ರಬಂಧಗಳು ಮಂಡಣೆಯಾಗಲಿವೆ, ಬ್ಯುಸಿನೆಸ್‍ನ ಹೊಸ ಸಾಧ್ಯತೆಗಳ ಬಗ್ಗೆ ಚರ್ಚೆಯಾಗಲಿವೆ, ವಿದ್ಯಾಸಂಸ್ಥೆಗಳು ಹಾಗೂ ಉದ್ದಿಮೆಗಳ ನಡುವೆ ಹೊಸ ಒಡಂಬಡಿಕೆಗಳಾಗಲಿವೆ. ದೇಶದ ಪ್ರತಿಷ್ಠಿತ ಎಂಜಿನೀರಿಂಗ್ ವಿದ್ಯಾಸಂಸ್ಥೆಗಳಾದ ‘ಐ.ಐ.ಟಿ.’, ‘ಎನ್.ಐ.ಟಿ.’ಗಳ ವಿದ್ಯಾರ್ಥಿಗಳು ತಮ್ಮ ಪ್ರಾಧ್ಯಾಪಕರುಗಳೊಂದಿಗೆ ಇದರಲ್ಲಿ ಸಕ್ರಿಯವಾಗಿ ಭಾಗಿಯಾಗುವ ನಿರೀಕ್ಷೆಯಿದೆ. ಹಲವು ವಿದೇಶಿ ಎಂಜಿನೀರಿಂಗ್ ಸಂಶೋಧನಾ ಕೇಂದ್ರಗಳಿಂದಲೂ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.

ಇಡೀ ಸಮ್ಮೇಳನದ ಸೂತ್ರಧಾರ ಬೆಂಗಳೂರಿನ ‘ಪ್ರೋಸಿಮ್’ ಕಂಪನಿಯ ನೇತಾರ ಡಾ ಎಸ್. ಶಾಮಸುಂದರ್. ಎಂಜಿನೀರಿಂಗ್ ಕ್ಷೇತ್ರದಲ್ಲಿ ಬೆಂಗಳೂರಿನ ಐ.ಐ.ಎಸ್‍ಸಿ’ಯಿಂದ ಡಾಕ್ಟರೇಟ್ ಪಡೆದಿರುವ ಶಾಮಸುಂದರ್, ಲಂಡನ್ನಿನ ಇಂಪೀರಿಯಲ್ ಕಾಲೇಜು, ಅಮೆರಿಕದ ಡ್ರೆಕ್ಸೆಲ್ ವಿವಿ, ರೈಟ್ ಸ್ಟೇಟ್ ವಿವಿ, ರೈಟ್ ಪ್ಯಾಟರ್‌ಸನ್ ವಾಯುಸೇನಾ ನೆಲೆ ಮುಂತಾದ ಪ್ರತಿಷ್ಠಿತ ಕಂಪನಿಗಳಲ್ಲಿ ಅತ್ಯುತ್ತಮ ಕೆಲಸಗಳನ್ನು ಮಾಡಿದ್ದಾರೆ. ಬಾಸ್‍ಗಳಿಂದ ಭೇಷ್ ಅನಿಸಿಕೊಂಡಿದ್ದಾರೆ. ಉತ್ಪಾದನಾ ಎಂಜಿನೀರಿಂಗ್ ಕ್ಷೇತ್ರದಲ್ಲಿ ಹೆಸರು ಪಡೆದಿರುವ ಶಾಮ್, ‘ಜನರಲ್ ಮೋಟಾರ್ಸ್’, ‘ಫೋರ್ಡ್’, ‘ಜಿ.ಇ.’, ‘ಸೀಮನ್ಸ್’ ಮುಂತಾದ ಕಂಪನಿಗಳಿಗೆ ನೆರವು ನೀಡಿದ್ದಾರೆ. ಭಾರತಕ್ಕೆ ಮರಳಿದ ನಂತರ ಜಾಗತಿಕ ಗುಣಮಟ್ಟದ ಎಂಜಿನೀರಿಂಗ್ ಸೌಕರ್ಯಗಳನ್ನು ನಿರ್ಮಿಸುವುದರಲ್ಲಿ ಮುಂದಾದ ಶಾಮ್, ತಮ್ಮ ಅನುಭವಗಳನ್ನು ಭಾರತದ ಸರ್ವಶ್ರೇಷ್ಠ ಎಂಜಿನೀರಿಂಗ್ ಕಂಪನಿಗಳಾದ ‘ಟಾಟಾ ಸ್ಟೀಲ್’, ‘ಟೆಲ್ಕೋ’, ಟೀವಿಎಸ್’, ‘ಭಾರತ್ ಫೋರ್ಜ್’, ‘ವೀಡಿಯಾ’, ‘ಕಲ್ಯಾಣಿ ಫೋರ್ಜ್’ ಮುಂತಾದವುಗಳೊಂದಿಗೆ ಹಂಚಿಕೊಂಡಿದ್ದಾರೆ. ಇಲ್ಲಿ ಗಮನಾರ್ಹ ಅಂಶವೇನೆಂದರೆ ರಕ್ಷಣಾ ಉತ್ಪಾದನಾ ಕಂಪನಿಗಳಾದ ‘ಆರ್ಡ್‍ನೆನ್ಸ್ ಕಾರ್ಖಾನೆಗಳು’, ‘ಎಚ್.ಎ.ಎಲ್’, ಹಾಗೂ ಸಂಶೋಧನಾಲಯಗಳಾದ ‘ಡಿ.ಆರ್.ಡಿ.ಓ.’, ‘ಇಸ್ರೋ’ಗಳೊಂದಿಗೆ ನಿಕಟ ಸಂಬಂಧಗಳನ್ನು ಹೊಂದಿದ್ದಾರೆ. ದೇಶ ಕಟ್ಟುವ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ.

ವಿದೇಶಗಳಲ್ಲಿ ಎಂಜಿನೀರಿಂಗ್ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಯ ನಂತರ ಭಾರತಕ್ಕೆ ಹಿಂದಿರುಗಿ ಸ್ವದೇಶಿ ಕಂಪನಿಗಳ ನೆರವಿಗೆ ತೊಂಕ ಕಟ್ಟಿ ನಿಂತಿರುವ ಶಾಮ್ ಅವರನ್ನು ಅಭಿನಂದಿಸಲೇ ಬೇಕು. ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು ಮತ್ತಷ್ಟು ಕಾರಣಗಳಿವೆ. ತಮ್ಮೆಲ್ಲ ಕೆಲಸ ಕಾರ್ಯಗಳ ನಡುವೆಯೂ ಈ ಅಪ್ಪಟ ಕನ್ನಡಿಗ ಶಾಮ್ ಸಾಮಾಜಿಕ ಚಟುವಟಿಕೆಗಳಿಗೆ ಕೆಲ ಸಮಯ ಮೀಸಲಿಟ್ಟಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಯುವಜನರಲ್ಲಿ ಬಿತ್ತಲೆಂದು ‘ಯುಗಯಾತ್ರಿ’ ಎಂಬ ಸಾಂಸ್ಕೃತಿಕ ಸಂಘಟನೆಯೊಂದನ್ನು ಆರಂಭಿಸಿದ್ದಾರೆ. ತಮ್ಮ ಬಿಡುವಿನ ವೇಳೆಯನ್ನು ಅಭಿವೃದ್ಧಿ ಕೆಲಸಗಳಿಗೆಂದೇ ಮೀಸಲಿಟ್ಟಿರುವ ಶಾಮ್, ‘ಸಮಗ್ರ ವಿಕಾಸ’ ಎಂಬ ಕಾರ್ಯಾಚರಣಾ ವಿಶ್ವಸ್ಥ ಸಂಸ್ಥೆಯೊಂದರ ಸಹಭಾಗಿಯಾಗಿದ್ದಾರೆ. ಸಂಸ್ಕೃತ ಭಾಷೆಯ ಬಳಕೆಯನ್ನು ಉತ್ತೇಜಿಸಲು ‘ಸಂಸ್ಕೃತ ಭಾರತಿ’ ಎಂಬ ವಿಶ್ವಸ್ಥ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ.

ಎಂಜಿನೀರಿಂಗ್ ವಿನ್ಯಾಸ ಕ್ಷೇತ್ರದಲ್ಲಿ ಸಾಮಗ್ರಿಗಳನ್ನು ನಿರ್ದಿಷ್ಟ ಕೆಲಸಗಳಿಗೆ ಪದೇ ಪದೇ ಬಳಸುವುದರಿಂದ ಅವುಗಳಿಗೆ ‘ದಣಿವು’ (ಫ್ಯಾಟೀಗ್) ಆಗಿರುತ್ತದೆ. ಈ ‘ದಣಿವು’ ಎಷ್ಟರ ಮಟ್ಟಿಗಾಗಿದೆ, ಅವುಗಳನ್ನು ಕಡಿಮೆ ಮಾಡುವುದು ಹೇಗೆ, ಒಟ್ಟಾರೆ ದಣಿವಿನಿಂದ ಸಾಮಗ್ರಿ ಇನ್ನು ಎಷ್ಟು ಕಾಲ ಕೆಲಸ ಮಾಡಬಲ್ಲದು ... ಮುಂತಾದ ಲೆಕ್ಕಾಚಾರಗಳು ಅತ್ಯಂತ ಸ್ವಾರಸ್ಯಕರವಾದದ್ದು. ಅಷ್ಟೇ ಅಲ್ಲ, ಅವುಗಳ ವಿಶ್ಲೇಷಣೆ ಅತ್ಯಂತ ಕ್ಲಿಷ್ಟಕರವಾದದ್ದು. ಈ ಬೌದ್ಧಿಕ ಸವಾಲಿನ ಕೆಲಸವನ್ನು ಯಾವುದೇ ‘ದಣಿವಿಲ್ಲದೆಯೆ’ ನಗುಮುಖದಿಂದ ನಿರ್ವಹಿಸುವುದರಲ್ಲಿ ಶಾಮ್ ನಿಸ್ಸೀಮರು. ದಣಿವಿನ ನಿರ್ವಹಣೆಯನ್ನು ಎಂಜಿನೀರಿಂಗ್ ಮೂಲಕ ಕಲಿತಿರುವ ಶಾಮ್ ಅವರಿಗೆ ತಮ್ಮ ಕಚೇರಿ ಹಾಗೂ ಕಚೇರಿಯೇತರ ಕೆಲಸಗಳನ್ನು ಸುಗಮವಾಗಿ ನಡೆಸುವುದರಲ್ಲಿ ದಣಿವೆಂಬುದಿಲ್ಲ. ‘ಇ.ಪಿ.ಓ.’ ಕ್ರಾಂತಿಯಿಂದ ದೇಶದ ಎಂಜಿನೀರ್‌ಗಳಿಗೆ ಹೆಚ್ಚು ಉದ್ಯೋಗಾವಕಾಶ ದೊರೆಯುವಂತಾಗಲಿ, ಈ ಬಗ್ಗೆ ಸ್ಫೂರ್ತಿದಾಯಕವಾಗಿ ಕಾರ್ಯ ನಿರ್ವಹಿಸುತ್ತಿರುವ ಶಾಮ್‍ಗೆ ಮತ್ತಷ್ಟು ಚೈತನ್ಯ ದೊರೆಯಲಿ ಎಂದು ಹಾರೈಸೋಣ!

(ಕೃಪೆ : ವಿಜಯ ಕರ್ನಾಟಕ ; 30-07-2007)

ಕಲಾಮ್ ಮತ್ತೆ ಪಾಠ ಮಾಡುತ್ತಾರಂತೆ, ಕಲಿಯಲು ಸಜ್ಜಾಗೋಣ!


‘ ನೀವು ಮೂಲತಃ ವಿಜ್ಞಾನಿ, ನಂತರ ರಾಷ್ಟ್ರಪತಿ ಆಗಿದ್ದೀರಿ. ಭಾರತದಂಥ ದೇಶದಲ್ಲಿ ಹೊಸ ಶಕೆಯೊಂದನ್ನು ಆರಂಭಿಸಬಹುದು ಎಂಬ ನಂಬಿಕೆ ನಿಮಗಿದೆಯೆ? ಹೌದು ಎಂದಾದರೆ, ಅದು ಹೇಗೆ’? - ಐದು ವರ್ಷಗಳ ಹಿಂದೆ ಅಬ್ದುಲ್ ಕಲಾಮ್ ಅವರಿಗೆ ಹೀಗೊಂದು ಪ್ರಶ್ನೆ ಹಾಕಿದ್ದು ಪತ್ರಕರ್ತರಲ್ಲ, ಜಸ್‍ಪ್ರೀತ್ ಎಂಬ ಶಾಲಾ ಬಾಲಕ. ‘ಭಾರತ ಒಂದು ಅಭಿವೃದ್ಧ ದೇಶವಾಗುವತ್ತ ಹಾಗೂ ಅದರ ಶತಕೋಟಿ ಜನರ ಮುಖಗಳಲ್ಲಿ ಮುಗುಳ್ನಗೆ ತರಿಸುವತ್ತ ನಾನು ಕೆಲಸ ಮಾಡುತ್ತಿದ್ದೇನೆ’. ಎಂದಿನ ಮುಗುಳ್ನಗೆಯೊಂದಿಗೆ ರಾಷ್ಟ್ರಪತಿ ಭವನದಿಂದ ಹೊರನಡೆಯುತ್ತಿರುವ ಕಲಾಮ್ ತಮ್ಮ ಅಧಿಕಾರಾವಧಿಯನ್ನು ಅರ್ಥಪೂರ್ಣವಾಗಿ ಮುಗಿಸಿದ್ದಾರೆ. ಈ ಅವಧಿಯಲ್ಲಿ ದೇಶ ಸಾಕಷ್ಟು ಅಭಿವೃದ್ಧಿಯಾಗಿದೆ ಹಾಗೂ ಶತಕೋಟಿ ಜನರ ಮುಖಗಳಲ್ಲಿ ಮುಗುಳ್ನಗೆ ಚಿಮ್ಮಿದೆ ಎಂದು ಹೇಳಿದರೆ ಅದು ಕೇವಲ ಔಪಚಾರಿಕ ವಿದಾಯದ ಮಾತಾದೀತು. ಅಬ್ದುಲ್ ಕಲಾಮ್ ಅವರನ್ನು ಏನು ಮಾಡಬಲ್ಲಿರಿ ಎಂದು ಪ್ರಶ್ನೆ ಹಾಕಿದ್ದ ಜಸ್‍ಪ್ರೀತ್ ಎಲ್ಲಿದ್ದಾನೊ, ಗೊತ್ತಿಲ್ಲ. ಬಹುಶಃ ಕಾಲೇಜು ಕಲಿಯುತ್ತಿರಬಹುದು. ಆದರೆ ಜಸ್‍ಪ್ರೀತ್‍ನಂಥ ಕೋಟ್ಯಂತರ ಮಕ್ಕಳಲ್ಲಿ ಅವರು ಕೇವಲ ಮುಗುಳ್ನಗೆಯನ್ನಷ್ಟೇ ಮೂಡಿಸಿಲ್ಲ, ಅವರೆಲ್ಲರ ಹೃದಯದಲ್ಲಿ ಆತ್ಮವಿಶ್ವಾಸ ಮೂಡಿಸಿದ್ದಾರೆ. ಅವರಲ್ಲಿ ಒಂದಷ್ಟು ಮಕ್ಕಳಲ್ಲಿಯಾದರೂ ಸ್ವದೇಶಿ ತಂತ್ರಜ್ಞಾನದ ಕಿಚ್ಚನ್ನು ಹಚ್ಚಿದ್ದಾರೆ.
ಕಲಾಮ್ ಹೇಗಿದ್ದರು, ಏನು ಮಾಡುತ್ತಿದ್ದರು, ಅವರ ಚಿಂತನೆಗಳೇನು, ಅವರು ಕಟ್ಟಿದ್ದ ಕನಸುಗಳು ಯಾವುವು ....... ಹೀಗೊಂದಷ್ಟು ಪ್ರಶ್ನೆಗಳನ್ನು ಮುಂದೆ ಹರಡಿಕೊಂಡು ಕುಳಿತರೆ ರಾಶಿ ರಾಶಿ ಉತ್ತರಗಳನ್ನು ಗುಡ್ಡೆ ಹಾಕಿಕೊಳ್ಳಬಹುದು. ಅವುಗಳನ್ನು ವಿಶ್ಲೇಷಣೆ ಮಾಡ ಹೊರಟರೆ ಬಲಿಷ್ಟ ಭಾರತ ಕಟ್ಟಲು ಸರಳ ಸೂತ್ರಗಳು ಕೈಗೆಟುಕಬಹುದು. ಇಂಥ ದಿಕ್ಸೂಚಿಗಳು ಎಷ್ಟಿವೆಯೆಂದರೆ ಬಹುಶಃ ನಮ್ಮ ಮುಂದಿನ ರಾಷ್ಟ್ರಪತಿಗಳು ನಿವೃತ್ತರಾಗುವವರೆಗೆ ನಾವು ಕಲಾಮ್ ಅಧ್ಯಯನವನ್ನು ಮುಂದುವರಿಸಬಹುದು. ನೀವೆಂದಾದರೂ ನಮ್ಮ ದೇಶದ ರಾಷ್ಟ್ರಪತಿಗಳ ಅಧಿಕೃತ ಇಂಟರ್‌ನೆಟ್ ವೆಬ್‍ಸೈಟ್ ಅಂದರೆ ಅಂತರ್‌ಜಾಲ ತಾಣ- http://www.presidentofindia.nic.in/ ಗೆ ಭೇಟಿ ಕೊಟ್ಟಿದ್ದರೆ ಮೇಲಿನ ಮಾತುಗಳಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ ಎಂದು ಮನವರಿಕೆಯಾದೀತು. ಅಂತರ್‌ಜಾಲ ತಾಣದಲ್ಲಿ ಮಕ್ಕಳಿಗೆಂದೇ ಪ್ರತ್ಯೇಕ ವಿಭಾಗವಿದೆ. ಅಂಕಣದ ಆರಂಭದಲ್ಲಿ ಪ್ರಸ್ತಾಪಿಸಿದಂಥದೇ 758 ಶಾಲಾ ಮಕ್ಕಳ ಪ್ರಶ್ನೆಗಳಿಗೆ ಕಲಾಮ್ ಇಲ್ಲಿ ಉತ್ತರಗಳನ್ನು ದಾಖಲಿಸಿದ್ದಾರೆ.




ಕಲಾಮ್ ಮೂಲತಃ ಒಬ್ಬ ಮೇಷ್ಟ್ರು, ಹೀಗಾಗಿ ತಮ್ಮ ಮುಂದೆ ಕಾಣುವವರನ್ನೆಲ್ಲಾ ಮಕ್ಕಳೆಂದೇ ಭಾವಿಸಿಬಿಡುತ್ತಾರೆ. ಭಾವಪರವಶರಾಗಿ ಪಾಠ ಹೇಳಲು ಹೊರಡುತ್ತಾರೆ - ಎಂಬ ಲಘು ಲೇವಡಿಗಳು ಅವರನ್ನು ಅಂಟಿಕೊಂಡಿದ್ದವು. ತೀರಾ ಹತ್ತಿರದಿಂದ ಕಲಾಮ್ ಅವರೊಂದಿಗೆ ಸಂಪರ್ಕವಿಟ್ಟುಕೊಂಡವರು ಇಂಥ ಆಪಾದನೆಗಳನ್ನು ಒಪ್ಪಲಾರರು. ಕಲಾಮ್ ದೇಶದ ರಕ್ಷಣಾ ಮಂತ್ರಿಗಳ ವೈಜ್ಞಾನಿಕ ಸಲಹೆಗಾರರಾದಂದಿನಿಂದಲೂ ಹತ್ತಿರದ ಅಧಿಕೃತ ಒಡನಾಟಗಳನ್ನಿಟ್ಟುಕೊಂಡಿರುವ ಪ್ರತಿಷ್ಠಿತ ಇಂಗ್ಲಿಷ್ ಸಾಪ್ತಾಹಿಕ ‘ದ ವೀಕ್’ನ ದೆಹಲಿ ಸ್ಥಾನಿಕ ಸಂಪಾದಕ ಕೆ.ಎಸ್.ಸಚ್ಚಿದಾನಂದ ಮೂರ್ತಿ (ಕನ್ನಡಿಗ ‘ಸಚ್ಚಿ’), ಅದೇ ಪತ್ರಿಕೆಯ ದೆಹಲಿ ಬ್ಯೂರೊ ಮುಖ್ಯಸ್ಥ ಹಾಗೂ ರಕ್ಷಣಾ ವಿಷಯಗಳ ತಜ್ಞ ಆರ್.ಪ್ರಸನ್ನನ್ ಇವರುಗಳನ್ನು ಮಾತನಾಡಿಸಿದರೆ ಸಾಕು, ಕಲಾಮ್ ‘ಪಾಠ’ಗಳಲ್ಲೂ ಜಿಗಿತು ಬರುವ ಹೊಸ ಹೊಳಹುಗಳನ್ನು ಪ್ರಸ್ತಾಪಿಸುತ್ತಾರೆ. ಅಷ್ಟೇಕೆ, ಕಲಾಮ್ ಅವರೊಂದಿಗೆ ಹದಿನಾಲ್ಕು ದಿನಗಳ ಕಾಲ ನಾಲ್ಕು ರಾಷ್ಟ್ರಗಳನ್ನು ಸುತ್ತಿ ಬಂದ ‘ವಿಜಯ ಕರ್ನಾಟಕ’ ಸಂಪಾದಕ ವಿಶ್ವೇಶ್ವರ ಭಟ್ ಅವರನ್ನು ಒಮ್ಮೆ ಕೇಳಿ ನೋಡಿ. ಹೊರರಾಷ್ಟ್ರಗಳಲ್ಲಿ ಕಲಾಮ್ ಅವರ ಮಾತುಗಳಿಗಿರುವ ಮೌಲ್ಯದ ಬಗ್ಗೆ ಖಂಡಿತವಾಗಿಯೂ ನೂರೆಂಟು ಮಾತುಗಳನ್ನಾಡದೇ ಬಿಡುವುದಿಲ್ಲ. ಇನ್ನು ವಿಜ್ಞಾನಿ ಸಿ.ಆರ್.ಸತ್ಯ - ತಿರುವನಂತಪುರದ ಬಾಹ್ಯಾಕಾಶ ಕೇಂದ್ರದ ರಾಕೆಟ್ ಯೋಜನೆಗಳಲ್ಲಿ ಕಲಾಮ್ ಅವರೊಟ್ಟಿಗೆ ಕೆಲಸ ಮಾಡಿದ್ದ ಎಂಜಿನೀರಿಂಗ್ ಸಾಮಗ್ರಿ ಪರಿಣತ ಹಾಗೂ ಪ್ರಸ್ತುತ ‘ಟಾಟಾ ಅಡ್ವಾನ್ಸ್‍ಡ್ ಮೆಟೀರಿಯಲ್ಸ್’ನ ಹಿರಿಯ ಉಪಾಧ್ಯಕ್ಷ - ಅವರೊಂದಿಗೆ ಮಾತು ಶುರು ಹಚ್ಚಿಕೊಂಡರೆ ಹತ್ತು ಪದಗಳಿಗೊಮ್ಮೆ ಕಲಾಮ್ ಪ್ರತ್ಯಕ್ಷರಾಗಿಬಿಡುತ್ತಾರೆ. ಹಳೆಯ ಪತ್ರಿಕೆ ಹಾಗೂ ದೂರದರ್ಶನ ಸಂಚಿಕೆಗಳನ್ನು ಒಮ್ಮೆ ತಿರುವಿ ನೋಡಿದರೆ ಕಲಾಮ್ ಅವರ ಪಟ್ಟ ಶಿಷ್ಯ ಪ್ರಹ್ಲಾದ ತಾವು ಕ್ಷಿಪಣಿ ಯೋಜನೆಗಳನ್ನು ಸುಸೂತ್ರವಾಗಿ ಮುನ್ನಡೆಸಲು ಕಲಾಮ್ ಏನೆಲ್ಲಾ ಪಾಠಗಳನ್ನು ಕಲಿಸಿದ್ದರೆಂದು ನೆನಪಿಸಿಕೊಳ್ಳುತ್ತಾರೆ. ಈ ಬಗೆಯ ನಿಷ್ಪಕ್ಷಪಾತ ವಿಮರ್ಶೆಗಳಷ್ಟೇ ಸಾಕು, ಕಲಾಮ್ ಅವರ ‘ಮೇಷ್ಟ್ರಗಿರಿ’ಯ ಸಾರ್ಥಕತೆಗೆ.




ಬೆಂಗಳೂರಿನ ಮಲ್ಲೇಶ್ವರದ ಕೊನೆಯಲ್ಲಿರುವ ‘ಟಾಟಾ ಇನ್‍ಸ್ಟಿಟ್ಯೂಟ್’ (ಭಾರತೀಯ ವಿಜ್ಞಾನ ಮಂದಿರ - ಐ.ಐ.ಎಸ್‍ಸಿ.) ನಿಮಗೆ ಗೊತ್ತು. ಇನ್ನೆರಡು ವರ್ಷಗಳಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳಲಿರುವ ಈ ಜಗನ್ಮಾನ್ಯ ವಿಜ್ಞಾನ ಬೋಧನಾ ಸಂಸ್ಥೆಯೊಂದಿಗೆ ಅಬ್ದುಲ್ ಕಲಾಮ್ ಅವರ ಒಡನಾಟ 1958ರಿಂದಲೂ ಇದೆ. ಈ ಐಐಎಸ್‍ಸಿಯ ಶತಮಾನೋತ್ಸವವನ್ನು ಸಾರ್ಥಕವಾಗಿ ಆಚರಿಸಲು ಹಾಗೂ ಆ ಸಂದರ್ಭದಲ್ಲಿ ಮಹತ್ತರ ಯೋಜನೆಗಳನ್ನು ಹಮ್ಮಿಕೊಳ್ಳಲು ಸದ್ಯಕ್ಕೆ ಅಮೆರಿಕದಲ್ಲಿ ನೆಲೆಸಿರುವ ಐಐಎಸ್‍ಸಿಯ ಹಿರಿಯ ವಿದ್ಯಾರ್ಥಿಗಳು ಜೂನ್ ಕೊನೆಯ ವಾರದಲ್ಲಿ ಜಾಗತಿಕ ಸಮ್ಮೇಳನವೊಂದನ್ನು ಹಮ್ಮಿಕೊಂಡಿದ್ದರು. ಈ ವಿದ್ಯಾಲಯದ ಪ್ರತಿಷ್ಠಿತ ವಿದ್ಯಾರ್ಥಿಗಳಾದ ರೊದ್ದಂ ನರಸಿಂಹ, ಆರ್.ಚಿದಂಬರಂ, ಎನ್.ಬಾಲಕೃಷ್ಣನ್, ಕೋಟಾ ಹರಿನಾರಾಯಣ, ವಾಸುದೇವ ಆತ್ರೆ, ಬಿ.ದತ್ತಗುರು, ಎ.ಆರ್.ಉಪಾಧ್ಯ, ಬಿ.ಎನ್.ರಘುನಂದನ್, ರಾಘವೇಂದ್ರ ಗದಗಕರ ಮುಂತಾದವರು ಸಮ್ಮೆಳನದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಇವರೆಲ್ಲರೂ ದೇಶದ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಮಹತ್ತರ ಕಾಣಿಕೆಯನ್ನಿತ್ತವರು. ಜತೆಗೆ ಇಡೀ ಜಗತ್ತಿಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಿಕೊಟ್ಟವರು. ಕಳೆದೊಂದು ಶತಮಾನದಲ್ಲಿ ಐ.ಐ.ಎಸ್‍ಸಿ. ಕನಿಷ್ಠವೆಂದರೂ ಮೂವತ್ತು ಸಹಸ್ರ ಪ್ರತಿಭಾನ್ವಿತ ವಿಜ್ಞಾನಿಗಳಿಗೆ ವಿದ್ಯಾರ್ಥಿ ದೆಸೆಯಲ್ಲಿ ಮಾರ್ಗದರ್ಶನ ಮಾಡಿದೆ. ಇವರಲ್ಲಿ ಐದು ಸಹಸ್ರಕ್ಕೂ ಹೆಚ್ಚಿನ ಮಂದಿ ಅಮೆರಿಕದಲ್ಲಿನ ಪ್ರತಿಷ್ಠಿತ ಕಂಪನಿಗಳ ಏಳಿಗೆಗೆ ಕಾರಣರಾಗಿದ್ದಾರೆ. ‘ಇಂಟೆಲ್’, ‘ಸ್ಟ್ರಾಂಡ್ ಲೈಫ್ ಸೈನ್ಸಸ್’, ‘ಮೆಕ್‍ಕಿನ್ಸೆ’, ‘ಗೂಗಲ್’, ‘ಐ.ಬಿ.ಎಂ.’, ‘ಎಚ್.ಪಿ.’, ‘ಇಬೇ’, ‘ಮೈಕ್ರೊಸಾಫ್ಟ್’, ‘ಯಾಹೂ’, ‘ಸ್ಯಾಪ್’, ‘ಸಿಸ್ಕೊ’, ‘ಬೋಯಿಂಗ್’, ‘ಬ್ರಿಟಿಷ್ ಏರೋಸ್ಪೇಸ್’, ‘ಡೆಲ್’, ‘ನಾಸಾ’, ‘ಸನ್’ ...... ಹೀಗೆ ಜಗನ್ಮಾನ್ಯ ಕಂಪನಿಗಳನ್ನು ಪಟ್ಟಿ ಮಾಡುತ್ತಾ ಹೋಗಿ. ಇವೆಲ್ಲವುಗಳ ಸೂತ್ರಧಾರ ಸ್ಥಾನದಲ್ಲಿ ಐ.ಐ.ಎಸ್‍ಸಿಯ ಹಿರಿಯ ವಿದ್ಯಾರ್ಥಿಗಳಿದ್ದಾರೆ. ಜತೆಗೆ ಅಮೆರಿಕದ ಮೊದಲ ಹತ್ತಿಪ್ಪತ್ತು ವಿಶ್ವವಿದ್ಯಾಲಯಗಳ ವಿಖ್ಯಾತ ಪ್ರಾಧ್ಯಾಪಕರುಗಳ ಪಟ್ಟಿಯಲ್ಲಿ ಐಐಎಸ್‍ಸಿಯಿಂದ ಪಾಠ ಕಲಿತವರು ಸ್ಥಾನ ಗಿಟ್ಟಿಸಿದ್ದಾರೆ. ಇವೆಲ್ಲ ಸಾಧನೆಗಳ ಒಂದು ಪರಾಮರ್ಶೆಗೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕೂಡಿದ್ದ ಮೇಳವನ್ನು ರಾಷ್ಟ್ರಪತಿ ಅಬ್ದುಲ್ ಕಲಾಮ್ ಉದ್ಘಾಟಿಸಿದರು, ತಮ್ಮ ದೆಹಲಿಯ ಕೋಣೆಯಲ್ಲಿಯೇ ಕುಳಿತು. ತಂತ್ರಜ್ಞಾನವನ್ನು ಆಪ್ತವಾಗಿಸಿಕೊಳ್ಳುವುದರಲ್ಲಿ ಸದಾ ಮುಂದಾದ ಕಲಾಮ್ ಅತ್ಯುತ್ತಮವಾದ ಪ್ರಾತ್ಯಕ್ಷಿಕೆಯೊಂದನ್ನು ವೀಡಿಯೊ ಸಂವಾದದ ಮೂಲಕ ನೀಡಿದ್ದರು.




ಈ ಉಪನ್ಯಾಸದಲ್ಲಿ ಕಲಾಮ್ ಅವರಿಗೆ ಪಾಠ ಹೇಳುವ ಕಲೆ ಸಿದ್ಧಿಸಿದ್ದು ಹೇಗೆಂದು ಪತ್ತೆಯಾಗುತ್ತದೆ. ಅರವತ್ತರ ದಶಕದಲ್ಲಿ ಐಐಎಸ್‍ಸಿಯಲ್ಲಿ ವೈಮಾನಿಕ ಎಂಜಿನೀರಿಂಗ್ ಬೋಧಿಸುತ್ತಿದ್ದವರು ಜಾಗತಿಕವಾಗಿ ಹೆಸರು ಮಾಡಿದ್ದ ಡಾಸತೀಶ್ ಧವನ್. ಬೆಂಗಳೂರಿನ ಡಿಆರ್‌ಡಿಓದಲ್ಲಿ ವೈಜ್ಞಾನಿಕ ಸಹಾಯಕರಾಗಿದ್ದ ಅಬ್ದುಲ್ ಕಲಾಮ್ ತಮ್ಮ ಎಂಜಿನೀರಿಂಗ್ ಸಮಸ್ಯೆಯೊಂದನ್ನು ಪರಿಹರಿಸಿಕೊಳ್ಳಲು ಧವನ್ ಅವರನ್ನು ಸಂಪರ್ಕಿಸುತ್ತಾರೆ. ಹಮ್ಮು-ಬಿಮ್ಮಿಲ್ಲದ ಧವನ್, ಕಲಾಮ್ ಅವರನ್ನು ಪ್ರತಿ ಶನಿವಾರ ಮಧ್ಯಾಹ್ನ ಎರಡರಿಂದ ಮೂರು ಗಂಟೆಯ ತನಕ ನಡೆಯುತ್ತಿದ್ದ ತರಗತಿಗೆ ಆಹ್ವಾನಿಸುತ್ತಾರೆ. ಈ ಒಡನಾಟ ಆರು ವಾರಗಳ ಕಾಲ ಮುಂದುವರಿಯುತ್ತದೆ. ಪ್ರತಿಯೊಂದು ತರಗತಿಯ ಆರಂಭಕ್ಕೆ ಮುನ್ನ ಹಿಂದೆ ಬೋಧಿಸಿದ ವಿಷಯಗಳು ಅರ್ಥವಾಗಿದೆಯೆ? ಎಂದು ಪ್ರಶ್ನೆಗಳ ಮೂಲಕ ಧವನ್ ತಿಳಿದುಕೊಳ್ಳುತ್ತಿದ್ದರಂತೆ. ತಮ್ಮ ಬೋಧನಾವಧಿಯ ಪ್ರತಿಯೊಂದು ನಿಮಿಷವನ್ನೂ ಹೇಗೆ ಯಶಸ್ವಿಯಾಗಿ ಬಳಸಿಕೊಳ್ಳಬೇಕೆಂಬ ಕಲೆ ಧವನ್ ಅವರಿಗೆ ಕರಗತವಾಗಿತ್ತು. ವಿದೇಶಗಳಲ್ಲಿ ಪಡೆದು ಕೊಂಡು ಬಂದಿದ್ದ ಪರಿಣತಿಯನ್ನು ಇಲ್ಲಿನ ವ್ಯವಸ್ಥೆಗೆ ಅನುಗುಣವಾಗಿ ಅವರು ಬಳಸಿಕೊಂಡರು. ಪಾಠ ಮಾಡುವುದೆಂದರೆ ಬಾಯಿಮಾತನ್ನು ಒಪ್ಪಿಸುವುದಷ್ಟೇ ಅಲ್ಲ, ವಿದ್ಯಾರ್ಥಿಯೊಬ್ಬನ ಕಲ್ಪನಾಶಕ್ತಿಯನ್ನು ಚಿಗುರಿಸುದು ಎಂದು ಧವನ್ ನಂಬಿದ್ದರು. ಚಾತುರ್ಯ ಬೆರೆತ ಜ್ಞಾನ ಕನಸುಗಳೊಂದಿಗೆ ಕಲೆತಾಗ ಎಂಜಿನೀರಿಂಗ್ ಆಪ್ತವೆನಿಸುತ್ತದೆ ಎಂದವರು ನಂಬಿದ್ದರು. ಕೇವಲ ಆರೇ ವಾರಗಳಲ್ಲಿ ಧವನ್ ಅವರಿಗಿದ್ದ ನಂಬಿಕೆಯನ್ನು ಕಲಾಮ್ ನಿಜಗೊಳಿಸಿಬಿಟ್ಟರು. ಅತ್ಯಂತ ಚಿಕ್ಕ ಹುದ್ದೆಯಲ್ಲಿದ್ದ ವಿಜ್ಞಾನಾಸಕ್ತನೊಬ್ಬನಿಗೆ ಅತ್ಯಂತ ಹಿರಿಯ ಪ್ರೊಫೆಸರ್ ಒಬ್ಬರು ತಿಳಿಯಾಗಿ ಅರ್ಥವಾಗುವಂತೆ ಪಾಠ ಮಾಡಿದ್ದು ಗಮನಾರ್ಹ ಸಂಗತಿ. ಮುಂದೆ ಆತ ದೇಶದ ಅತ್ಯುನ್ನತ ವೈಜ್ಞಾನಿಕ ಹುದ್ದೆಗೇರಲು ಧವನ್ ಅವರೊಂದಿಗಿದ್ದ ಆ ಹಿಂದಿನ ಸಾಂಗತ್ಯವೇ ಪ್ರೇರಣೆಯಾಯಿತು. ಮುಂದಿನದು ಇತಿಹಾಸ. ಕಲಾಮ್ ಅವರನ್ನು ರಾಷ್ಟ್ರಪತಿ ಹುದ್ದೆಯ ತನಕ ಕೊಂಡೊಯ್ದದ್ದು ಬೋಧಕನ ಉತ್ಸಾಹ ಹಾಗೂ ವಿದ್ಯಾರ್ಥಿಯ ಆಸಕ್ತಿ. ಹೀಗಾಗಿಯೇ ಕಲಾಮ್ ನಿಂತೆಡೆಯಲ್ಲಿಯೇ ಮೇಷ್ಟ್ರ ವೇದಿಕೆಯನ್ನೇರುತ್ತಾರೆ. ನಿಷ್ಕಳಂಕ ಬೋಧನೋತ್ಸಾಹ ಅವರನ್ನು ಆವರಿಸಿಬಿಡುತ್ತದೆ.




‘ವಯಸ್ಸು ಯಾವುದೇ ಇರಲಿ. ಕನಸುಗಳು ಸದಾ ನಿಮ್ಮೊಂದಿಗಿರಲಿ. ಆ ಕನಸುಗಳು ಎಂದೆಂದಿಗೂ ದೊಡ್ಡದಾಗಿರಲಿ’. ಈ ಪಾಠವನ್ನು ಕಲಾಮ್ ತಪ್ಪದೆಯೇ ಬೋಧಿಸುತ್ತಿದ್ದರು, ಮುಂದಿಗೂ ಬೋಧಿಸುತ್ತಾರೆ. ‘ಕನಸುಗಳು ಸದಾ ಚಿಂತನೆಗಳಾಗಿ ಬದಲಾಗುತ್ತವೆ, ಆ ಚಿಂತನೆಗಳು ಮುಂದಿನ ಕ್ರಿಯೆಗಳಿಗೆ ದಾರಿಯಾಗುತ್ತವೆ’ - ಇದೊಂದು ಅಪ್ಪಟ ಕಲಾಮ್ ವಾದ ಸರಣಿಯೆಂದರೆ ತಪ್ಪಾಗಲಾರದು. ತಮ್ಮ ನಂಬಿಕೆಯ ನುಡಿಗಟ್ಟನ್ನು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಅವರು ಪಾಲಿಸಿಕೊಂಡು ಬಂದಿದ್ದಾರೆ. ಕಲಾಮ್ ಅವರ ಯಶೋಗಾಥೆಗೆ ಕನಸುಗಳ ಬಗ್ಗೆ ಅವರಿಗಿರುವ ವಿಶ್ವಾಸಾರ್ಹತೆಯೇ ಕಾರಣವೆಂದರೆ ತಪ್ಪಾಗಲಾರದು. ಇಡೀ ದೇಶದ ಜನತೆಯ ಮುಂದೆ ರಾಷ್ಟ್ರಪತಿ ಸ್ಥಾನದ ಬಗ್ಗೆ ಅತ್ಯಂತ ಗೌರವಯುತವಾದ ಕಲ್ಪನೆಯೊಂದನ್ನು ಬಿತ್ತಿ ಹೋದ ಕಲಾಮ್ ಮುಂದೇನು ಮಾಡುತ್ತಾರೆ? ಎಂಬ ಪ್ರಶ್ನೆಗೆ ಉತ್ತರ ಸುಲಭ. ಎಂದಿನಂತೆ ತಮ್ಮ ಬೋಧನೆಯನ್ನು ಮುಂದುವರಿಸುತ್ತಾರೆ. ಮಕ್ಕಳೊಂದಿಗೆ ಮತ್ತಷ್ಟು ಹೆಚ್ಚು ಬೆರೆಯುತ್ತಾರೆ. ಎಂಜಿನೀರಿಂಗ್ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುತ್ತಾರೆ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಪರಿಣತರಿಗೆ ಮತ್ತಷ್ಟು ಮಾರ್ಗದರ್ಶನ ಮಾಡುತ್ತಾರೆ. ‘ಬತ್ತಿದರೊಂದು ತೆರೆವುದು ಚಿಲುಮೆ, ತುಂಬಿಯೇ ಇರುವುದು ಬಾಳ್ಮೆಯ ಒಲುಮೆ’ ಎಂಬ ಕವಿನುಡಿ ಕಲಾಮ್ ಅವರನ್ನು ಕುರಿತೇ ಬರೆದದ್ದೆಂದು ಗುಮಾನಿ ಪಡುವಷ್ಟು ರೀತಿಯಲ್ಲಿ ಸ್ಫೂರ್ತಿ ತುಂಬುತ್ತಾರೆ.




ವಿಜ್ಞಾನವಷ್ಟೇ ಅರಿತಿದ್ದರೆ ಸಾಲದು, ತಂತ್ರಜ್ಞಾನವೂ ಬೇಕು. ಯಂತ್ರಗಳೊಂದಿಗೆ ಮನುಷ್ಯರ ನಿರ್ವಹಣೆಯೂ ಮುಖ್ಯ ಎಂದು ಬಲವಾಗಿ ನಂಬಿದ್ದ ಕಲಾಮ್ ಅವರು ದೇಶದ ರಕ್ಷಣಾ ಸಂಶೋಧನೆಯ ಚುಕ್ಕಾಣಿ ಹಿಡಿದಿದ್ದ ಕಾಲದಲ್ಲಿ ಸ್ವದೇಶಿ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ಸಿಕ್ಕಿತು. ಒಬ್ಬಂಟಿಗಳಾಗಿದ್ದಾಗ ತಮ್ಮ ಮೇಧಾಶಕ್ತಿ ಪ್ರದರ್ಶಿಸುವ ಭಾರತೀಯರು, ಒಗ್ಗೂಡಿ ಕ್ರಿಯಾತ್ಮಕ ಕೆಲಸ ಎಂದೂ ಮಾಡುವವರಲ್ಲ, ಎಂಬ ಆಪಾದನೆಯನ್ನು ಕಲಾಮ್ ಸುಳ್ಳು ಮಾಡಿದ್ದರು. ಅಪ್ಪಟ ಭಾರತೀಯ ಕ್ಷಿಪಣಿ ಮತ್ತು ವಿಮಾನಗಳು ಜಗತ್ತನ್ನು ನಿಬ್ಬೆರಗಾಗಿಸಿದ್ದು ಇವರ ನೇತೃತ್ವದಲ್ಲಿ. ಇಂಥ ಹೆಗ್ಗಳಿಕೆಯ ಕಲಾಮ್ ಮತ್ತೆ ಕಲಿಸಲು ಬರಲಿದ್ದಾರೆ. ಅವರ ಮಾರ್ಗದರ್ಶನದಲ್ಲಿ ದೇಶ ಮತ್ತಷ್ಟು ಸಂಖ್ಯೆಯಲ್ಲಿ ಕೋಟಾ ಹರಿನಾರಾಯಣ, ರೊದ್ದಂ ನರಸಿಂಹ, ಎ.ಆರ್.ಉಪಾಧ್ಯ, ವಾಸುದೇವ ಆತ್ರೆ, ಎನ್.ಬಾಲಕೃಷ್ಣನ್, ಯು.ಆರ್.ರಾವ್, ... ಮತ್ತಿತರರನ್ನು ಪಡೆಯಲಿ. ಕಲಾಮ್ ಅವರಷ್ಟೇ ಸಮರ್ಥರಾಗಿ ದೇಶದ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರವನ್ನು ಮುನ್ನಡೆಸಲಿ. ಇದು ನಿಮ್ಮೆಲ್ಲರ ಹಾರೈಕೆಯೂ ಹೌದಲ್ಲವೆ?






(ಕೃಪೆ : ವಿಜಯ ಕರ್ನಾಟಕ, 23-07-2007)