Monday, October 22, 2007

ಕದಡಿದ ನೀರಲಿ ಮೀನಿನ ಹೆಜ್ಜೆಯ ಹುಡುಕುತ .....

ದ್ಯದ ರಾಜಕೀಯ ಪರಿಸ್ಥಿತಿಯನ್ನು ವಿವರಿಸುವಾಗ ‘ಕ್ಷೋಭೆ’ (turbulence) ಎಂಬ ಪದವನ್ನು ವಿಪರೀತವಾಗಿ ಬಳಸಲಾಗುತ್ತಿದೆ. ಹಠಾತ್ ತಿರುವು ಹಾಗೂ ಸುಳಿಗಳನ್ನೊಳಗೊಂಡ ಯಾವುದೇ ಕ್ರಮ ರಹಿತ ಚಲನೆ ಕ್ಷೋಭೆ ಎನಿಸಿಕೊಳ್ಳುತ್ತದೆ. ಎಂಜಿನೀರಿಂಗ್ ಕ್ಷೇತ್ರದಲ್ಲಿ ದ್ರವ ಅಥವಾ ಅನಿಲದ ಏರುಪೇರಿನ ಚಲನೆಯ ಬಗ್ಗೆ ಪ್ರಸ್ತಾಪಿಸುವಾಗ ನೆನಪಿಗೆ ಬರುವ ಶಬ್ದ ಕ್ಷೋಭೆ. ಸ್ಥಳೀಯವಾಗಿ ದ್ರವವೊಂದರ ಒತ್ತಡ ಅಥವಾ ವೇಗ ಯಾವುದೇ ನಿರ್ದಿಷ್ಟ ಕ್ರಮವಿಲ್ಲದೆಯೆ ಏರುಪೇರಾದರೆ ಕ್ಷೋಭೆ ಸಂಭವಿಸುತ್ತದೆ. ದ್ರವದ ಕ್ಷೋಭೆಯನ್ನು ನೀವು ಸ್ವತಃ ಅನುಭವಿಸಬಹುದು. ಪಾತ್ರೆಯೊಂದರಲ್ಲಿಟ್ಟ ನೀರಲ್ಲಿ ಕೈಬೆರಳುಗಳನ್ನಿಳಿಸಿ ಬಿರುಸಾಗಿ ಅಲುಗಾಡಿಸಹೊರಟರೆ ಸಾಕು, ನೀರಿನ ಅಲೆಗಳು ಎತ್ತೆತ್ತಲೋ ತಾಂಡವವಾಡುತ್ತವೆ. ಅಷ್ಟೇಕೆ, ಮನೆಯ ಗಾಜಿನ ತೊಟ್ಟಿಯಲ್ಲಿ ಮೀನುಗಳು ಯರ್ರಾಬಿರ್ರಿ ಚಲಿಸಲಾರಂಭಿಸಿದರೆ ಆ ನೀರಿನಲ್ಲಿ ಕ್ಷೋಭೆ ತಲೆದೋರುತ್ತದೆ. ವಿಮಾನದಲ್ಲಿ ಪಯಣಿಸುವಾಗ ಒಮ್ಮೊಮ್ಮೆ ವಿಪರೀತ ಅಲುಗಾಟದ ಅನುಭವ ನಿಮಗುಂಟಾಗಬಹುದು. ಏನಾಯಿತೊ ಎಂಬ ಗಾಭರಿಯಲ್ಲಿ ನೀವಿರುವಾಗ ಚಾಲಕ ತಣ್ಣನೆಯ ದನಿಯಲ್ಲಿ ‘ವಿಮಾನ ಗಾಳಿಯ ಪ್ರಕ್ಷುಬ್ದ ಚಲನೆಗೆ ಸಿಲುಕಿದೆ, ಅಡಚಣೆಗಾಗಿ ಕ್ಷಮೆಯಿರಲಿ’ ಎಂದು ಸಮಾಧಾನಿಸಿರುತ್ತಾನೆ. ನ್ಯೂಟನ್ ನಿಯಮ ನಿಮಗೆ ಗೊತ್ತು. ಯಾವುದೇ ಒಂದು ವಸ್ತು ತನ್ನ ತಟಸ್ಥ ಸ್ಥಿತಿ ಅಥವಾ ನಿರ್ದಿಷ್ಟ ಚಲನೆಯಿಂದ ಆಚೆಗೆ ಬರಬೇಕಾದರೆ ಹೊರಗಿನಿಂದ ಬಲ ಪ್ರಯೋಗವಾಗಿರಬೇಕು. ಅಂದರೆ ಅಲ್ಲಿ ಶಕ್ತಿ ಸಂಚಯನವಾಗಿರಬೇಕು. ತಟಸ್ಥ ಸ್ಥಿತಿ ಅಥವಾ ನಿರ್ದಿಷ್ಟ ಚಲನೆಯಲ್ಲಿರುವ ನೀರು ಅಥವಾ ಗಾಳಿಗೆ ಪ್ರಕ್ಷುಬ್ದತೆ ಉಂಟು ಮಾಡಬೇಕಾದರೆ ಶಕ್ತಿಯನ್ನು ವ್ಯಯ ಮಾಡಿರಲೇಬೇಕು. ಅಂದರೆ ಕ್ಷೋಭೆಗೆ ಒಳಗಾದ ಗಾಳಿ ಅಥವಾ ನೀರಿನಲ್ಲಿ ಶಕ್ತಿ ಸಂವಹನೆಯಾಗಿರುತ್ತದೆ. ಹೀಗೆ ಸಂವಹನೆಯಾದ ಶಕ್ತಿ ಮತ್ತಷ್ಟು ಪ್ರಕ್ಷುಬ್ದತೆಗೆ ಕಾರಣವಾಗುತ್ತಾ ವ್ಯಯವಾಗುತ್ತದೆ.
ಮತ್ತೆ ಮೀನಿನ ಚಲನೆಯನ್ನು ಹಿಂಬಾಲಿಸೋಣ. ನದಿ, ಸಮುದ್ರಗಳಲ್ಲಿ ಹರಿದಾಡುವ ಮೀನುಗಳು ತಮ್ಮ ಸುತ್ತಲಿರುವ ಅಗಾಧ ಶಕ್ತಿ ಹೊಂದಿರುವ ಪ್ರಕ್ಷುಬ್ದ ಅಲೆಗಳಿಂದ ಒಂದಷ್ಟು ಶಕ್ತಿಯನ್ನು ಆವಾಹಿಸಿಕೊಳ್ಳುತ್ತವೆ. ಈ ಕಾರ್ಯಕ್ಕೆ ತಮ್ಮ ಈಜು ರೆಕ್ಕೆಗಳನ್ನು ಪ್ರಕ್ಷುಬ್ದ ಅಲೆಗಳ ಚಲನೆಗೆ ಅನುಗುಣವಾಗಿ ಬಾಗಿ, ಬಳುಕಿಸಿಕೊಳ್ಳುತ್ತವೆ. ಸಣ್ಣ ಪುಟ್ಟ ತೊಟ್ಟಿಗಳಲ್ಲಿ ಒಂದು ಮೀನು ಸೃಷ್ಟಿಸಿದ ಕ್ಷೋಭೆಗೆ ಕದಡಿದ ನೀರಿನಿಂದ ಮತ್ತೊಂದು ಮೀನು ಶಕ್ತಿಯನ್ನು ಸಂಚಯಿಸಿಕೊಳ್ಳುತ್ತದೆ. ಹೀಗೆ ಉತ್ಪತ್ತಿಯಾಗುವ ಶಕ್ತಿಯನ್ನು ಸಂಗ್ರಹಿಸಬಹುದೆ? ಎಂಬ ಪ್ರಶ್ನೆ ವಿಜ್ಞಾನಿಗಳನ್ನು ಬಹುದಿನಗಳಿಂದ ಕಾಡುತ್ತಿತ್ತು. ಇದಕ್ಕೆಂದೇ ಅಮೆರಿಕದ ಪಸಡೀನಾದಲ್ಲಿರುವ ‘ಕ್ಯಾಲಿಫೋರ್ನಿಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ವಿದ್ಯಾಸಂಸ್ಥೆಯಲ್ಲಿ ಒಂದು ಅಧ್ಯಯನ ಪೀಠ ಸ್ಥಾಪನೆಯಾಗಿತ್ತು. ನೀರಿನಲ್ಲಿ ವಾಸಿಸುವ ಜೀವಿಗಳಲ್ಲಿನ ಚಲನೆ, ಆ ಚಲನೆಗೆ ಅಗತ್ಯವಿರುವ ಶಕ್ತಿ ಸಂಚಯನೆ ಮುಂತಾದ ವಿಷಯಗಳ ಬಗ್ಗೆ ಇಲ್ಲಿ ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ. ಸುಳಿಗೆ ಸಿಲುಕಿದ ದ್ರವಗಳಿಂದ ಶಕ್ತಿಯನ್ನು ಸೆಳೆಯುವಂಥ ಯಂತ್ರಗಳನ್ನು ನಿರ್ಮಿಸುವ ಪ್ರಯತ್ನಗಳು ಇಲ್ಲಿ ನಡೆದಿವೆ. ಇದಕ್ಕೆಂದು ಮೀನು ಮತ್ತಿತರ ಜಲಚರಗಳ ನಡುಗೆಗಳ ಕಂಪ್ಯೂಟರ್ ಮಾದರಿಗಳನ್ನು ಸೃಷ್ಟಿಸಿ ಅವುಗಳ ಹಿಂದಿನ ‘ಗಣಿತ ಸೂತ್ರ’ಗಳನ್ನು ಅರ್ಥೈಸಿಕೊಳ್ಳುವ ಯತ್ನಗಳು ಸಾಗಿವೆ.
ಮೀನು ನಾವು ತಿಳಿದುಕೊಂಡಿರುವುದಕ್ಕಿಂತಲೂ ಬುದ್ಧಿವಂತ ಜಲಚರ. ಹರಿವ ನೀರಿನಲ್ಲಿ ಸುಳಿಗಳೇಳುವುದು ನಿಮಗೆ ಗೊತ್ತು. ಈ ಸುಳಿಗಳು ಒಂದು ಆವರ್ತನೆಯಲ್ಲಿ ಗಡಿಯಾರ ಸುತ್ತುವಂತೆ ಪ್ರದಕ್ಷಿಣೆ ಹಾಕಿದರೆ ಮತ್ತೊಂದು ಆವರ್ತನೆಯಲ್ಲಿ ಅಪ್ರದಕ್ಷಿಣೆ ಹಾಕುತ್ತವೆ. ಇಂಥ ಉಂಗುರದಲೆಗಳಲ್ಲಿ ಹುದುಗಿರುವ ಶಕ್ತಿಯನ್ನು ತಮ್ಮ ಚಲನೆಗೆ ಅನುಕುಳವಾಗುವಂತೆ ಬಳಸಿಕೊಳ್ಳಲು ಮೀನುಗಳು ಒಂದು ಬದಿಯಿಂದ ಮತ್ತೊಂದು ಬದಿಗೆ ಚಲಿಸತೊಡಗುತ್ತವೆ. ಯಾವುದೇ ಶ್ರಮವಿಲ್ಲದೆಯೆ ಸುಳಿಗಳಿಂದ ಉಂಟಾದ ಶಕ್ತಿಯನ್ನು ತಮ್ಮ ಚಲನೆಗೆ ಮೀನುಗಳು ಬಳಸಿಕೊಳ್ಳುತ್ತವೆ. ಇದೇ ರೀತಿ ಯಂತ್ರಗಳು ಶಕ್ತಿಯನ್ನು ತುಂಬಿಕೊಳ್ಳಬಯಸಿದರೆ ಅವು ಥೇಟ್ ಮೀನುಗಳಂತೆ ಸುಳಿಗಳಿಗನುಗುಣವಾಗಿ ಬದಿಯಿಂದ ಬದಿಗೆ ಚಲಿಸಬೇಕು. ಅವುಗಳಿಗಿರುವಂತೆಯೇ ಬಾಗಿ ಬಳುಕಬಲ್ಲ ರೆಕ್ಕೆಗಳನ್ನು ಅಂಟಿಸಿಕೊಂಡಿರಬೇಕು. ಮುಂದಿನ ಜಲಧಾರೆ ಯಾವ ರೀತಿ ಅಮರಿಕೊಳ್ಳಬಹುದೆಂದು ನಿರ್ಧರಿಸಿಕೊಂಡು ತನ್ನ ಹೆಜ್ಜೆಯನ್ನು ಸೂಕ್ಷ್ಮ ಹಾಗೂ ಸುರಕ್ಷವಾಗಿ ಮುಂದಿಡುವ ಚಾಕಚಕ್ಯತೆಯನ್ನೂ ಅವು ಹೊಂದಿರಬೇಕು. ಸುಳಿಗೆ ಸಿಲಿಕಿದೊಡನೆಯೆ ಅದರಿಂದ ಸಾಧ್ಯವಾದಷ್ಟು ಹೆಚ್ಚಿನ ಶಕ್ತಿಯನ್ನು ಹೀರಿಕೊಳ್ಳುವ ಸಾಮರ್ಥ್ಯ ಅವುಗಳಿಗಿರಬೇಕು. ಇಲ್ಲಿ ನೆನಪಿಡಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ, ಎದುರಾಗುವ ಅಲೆಗಳಿಗೆ ಅಥವಾ ಸುಳಿಗೆ ಮೀನು ಹೇಗೆ ತನ್ನ ಮೂತಿಯ ಕೋನವನ್ನು ಬದಲಿಸಿಕೊಂಡು ಮುಂದೆ ಸಾಗುವುದೋ ಅದೇ ರೀತಿ ಈ ಯಂತ್ರಗಳು ಮುನ್ನಡೆ ಸಾಧಿಸಿದಲ್ಲಿ ಮಾತ್ರ ಶಕ್ತಿ ಸಂವಹನೆಯಾಗಬಲ್ಲದು.
ಇದರಲ್ಲೇನು, ವಿಶೇಷ? ಗಾಳಿಯಲೆಗಳಿಂದ ಶಕ್ತಿ ಉತ್ಪಾದಿಸುವ ಯಂತ್ರಗಳನ್ನು ನಾವು ಸೃಷ್ಟಿಸಿಕೊಂಡಿಲ್ಲವೆ? ಎಂದು ಪ್ರಶ್ನಿಸುವ ಮುನ್ನ ಯೋಚಿಸಿ ನೋಡಿ. ಈ ಯಂತ್ರಗಳು ಕೇವಲ ಸರಾಗವಾಗಿ ಹರಿಯುವ ಗಾಳಿಯ ಬಲದಿಂದ ಮಾತ್ರ ಶಕ್ತಿಯನ್ನು ಉತ್ಪಾದಿಸಿಕೊಳ್ಳಬಲ್ಲವು. ಪ್ರಕ್ಷುಬ್ದವಾದ ವಾತಾವರಣದಲ್ಲಿ ಅವು ಕಾರ್ಯನಿರ್ವಹಿಸಲಾರವು. ನಮ್ಮ ನಗರ ಪ್ರದೇಶಗಳಲ್ಲಿ ಎತ್ತರೆತ್ತರದ ಕಟ್ಟಡಗಳಿರುತ್ತವೆ. ಈ ಕಟ್ಟಡಗಳ ಮೇಲ್ತುದಿಯಲ್ಲಿ ನಿಂತರೆ ಬೆಕ್ಕಸ ಬೆರಗಾಗಿಸುವ ಗಾಳಿಯ ಹರಿದಾಟ ಅನುಭವಕ್ಕೆ ಬಂದೀತು. ಆದರೆ ಇಲ್ಲಿ ಹರಿದಾಡುವುದು ಪ್ರಕ್ಷುಬ್ದ ಅಲೆಯ ಗಾಳಿ, ವಿಪರೀತು ಸುಳಿಗಳನ್ನು ಹೊಂದಿರುವಂಥದು. ಹೀಗಾಗಿ ಇಂಥ ಕಟ್ಟಡಗಳ ತುದಿಯಲ್ಲಿ ಗಾಳಿಯಂತ್ರಗಳನ್ನು ಸ್ಥಾಪಿಸಿ, ಶಕ್ತಿ ಉತ್ಪಾದಿಸಲಾಗುವುದಿಲ್ಲ. ಇಲ್ಲಿ ಬೇಕಾಗಿರುವುದು ಮೀನಿನಂತೆ ಸುಳಿಗಳಿಂದ ಶಕ್ತಿ ಹೀರಬಲ್ಲ ಯಂತ್ರಗಳು.
ಕ್ಯಾಲಿಫೋರ್ನಿಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಜಾನ್ ಡಾಬಿರಿ ಎಂಬ ಪ್ರಾಧ್ಯಾಪಕರ ನೇತೃತ್ವದಲ್ಲಿ ವಿಶಿಷ್ಟವಾದ ಅಧ್ಯಯನವೊಂದು ಮುನ್ನಡೆ ಸಾಧಿಸಿದೆ. ಪ್ರಕ್ಷುಬ್ದತೆಗೆ ಸಿಲುಕಿದ ನೀರು ಹಾಗೂ ಗಾಳಿ ಎರಡರಲ್ಲೂ ಕಾರ್ಯನಿರ್ವಹಿಸಿ ಶಕ್ತಿ ಉತ್ಪಾದಿಸಬಲ್ಲ ಪುಟ್ಟ ಪುಟ್ಟ ಯಂತ್ರಗಳ ಸೃಷ್ಟಿ ಕಾರ್ಯ ಇಲ್ಲಿ ನಡೆಯುತ್ತಿದೆ. ಸ್ವಾಭಾವಿಕವಾಗಿ ಉತ್ಪತ್ತಿಯಾಗುವ ಸುಳಿಗಳಲ್ಲಿ ಶಕ್ತಿ ಹೇಗೆ ಕೇಂದ್ರೀಕೃತವಾಗುತ್ತದೆ, ಅದನ್ನು ಹೊರತೆಗೆಯುವುದು ಹೇಗೆ? ಎಂದು ಅರಿತುಕೊಳ್ಳಲು ಇಲ್ಲಿ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಇಲ್ಲಿ ಕೇವಲ ಮೀನೊಂದರ ಮರುಸೃಷ್ಟಿಯಾಗುತ್ತಿಲ್ಲ, ಚಲನೆಗೆ ಸಂಬಂಧಿಸಿದಂತೆ ಮೀನಿನ ಹೊರಮೈನ ಹೊಯ್ದಾಟ, ಅವುಗಳ ನಿರ್ದಿಷ್ಟ ಗತಿ ಮತ್ತಿತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮೀನಿಗಿಂತಲೂ ಹೆಚ್ಚು ಕಾರ್ಯಕ್ಷಮತೆಯ ಯಂತ್ರವನ್ನು ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ಸಾಮಾನ್ಯ ಗಾಳಿಯಂತ್ರಗಳು ಉತ್ಪಾದಿಸುವಷ್ಟು ಶಕ್ತಿಯನ್ನು ಇಂಥ ಯಂತ್ರಗಳು ಉತ್ಪಾದಿಸಲು ಸಾಧ್ಯವಾಗದು ಎಂಬ ಮಾತು ದಿಟ. ಆದರೆ ಸುಳಿಗಾಳಿಯಲ್ಲಿ ಸಾಮಾನ್ಯ ಗಾಳಿಯಂತ್ರಗಳು ಕೆಲಸ ಮಾಡದೆಯೆ ಇರುವುದರಿಂದ ಈ ಬಗೆಯ ಹೋಲಿಕೆ ಸಲ್ಲ.
ಇಷ್ಟಕ್ಕೂ ಈ ಬಗೆಯ ಪ್ರಯೋಗಗಳ ಮಹತ್ವವೇನು? ಎಂಬ ಪ್ರಶ್ನೆ ನಿಮ್ಮ ಮುಂದಿರಬಹುದು. ರಾಕೆಟ್‍ಗಳಿಂದ ಹಿಡಿದು ನಮ್ಮ ಗಾಳಿಯಂತ್ರದವರೆಗೆ ಸ್ತಿಮಿತ ಸ್ಥಿತಿಯಲ್ಲಿರುವ ದ್ರವಗಳ ಪರಿಚಲನೆಯ ಸೂತ್ರಗಳು ಉಪಯೋಗಕ್ಕೆ ಬರುವುದು ನಿಮಗೆ ಗೊತ್ತು. ಆದರೆ ಪ್ರಕೃತಿಯಲ್ಲಿನ ಬಹುತೇಕ ಜೀವಿಗಳ ಚಲನೆ ಹಾಗೂ ನೈಸರ್ಗಿಕ ವಿದ್ಯಮಾನಗಳಲ್ಲಿ ಸ್ತಿಮಿತ ಸ್ಥಿತಿಯಲ್ಲಿಲ್ಲದಿರುವ ದ್ರವಗಳದೇ ಮೇಲಾಟ. ಅದು ನಮ್ಮ ದೇಹದಲ್ಲಿ ರಕ್ತ ಪರಿಚಲನೆಗೆ ನೆರವಾಗುವ ಹೃದಯವೆಂಬ ಪಂಪ್‍ನ ಕಾರ್ಯವಿರಬಹುದು ಅಥವಾ ನೀರಿನಾಳದಲ್ಲಿ ಚಡಪಡಿಸುವ ಅಂಬಲಿ ಮೀನಿನ ಹರಿದಾಟವಿರಬಹುದು. ಎಲ್ಲವೂ ಗಣಿತ ಸೂತ್ರಗಳಿಗೆ, ಕಂಪ್ಯೂಟರ್ ಮಾದರಿಗಳಿಗೆ ಸುಲಭವಾಗಿ ಸಿಗದ ಪರಿಚಲನೆಗಳು. ಇವುಗಳನ್ನು ಅರ್ಥೈಸಿಕೊಂಡರೆ ನಮ್ಮ ಸುಗಮ ಜೀವನಕ್ಕೆ ಅನುಕೂಲ ತರುವಂಥ ಅನೇಕಾನೇಕ ಯಂತ್ರಗಳನ್ನು ಸೃಷ್ಟಿಸಿಕೊಳ್ಳಬಹುದು. ಈ ಒಂದು ಮಹದಾಸೆಯಿಂದ ಕ್ಯಾಲಿಫೋರ್ನಿಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳು ಜಗತ್ತಿನ ಅನೇಕ ಸಂಶೋಧನಾಲಯಗಳ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಬೃಹತ್ ಕಾರ್ಯವೊಂದನ್ನು ಹಮ್ಮಿಕೊಂಡಿದ್ದಾರೆ.
ಯಾವುದೇ ಒಂದು ಕ್ಷಿಪ್ರ ಚಲನೆಗೆ ಆ ವಸ್ತುವಿನ ಉದ್ದ ಹಾಗೂ ವ್ಯಾಸದ ನಡುವಿನ ಅನುಪಾತ ಮುಖ್ಯವಾಗುತ್ತದೆ. ಉದಾಹರಣೆಗೆ ಸಮುದ್ರದಾಳಕ್ಕೆ ಇಳಿಯುವ ಈಜುಗಾರರು ತಮ್ಮ ವೇಗದ ಚಲನೆಗೆ ಬೆನ್ನಿಗೆ ರಾಕೆಟ್‍ನಂಥ ಶಕ್ತಿ ಸಂವಾಹಕವನ್ನು ಹೊತ್ತುಕೊಂಡಿರುತ್ತಾರೆ. ಅವರು ಮುನ್ನಡೆಯುವ ಭಂಗಿ, ವೇಗವನ್ನು ನಿರ್ಧರಿಸಬಲ್ಲ ಪ್ರಮುಖ ಅಂಶವಾಗುತ್ತದೆ. ಅಂತೆಯೇ ಸಮುದ್ರದಾಳದಲ್ಲಿ ಚಲಿಸುವ ಸಬ್‍ಮರೀನ್‍ಗಳ ಆಕಾರ ಹಾಗೂ ಗಾತ್ರವೂ ಸಹಾ ಅವುಗಳು ಚಲಿಸುವ ವೇಗವನ್ನು ನಿಯಂತ್ರಿಸುತ್ತವೆ. ಸಮುದ್ರದಲ್ಲಿನ ನೀರು ಸ್ತಿಮಿತವಲ್ಲದ ಸ್ಥಿತಿಯಲ್ಲಿರುವಂತೆ ವಾತಾವರಣದಲ್ಲಿನ ಗಾಳಿಯೂ ಸ್ತಿಮಿತದಲ್ಲಿರುವುದಿಲ್ಲ. ಆದ್ದರಿಂದ ವಿಮಾನ ಅಥವಾ ಯಾವುದೇ ಹಾರುವ ಯಂತ್ರಗಳ ವಿನ್ಯಾಸ ಮಾಡುವಾಗ ಆಕಾರ, ಗಾತ್ರ ಹಾಗೂ ಕೋನಗಳನ್ನು ಲೆಕ್ಕ ಹಾಕಿ ವಿನ್ಯಾಸಗೊಳಿಸಲಾಗಿರುತ್ತದೆ.
ಎಲ್ಲವೂ ಸರಿ, ಸದ್ಯಕ್ಕೆ ಮೀನಿನಂಥ ಯಂತ್ರಗಳ ಸೃಷ್ಟಿ ಕಾರ್ಯ ಎಷ್ಟು ಪ್ರಗತಿ ಸಾಧಿಸಿದೆ? ನಾಲ್ಕು ವರ್ಷಗಳ ಹಿಂದೆ ಜಗದ್ವಿಖ್ಯಾತ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಮೊದಲ ಬಾರಿಗೆ ಇಂಥ ಯಂತ್ರಗಳನ್ನು ನಿರ್ಮಿಸಿದ ವಿಜ್ಞಾನಿ ಜೇಮ್ಸ್ ಲಿಯಾವೊ ಅವರ ಮಾತು ಇಲ್ಲಿ ಮುಖ್ಯವಾಗುತ್ತದೆ. ‘ಯೋಜನೆ ನಿರ್ದಿಷ್ಟ ಗತಿಯಲ್ಲಿ ಮುನ್ನಡೆದಿದೆ. ಈ ಕೆಲಸದ ವ್ಯಾಪ್ತಿ ಹೆಚ್ಚುತ್ತಿದ್ದು, ಬಹಳಷ್ಟು ಯಂತ್ರಗಳ ಸೃಷ್ಟಿಗೆ ಇದು ಪ್ರೇರಕವಾಗುತ್ತಿದೆ. ಸದ್ಯಕ್ಕೆ ನಿರ್ಮಾಣವಾಗುತ್ತಿರುವ ಯಂತ್ರದ ಮಾದರಿ ಸರಳವಾಗಿದೆ. ಆದರೆ ಜಲಚರದ ಚಲನೆಗಳೆಲ್ಲವನ್ನೂ ಮೈಗೂಡಿಸಿಕೊಂಡ ಪೂರ್ಣ ಪ್ರಮಾಣದ ಯಂತ್ರಗಳ ನಿರ್ಮಾಣಕ್ಕೆ ಇನ್ನೂ ಸಮಯ ಪಕ್ವವಾಗಿಲ್ಲ. ಏಕೆಂದರೆ ದ್ರವ ಹಾಗೂ ಮೀನಿನ ಚಲನೆಗಳೆರಡನ್ನೂ ಒಂದೇ ವ್ಯಾಪ್ತಿಗೆ ಸಿಲುಕಿಸುವುದು ಅಷ್ಟು ಸುಲಭವಲ್ಲ’. ಲಿಯಾವೊ ಹೇಳಿರುವ ಮಾತುಗಳಲ್ಲಿ ಸತ್ಯವಿದೆ. ಮೀನುಗಳು ತಮ್ಮ ಮುಂದಿರುವ ಸುಳಿಯೆಂಥದು? ಎಂಬುದನ್ನು ಗ್ರಹಿಸಿ, ತನ್ನ ಚಲನೆಯ ಗತಿ, ದಿಸೆಗಳನ್ನು ಬದಲಿಸಿಕೊಳ್ಳುತ್ತವೆ. ಈ ಬಗೆಯ ಚೂಟಿತನವನ್ನು ಯಂತ್ರಗಳಲ್ಲಿ ಮೈಗೂಡಿಸದ ಹೊರತು ಯಂತ್ರಗಳ ಕಾರ್ಯಕ್ಷಮತೆಯನ್ನು ಹಿಗ್ಗಿಸಲಾಗುವುದಿಲ್ಲ. ಹಾಗೆಂದ ಮಾತ್ರಕ್ಕೆ ನಿರಾಶರಾಗಬೇಕಿಲ್ಲ. ಜಗತ್ತಿನೆಲ್ಲೆಡೆ ವಿವಿಧ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪ್ರಯೋಗಗಳನ್ನು ಗಮನಿಸಿದರೆ ಈ ಕೆಲಸ ಕೆಲವೇ ವರ್ಷಗಳಲ್ಲಿ ಪೂರ್ಣಗೊಳ್ಳುವುದರಲ್ಲಿ ಸಂಶಯವಿಲ್ಲ.
ಮೀನಿನ ಹೆಜ್ಜೆಯನ್ನು ಗುರುತಿಸುವುದೇ ಕಷ್ಟದ ಕೆಲಸ. ಅದರಲ್ಲೂ ಕದಡಿದ ನೀರಿನಲ್ಲಿ ಮೀನಿನ ಪರಿಚಲನೆಯನ್ನು ಗ್ರಹಿಸುವುದು ಮತ್ತಷ್ಟು ಕಷ್ಟದ ಕೆಲಸ. ಹೀಗೆ ಗ್ರಹಿಸಿದ ಚಲನೆಯ ಹಿಂದಿನ ಗಣಿತ ಸೂತ್ರಗಳನ್ನು ಅರ್ಥೈಸಿಕೊಂಡು ಅವುಗಳ ಆಧಾರದ ಮೇಲೆ ಕಂಪ್ಯೂಟರ್ ಮಾದರಿಗಳನ್ನು ಮರುಸೃಷ್ಟಿಸುವುದು ಮಗದಷ್ಟು ಕ್ಲಿಷ್ಟದ ಕಾರ್ಯ. ಆನಂತರ ಅವುಗಳ ನೆರವಿನಿಂದ ಮೀನುಗಳಂತೆ ಕಾರ್ಯನಿರ್ವಹಿಸುವ ಯಂತ್ರವನ್ನು ವಿನ್ಯಾಸಗೊಳಿಸುವುದು ಎಂಜಿನೀರ್‌ಗಳ ಮುಂದಿರುವ ಅತಿ ದೊಡ್ಡ ಸವಾಲು. ಈ ಸವಾಲನ್ನು ಮುಂದಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿ-ತಂತ್ರಜ್ಞರನ್ನು ನಿಜವಾದ ಆಶಾವಾದಿಗಳೆನ್ನಬೇಕು.
(ಕೃಪೆ: ವಿಜಯ ಕರ್ನಾಟಕ; 22-10-2007)

6 comments:

sunaath said...

ದ್ರವದಲ್ಲಿ ಸುಳಿ, ಗಾಳಿಯಲ್ಲಿ ಸುಳಿ ಇದ್ದಂತೆ ಗುರುತ್ವ ಕ್ಷೇತ್ರದಲ್ಲೂ ಸುಳಿ ಇರಬಹುದೆ?

ಶ್ರೀನಿಧಿ.ಡಿ.ಎಸ್ said...

ನಮಸ್ತೇ ಹಾಲ್ದೊಡ್ಡೇರಿ ಸರ್,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಶ್ರೀನಿಧಿ.ಡಿ.ಎಸ್.

Anonymous said...

Hello. This post is likeable, and your blog is very interesting, congratulations :-). I will add in my blogroll =). If possible gives a last there on my blog, it is about the Celular, I hope you enjoy. The address is http://telefone-celular-brasil.blogspot.com. A hug.

Anonymous said...

Your efforts to enlighten all the Kannada readers of all the latest developments in science and technology is commendable.

I missed reading your articles in Vijay Karnataka as I am in Mumbai presently.I happened to find your blog and was really happy to read one of your articles after a long time.

Anonymous said...

mounakanive.blogspot.com

Unknown said...

ನಿಮ್ಮ ಬರಹ ಹಾಗು ಶೈಲಿ ನಮಗೆ ಅಚ್ಚು ಮೆಚ್ಚಿನದು...

ಇಂತಹ ನಿಮ್ಮ ಅನೇಕ ಅಂಕಣಗಳನ್ನು ಬರೆದೆರುವ ನಿಮಗೆ ನಮ್ಮ ವಂದನೆಗಳು......